ರಾಸು ಸಗಣಿ ಹಾಕುವುದನ್ನೇ ಕಾಯುತ್ತಿದೆ ಚಂಡೀಗಢದ ಈ ಕುಟುಂಬ
ಚಂಡೀಗಢ, ಅಕ್ಟೋಬರ್ 24: ಇದೊಂದು ವಿಚಿತ್ರ ಘಟನೆ. ಹರಿಯಾಣದ ಕುಟುಂಬವೊಂದು ರಾಸುವೊಂದು ಸಗಣಿ ಹಾಕುವುದನ್ನೇ ಮೂರು ದಿನದಿಂದ ಕಾಯುತ್ತಾ ಕೂತಿದೆ. ಯಾವಾಗೆಲ್ಲ ಸಗಣಿ ಹಾಕುತ್ತೋ ಆಗೆಲ್ಲ ಲಗುಬಗೆಯಿಂದ ಹುಡುಕಲು ಆರಂಭಿಸಲಾಗುತ್ತದೆ; ಅದು ಏಕೆಂದರೆ ರಾಸು ನುಂಗಿದ ನಲವತ್ತು ಗ್ರಾಮ್ ನಷ್ಟು ಚಿನ್ನಕ್ಕಾಗಿ.
ಆಡುಗೆಮನೆಯ ಕೆಲವು ಪದಾರ್ಥಗಳ ಜತೆಗೆ ಗೊತ್ತಿಲ್ಲದೆ ಚಿನ್ನವನ್ನು ಕೂಡ ಈ ಕುಟುಂಬ ಬಿಸಾಡಿತ್ತು. ಅದನ್ನು ಈ ರಾಸು ತಿಂದಿದೆ. ಆ ನಂತರ ಅಚಾತುರ್ಯವು ಗಮನಕ್ಕೆ ಬಂದು, ಆ ಪ್ರಾಣಿಗೆ ಇಷ್ಟವಾದದ್ದನ್ನೆಲ್ಲ ಮೇಯಲು ನೀಡಿ, ತಾವು ಕಳೆದುಕೊಂಡ ಚಿನ್ನ ವಾಪಸ್ ಸಿಕ್ಕೀತೆ ಎಂದು ಕಾಯುತ್ತಿದ್ದಾರೆ.
ಸ್ಥಳೀಯ ವ್ಯಾಪಾರಿ ಜನಕ್ ರಾಜ್ ತಮ್ಮ ಆಭರಣವನ್ನು ತೆಗೆದು, ಒಂದು ಬಟ್ಟಲಲ್ಲಿ ಹಾಕಿ, ಅಡುಗೆಮನೆಯಲ್ಲಿ ಇಟ್ಟಿದ್ದಾರೆ. ಆ ನಂತರ ಅದನ್ನು ಗಮನಿಸದ ಯಾರೋ ಒಬ್ಬರು ತರಕಾರಿ ಹಸಿ ಕಸವನ್ನು ತುಂಬಿ, ಹೊರ ಹಾಕಿದ್ದಾರೆ. ಒಂದು ಕಿವಿಯ ಓಲೆ ಮನೆ ಹೊರಗೆ ಸಿಕ್ಕ ಮೇಲೆ ಆಭರಣಗಳು ಇಲ್ಲ ಎಂಬುದು ಗಮನಕ್ಕೆ ಬಂದಿದೆ.

ಆ ಕೂಡಲೇ ಮನೆಯ ಹೊರಗಿನ ಸಿಸಿಟಿವಿ ಫೂಟೇಜ್ ನೋಡಿದಾಗ ತರಕಾರಿಯ ಹಸಿ ಕಸದ ಜತೆಗೆ ಇದ್ದ ಆಭರಣವನ್ನೂ ರಾಸು ತಿಂದಿರುವುದು ಗೊತ್ತಾಗಿದೆ. ರಾಸುವನ್ನು ನಾಲ್ಕು ತಾಸು ಹುಡುಕಾಡಿ, ಅದನ್ನು ತಂದು ಮನೆಯಲ್ಲಿ ಕಟ್ಟಿಹಾಕಿದ್ದಾರೆ. ಇದೀಗ ಸಗಣಿ ಜತೆಗೆ ಆಭರಣ ಆಚೆ ಬರುತ್ತದೆ ಎಂದು ಕಾಯಲಾಗುತ್ತದೆ.
ಚಿನ್ನಕ್ಕಾಗಿ ಸಗಣಿಯನ್ನು ಹುಡುಕುತ್ತಿದ್ದೇವೆ. ಇದು ಬಹಳ ಹಿಂಸೆ ಅನಿಸುವ ವಿಚಾರ. ಆದರೆ ನಮಗೆ ಬೇರೆ ದಾರಿ ಇಲ್ಲ ಎಂದು ಜನಕ್ ರಾಜ್ ಹೇಳಿದ್ದಾರೆ. ಇನ್ನು ಈ ಸುದ್ದಿ ಹರಿದಾಡಲು ಆರಂಭಿಸಿದ ಮೇಲೆ ಜನರು ಟ್ವಿಟ್ಟರ್ ನಲ್ಲಿ ನಾನಾ ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದು, ವಿಚಿತ್ರ ಸಲಹೆಗಳನ್ನು ನೀಡುತ್ತಿದ್ದಾರೆ.
ಇನ್ನು ಈ ಬಗ್ಗೆ ವೈದ್ಯರೊಬ್ಬರು ಮಾತನಾಡಿದ್ದು, ಮೊದಲಿಗೆ ಹಸುವಿಗೆ ಎಕ್ಸ್ ರೇ ಮಾಡಿಸಬೇಕು. ಆಗ ಚಿನ್ನವನ್ನು ನುಂಗಿದೆಯೋ ಇಲ್ಲವೋ ನೋಡಬೇಕು. ಅದು ಎಲ್ಲಿದೆ ಎಂದು ಕಂಡ ಮೇಲೆ ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆಯಬೇಕು. ಇದು ಸಂಕೀರ್ಣವಾದ ವಿಷಯ ಎಂದಿದ್ದಾರೆ.












Click it and Unblock the Notifications