ಇನ್ನು ಯಾವ ಯಾವ ರೀತಿಯ ನೀರು ಕುಡಿಯಬೇಕೋ?
ಚಾಮರಾಜನಗರ, ಡಿಸೆಂಬರ್ 29: ಈ ಬಾರಿಯ ಬರದಿಂದ ಕುಡಿವ ನೀರಿಗೆ ತತ್ವಾರ ಉಂಟಾಗಿದ್ದು, ಕುಡಿಯಲು ಯೋಗ್ಯವಲ್ಲದ ನೀರನ್ನು ಕುಡಿವ ಪರಿಸ್ಥಿತಿ ಎಲ್ಲಡೆ ಉಂಟಾಗಿದೆ. ಸಾಕ್ಷಿ ಎಂಬಂತೆ ಗುಂಡ್ಲುಪೇಟೆ ತಾಲೂಕಿನ ಬೆಲಚವಾಡಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಹಾವಿನ ಮರಿಯಂತಹ ಹುಳಗಳು ಪತ್ತೆಯಾಗಿದ್ದು, ನೀರನ್ನು ಕುಡಿಯಬೇಕೋ ಬೇಡಿವೋ ಎಂಬ ಪ್ರಶ್ನೆ ನೊಂದ ಗ್ರಾಮಸ್ಥರದ್ದಾಗಿದೆ.
ಸದ್ಯದ ಮಟ್ಟಿಗೆ ಸಿಕ್ಕಿದ ನೀರನ್ನು ಅಮೃತ ಎಂಬಂತೆ ಉಪಯೋಗಿಸುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಮನೆಗಳಿಗೆ ಸರಬರಾಜಾಗುತ್ತಿರುವ ನೀರಿನಲ್ಲಿ ಹುಳಗಳು ಬರುತ್ತಿದ್ದು, ಇದನ್ನು ನೋಡಿದ ಜನ ಆತಂಕಗೊಂಡಿದ್ದಾರೆ.
ಸುಬ್ಬಣ್ಣ ಎಂಬುವವರ ಮನೆಯ ಬಳಿಯ ನೀರಿನ ತೊಟ್ಟಿಯಲ್ಲಿ ಸಂಗ್ರವಾದ ನೀರಿನಲ್ಲಿ ಹಾವಿನಾಕಾರದ ಹುಳುಗಳು ಕಂಡು ಬಂದಿದ್ದು, ಇದನ್ನು ಕಂಡ ಅವರು ಕೂಡಲೇ ಬೇಗೂರು ಗ್ರಾ.ಪಂ. ಕಾರ್ಯದರ್ಶಿ ರಂಗಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ. ವಿಚಾರಗಳು ಗ್ರಾಮದಲ್ಲಿ ಸುದ್ದಿಯಾಗಿದ್ದರಿಂದ ತಕ್ಷಣ ಅವರು ಸುಬ್ಬಣ್ಣ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಾವಿನಾಕಾರದ ಹುಳುಗಳು ನೀರಿನಲ್ಲಿ ಇರುವುದು ದೃಢಪಟ್ಟಿದೆ.
ಇದರಿಂದಾಗಿ ಈ ಹುಳುಗಳು ಎಲ್ಲಿಂದ ಬರುತ್ತಿವೆ ಎಂಬುವುದನ್ನು ಪರಿಶೀಲಿಸಿದ ಗ್ರಾಪಂ ಕಾರ್ಯದರ್ಶಿ ರಂಗಸ್ವಾಮಿ ಅವರು ಕಬಿನಿಯಿಂದ ಸರಬರಾಜಾಗಿ ಶೇಖರಣೆಯಾಗುವ ಕುಡಿಯುವ ನೀರಿನ ಟ್ಯಾಂಕನ್ನು ಪರಿಶೀಲಿಸಿದರಲ್ಲದೆ, ಕೂಡಲೇ ಅದನ್ನು ಸ್ವಚ್ಛಗೊಳಿಸಿ ಬಳಿಕ ನೀರನ್ನು ಮನೆಗಳಿಗೆ ಸರಬರಾಜು ಮಾಡುವಂತೆ ನೀರುಗಂಟಿ ಶಿವಸ್ವಾಮಿಗೆ ಸೂಚಿಸಿದರು.
ಮನೆಗಳಿಗೆ ಸರಬರಾಜಾಗುವ ನೀರಿನಲ್ಲಿ ಹುಳ ಬರುತ್ತಿರುವುದೇಕೆ ಎಂಬುದಕ್ಕೆ ಗ್ರಾಮಸ್ಥರು ಕಳೆದ ಆರು ವರ್ಷಗಳಿಂದ ಕುಡಿಯುವ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿ ನೀರನ್ನು ತುಂಬಿಸುವ ಕೆಲಸವನ್ನು ಗ್ರಾಮಪಂಚಾಯಿತಿ ಮಾಡಿಲ್ಲವಂತೆ ಹೀಗಾಗಿ ಹುಳುಗಳು ಬರುತ್ತಿವೆ ಎನ್ನುತ್ತಿದ್ದಾರೆ.
ಹೀಗೆ ಮುಂದುವರೆದರೆ ಸಾಂಕ್ರಾಮಿಕ ರೋಗ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಆದ್ದರಿಂದ ಭಯಗೊಂಡಿರುವ ಗ್ರಾಮಸ್ಥರು ಕೂಡಲೇ ಟ್ಯಾಂಕನ್ನು ಸ್ವಚ್ಛಗೊಳಿಸಿ ಮನೆಗಳಿಗೆ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.