ಚನ್ನಿ ಸಂಬಂಧಿ ಬಂಧನ: ಕಾಂಗ್ರೆಸ್ ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಸಿಧು ಮಾತು
ಚಂಡೀಗಢ, ಫೆಬ್ರವರಿ 6: ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ಉತ್ತಮ ಹಿನ್ನೆಲೆಯುಳ್ಳ ಹಾಗೂ ಪ್ರಾಮಾಣಿಕರನ್ನು ಕಾಂಗ್ರೆಸ್ ಆಯ್ಕೆ ಮಾಡಬೇಕು ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ನಮಗೆ ಪ್ರಾಮಾಣಿಕ ಅಭ್ಯರ್ಥಿ ಬೇಕು, ನಮ್ಮ ಆಯ್ಕೆಯ ಮೇಲೆ ನಮ್ಮ ಹಣೆಬರಹ ನಿರ್ಧಾರಗೊಂಡಿದೆ. ಮಾಫಿಯಾ ನಂಟು ಹೊಂದಿರುವ ವ್ಯಕ್ತಿಯು ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ, ಮಾಫಿಯಾ ನಂಟು ಹೊಂದಿರುವ ವ್ಯಕ್ತಿಯೇ ಮುಖ್ಯಮಂತ್ರಿಯಾದರೆ ಮಾಫಿಯಾವನ್ನು ಮಟ್ಟ ಹಾಕುವುದು ಯಾರು ಎಂದು ಸಿಧು ಪ್ರಶ್ನೆ ಮಾಡಿದ್ದಾರೆ.
ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರ ಸೋದರಳಿಯನನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸಿಧು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆಯಲಿರುವ ಮೆರವಣಿಗೆಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆ ಇದೆ.
ನೈತಿಕರಾಗಿಲ್ಲದ, ಭ್ರಷ್ಟಾಚಾರ ಮತ್ತು ಕೆಲವು ಮಾಫಿಯಾ ನಂಟು ಹೊಂದಿರುವವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇ ಆದಲ್ಲಿ ಜನರು ಬದಲಾವಣೆಗಾಗಿ ಮತ ಚಲಾಯಿಸಬಹುದು, ಸೋಲಿಸಬಹುದು ಎಂದು ಸಿಧು ಹೇಳಿರುವುದಾಗಿ ವರದಿ ಮಾಡಲಾಗಿದೆ.
ವರಿಷ್ಠರು ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಪಂಜಾಬ್ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಊಹಾಪೋಹಗಳ ನಡುವೆ, ತಮ್ಮ ಪತಿ ಹಿರೋ, ಚುನಾವಣೆಗಾಗಿ ವರಿಷ್ಠರು ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿದ್ದಾರೆ ಎಂಬುದು ವಿಷಯವಲ್ಲ ಎಂದು ನವಜೋತ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಹೇಳಿದ್ದಾರೆ.
ಫೆಬ್ರವರಿ 6 ರಂದು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಹೊರಬೀಳಲಿದೆ ಎಂದು ಛನ್ನಿ ಗುರುವಾರ ಹೇಳಿದ್ದರು. ಪಂಜಾಬ್ ನಲ್ಲಿ ಫೆಬ್ರವರಿ 20 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಪಂಜಾಬ್ ನಲ್ಲಿ ನಾಳಿದ್ದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಘೋಷಿಸಲು ಅಣಿಯಾಗಿರುವಂತೆಯೇ ಸಿಧು ಈ ರೀತಿಯ ಹೇಳಿಕೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಂದುವರೆದು, ಉತ್ತಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅವಕಾಶ ಪಂಜಾಬ್ ಮತದಾರರ ಕೈಯಲಿದೆ ಎಂದು ಸಿಧು ಹೇಳಿದ್ದಾರೆ.
ಒಂದು ವೇಳೆ ಹೊಸ ಪಂಜಾಬ್ ಮಾಡಬೇಕಾದರೆ, ಅದು ಮುಖ್ಯಮಂತ್ರಿ ಕೈಯಲಿ ಇರಲಿದೆ. ಈ ಬಾರಿ ಮುಖ್ಯಮಂತ್ರಿಯನ್ನು ನೀವು ಆಯ್ಕೆ ಮಾಡಿದರೆ, ಪಕ್ಷದ ವರಿಷ್ಠರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ. ನಿಮಗೆ ಅಂತಹ ಸಿಎಂ ಬೇಕಾ? ಎಂದು ಬೆಂಬಲಿಗರಿಂದ ಜಯ ಘೋಷಣೆಗಳ ಮಧ್ಯೆ ಹೇಳಿದರು.












Click it and Unblock the Notifications