ಯಾವ ಬಟನ್ ಒತ್ತಿದರೂ ನಮಗೇ ಮತ ಬೀಳೋದು: ಬಿಜೆಪಿ ಶಾಸಕನ ವೈರಲ್ ವಿಡಿಯೋ
ಚಂಡೀಗಡ, ಅಕ್ಟೋಬರ್ 21: ವಿದ್ಯುನ್ಮಾನ ಮತ ಯಂತ್ರದಲ್ಲಿ ವಂಚನೆ ಮಾಡಿ ಬಿಜೆಪಿ ಮತಗಳನ್ನು ತನಗೆ ಬೀಳುವಂತೆ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ನಡುವೆಯೇ ಬಿಜೆಪಿಯ ಶಾಸಕರು ಅದಕ್ಕೆ ಪೂರಕ ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಸೋಮವಾರ ವಿಧಾನಸಭೆ ಚುನಾವಣೆಗಳು ನಡೆಯುತ್ತಿವೆ. ಈ ವೇಳೆಯೇ ಹರಿಯಾಣದ ಬಿಜೆಪಿ ಶಾಸಕ ಬಕ್ಷೀಶ್ ಸಿಂಗ್ ವಿರ್ಕ್ ಇವಿಎಂನಲ್ಲಿ ಯಾವ ಗುಂಡಿ ಒತ್ತಿದರೂ ಬಿಜೆಪಿಗೇ ಮತ ಬೀಳುತ್ತದೆ ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.
ಇವಿಎಂ ಹ್ಯಾಕ್ ಮಾಡುವ ಮೂಲಕ ಬಿಜೆಪಿ ಚುನಾವಣೆಗಳಲ್ಲಿ ಗೆಲ್ಲುತ್ತಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ಗೆ ಇದು ಹೊಸ ಅಸ್ತ್ರವಾಗಿ ದೊರಕಿದೆ. ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ, 'ಬಿಜೆಪಿಯಲ್ಲಿನ ಅತ್ಯಂತ ಪ್ರಾಮಾಣಿಕ ವ್ಯಕ್ತಿ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ವಿಡಿಯೋವನ್ನು ತಿರುಚಲಾಗಿದ್ದು, ಇದರಲ್ಲಿ ವಿರೋಧಿಗಳ ಕೈವಾಡವಿದೆ. ನಾನು ಇವಿಎಂ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ ಎಂದು ವಿರ್ಕ್ ಸ್ಪಷ್ಟೀಕರಣ ನೀಡಿದ್ದಾರೆ.
|
ಯಾರಿಗೆ ಮತಹಾಕಿದ್ದೀರೆಂದು ಗೊತ್ತಾಗುತ್ತದೆ
39 ಸೆಕೆಂಡುಗಳ ವಿಡಿಯೋದಲ್ಲಿ ವಿರ್ಕ್, 'ನೀವೆಲ್ಲಿಯೇ ಮತ ಹಾಕಿ, ಯಾವ ವ್ಯಕ್ತಿ ಯಾರಿಗೆ ಮತ ಹಾಕಿದ್ದಾರೆ ನಮಗೆ ಗೊತ್ತಾಗುತ್ತದೆ. ನಮಗೆ ಗೊತ್ತಾಗುವುದಿಲ್ಲ ಎಂದು ಭಾವಿಸಬೇಡಿ. ನಾವು ಉದ್ದೇಶಪೂರ್ವಕವಾಗಿಯೇ ಅದನ್ನು ನಿಮಗೆ ಹೇಳುವುದಿಲ್ಲ. ಆದರೆ ನಾವು ಬಯಸಿದರೆ ನೀವು ಯಾರಿಗೆ ಮತಹಾಕಿದ್ದೀರಿ ಎನ್ನುವುದು ನಮಗೆ ಗೊತ್ತಾಗುತ್ತದೆ' ಎಂದು ಪಂಜಾಬಿ ಭಾಷೆಯಲ್ಲಿ ಹೇಳಿರುವುದು ದಾಖಲಾಗಿದೆ.

ಆರೋಪಕ್ಕೆ ಪುಷ್ಟಿ ಸಿಕ್ಕಿದೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ವೈರಲ್ ಆಗಿದೆ. ಬಿಜೆಪಿ ವಿರೋಧಿಗಳು ವಿಡಿಯೋ ಹಂಚಿಕೊಂಡಿದ್ದು, ಇವಿಎಂ ಅನ್ನು ತಮಗೆ ಬೇಕಾದಂತೆ ಬದಲಿಸಿ, ಮತಗಳು ತಮ್ಮ ಅಭ್ಯರ್ಥಿಗೆ ಬೀಳುವಂತೆ ಮಾಡಿಕೊಳ್ಳುವ ಬಿಜೆಪಿ ಮೇಲೆ ಮಾಡುತ್ತಿದ್ದ ಆರೋಪಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಈ ವಿಡಿಯೋವನ್ನು ಹಂಚಿಕೊಂಡು, ಬಿಜೆಪಿಯ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಇವರು ಎಂದಿದ್ದಾರೆ.

ವಿರೋಧಿಗಳ ಕೃತ್ಯ ಎಂದ ವಿರ್ಕ್
ಈ ವಿಡಿಯೋ 'ನಕಲಿ' ಎಂದು ಪ್ರತಿಪಾದಿಸಿರುವ ವಿರ್ಕ್, ಇದು ತಮಗೆ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ತಮ್ಮ ವಿರೋಧಿಗಳು ಈ ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
'ನಕಲಿ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಕೆಲವು ಮಾಧ್ಯಮ ವ್ಯಕ್ತಿಗಳು ಈ ಕೃತ್ಯ ಎಸಗಿದ್ದು, ಇಡೀ ಘಟನೆಯನ್ನು ತಿರುಚಿದ್ದಾರೆ. ನಾನು ಚುನಾವಣಾ ಆಯೋಗವನ್ನು ಗೌರವಿಸುತ್ತೇನೆ ಮತ್ತು ಇವಿಎಂಅನ್ನು ನಂಬುತ್ತೇನೆ. ನಾನು ಇವಿಎಂ ಬಗ್ಗೆ ಏನನ್ನೂ ಹೇಳಿಲ್ಲ. ನನ್ನ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ' ಎಂದಿದ್ದಾರೆ.

ಚುನಾವಣಾ ಆಯೋಗ ನೋಟಿಸ್
ಹರಿಯಾಣದ ಅಸ್ಸಂದ್ ಕ್ಷೇತ್ರದ ಶಾಸಕರಾಗಿರುವ ವಿರ್ಕ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ಚುನಾವಣಾ ಆಯೋಗವು ಅವರಿಗೆ ನೋಟಿಸ್ ಜಾರಿ ಮಾಡಿದೆ. ಜತೆಗೆ ವಿರ್ಕ್ ಅವರು ಪ್ರತಿನಿಧಿಸುತ್ತಿರುವ ಅಸ್ಸಂದ್ ಕ್ಷೇತ್ರಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ವಿಶೇಷ ವೀಕ್ಷಕರನ್ನು ನಿಯೋಜಿಸಿದೆ.
ಮಾಜಿ ಚುನಾವಣಾ ಉಪ ಆಯುಕ್ತ ವಿನೋದ್ ಜುಷ್ಟಿ ಅವರನ್ನು ವಿಶೇಷ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಚುನಾವಣಾ ಆಯೋಗವು ಭಾನುವಾರ ತಿಳಿಸಿತ್ತು. ಈ ಕ್ಷೇತ್ರದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಮತದಾನ ನಡೆಯಲು ಅಗತ್ಯ ದೋಷಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದೆ.












Click it and Unblock the Notifications