ತಪ್ಪಿಸಿಕೊಳ್ಳಲು ಹೋಗಿ ಯುವಕ ಸಾವು: ಪೊಲೀಸರ ವಿರುದ್ಧ ದೂರು ದಾಖಲಿಸಿದ ತಾಯಿ
ಚಾಮರಾಜನಗರ, ನವೆಂಬರ್30: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕ ಮೃತಪಟ್ಟ ಸಂಬಂಧ ಚಾಮರಾಜನಗರ ಜಿಲ್ಲೆಯ ಮೂವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.
ಯಳಂದೂರು ಪೊಲೀಸ್ ಠಾಣೆಯ ಸಿಪಿಐ ಶಿವಮಾದಯ್ಯ, ಮಾಂಬಳ್ಳಿ ಪೊಲೀಸ್ ಠಾಣೆ ಪಿಎಸ್ಐ ಮಾದೇಗೌಡ ಹಾಗೂ ಕಾನ್ಸ್ಟೇಬಲ್ ಸೋಮಣ್ಣ ವಿರುದ್ಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಮಗನನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಮೃತನ ತಾಯಿ ಮಹಾದೇವಮ್ಮ ಪೊಲೀಸರ ವಿರುದ್ಧವೇ ದೂರು ನೀಡಿದ್ದಾರೆ.

ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ಲಿಂಗರಾಜು(21) ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜೀಪಿನಿಂದ ಹಾರಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಲಿಂಗರಾಜು ಅಪ್ರಾಪ್ತೆಯ ತಲೆ ಕೆಡಿಸಿ, ಆಕೆಯನ್ನು ಅಪಹರಿಸಿದ ಆರೋಪದ ಮೇಲೆ ಬಳ್ಳಿ ಪೊಲೀಸ್ ಠಾಣೆಯಲ್ಲಿ ನವೆಂಬರ್ 23ರಂದು ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ಸಂಬಂಧ ವಿಚಾರಣೆಗೆಂದು ಮಂಗಳವಾರ ಪೊಲೀಸರು ಠಾಣೆಗೆ ಕರೆದೊಯ್ಯವಾಗ ಪರಾರಿಯಾಗಲು ಯತ್ನಿಸಿ ಜೀಪಿನಿಂದ ಹಾರಿದ ಲಿಂಗರಾಜು ಗಂಭೀರ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.












Click it and Unblock the Notifications