ಗುಂಡ್ಲುಪೇಟೆಯ ಅರಣ್ಯದಂಚಿನಲ್ಲಿ ಪ್ರತ್ಯಕ್ಷರಾಗಿದ್ದು ನಕ್ಸಲರಾ?
ನವೆಂಬರ್ 11, ಚಾಮರಾಜನಗರ: ಗುಂಡ್ಲುಪೇಟೆಯ ಅರಣ್ಯದಂಚಿನ ಗಡಿಭಾಗದಿಂದ ನಕ್ಸಲರು ರಾಜ್ಯದೊಳಕ್ಕೆ ನುಸುಳ ಬಹುದೆಂಬ ಸಂಶಯ ಹಿಂದಿನಿಂದಲೂ ಇದ್ದು, ಈ ಬಗ್ಗೆ ನಕ್ಸಲ್ ನಿಗ್ರಹಪಡೆ ಹದ್ದಿನ ಕಣ್ಣಿಟ್ಟು ಕಾಯುತ್ತಿದೆ. ಆದರೂ ಈ ನಡುವೆ ಶುಕ್ರವಾರ(ನ.10) ಮಧ್ಯಾಹ್ನದ ವೇಳೆಯಲ್ಲಿ ಕಾಡಂಚಿನ ಗ್ರಾಮದಲ್ಲಿ ಮೂವರು ಮುಸುಕುಧಾರಿಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಇವರು ನಕ್ಸಲರೇನಾ? ಎಂಬ ಸಂಶಯ ಕಾಡತೊಡಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮದ ಒಂಟಿಮನೆಯೊಂದಕ್ಕೆ ಮೂವರು ಮುಸುಕುಧಾರಿಗಳು ಆಗಮಿಸಿ ಕೀಲಿಕೈಕೊಡುವಂತೆ ಕಾರ್ಮಿಕ ಮಹಿಳೆಯನ್ನು ಕೇಳಿದ್ದಾರೆ ಎನ್ನಲಾಗಿದ್ದು ಆಕೆ ಇದರಿಂದ ಭಯಗೊಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ ಮೇರೆಗೆ ಸುದ್ದಿಯಾಗಿದ್ದು, ಸ್ಥಳಕ್ಕೆ ಡಿಎಸ್ಪಿ ಎಸ್.ಈ.ಗಂಗಾಧರಸ್ವಾಮಿ, ಪಿಎಸ್ಐ ಬಿ.ಎಸ್.ಶಿವರುದ್ರ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಾರ್ರಾಗಿಹುಂಡಿ ಗ್ರಾಮದ ನಿವಾಸಿ ಮಂಗಲ, ಗ್ರಾಮಪಂಚಾಯಿತಿ ಸದಸ್ಯರಾದ ಮಾದೇಶ್ ಎಂಬುವರು ಶಾಂತಿ ಎಂಬ ಗಿರಿಜನ ಕಾರ್ಮಿಕಳನ್ನು ಜಮೀನಿನ ಕೆಲಸಕ್ಕೆ ಬಿಟ್ಟು ಮನೆಗೆ ಬೀಗ ಹಾಕಿ ತಮ್ಮ ಕುಟುಂಬ ಸಮೇತ ಸಮೀಪದ ಎಲ್ಚೆಟ್ಟಿ ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿದ್ದರು ಎನ್ನಲಾಗಿದೆ.
ಮಧ್ಯಾಹ್ನ 2.30ರಲ್ಲಿ ಕಣ್ಣುಗಳು ಮಾತ್ರ ಕಾಣುವಂತೆ ಕಪ್ಪುಬಟ್ಟೆಯಿಂದ ಮುಖಮುಚ್ಚಿಕೊಂಡು ಶೂ ಧರಿಸಿದ್ದ ಮೂವರು ಮುಸುಕುಧಾರಿಗಳು ಇಲ್ಲಿಗೆ ಆಗಮಿಸಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ಶಾಂತಿಯನ್ನು ಮನೆಯ ಕೀಲಿಕೈ ಕೊಡುವಂತೆ ಒತ್ತಾಯಿಸಿದ್ದಾರೆ. ಮಾಲೀಕರು ತನಗೆ ಮನೆಯ ಕೀಲಿಕೈಕೊಟ್ಟಿಲ್ಲ ಸ್ವಲ್ಪಹೊತ್ತಿನಲ್ಲಿಯೇ ಬರುತ್ತಾರೆ ಎಂದು ಹೇಳಿದಾಗ ತಾವು ಬಂದಿದ್ದ ವಿಷಯವನ್ನು ಯಾರಿಗೂ ತಿಳಿಸಬಾರದು, ಹೇಳಿದರೆ ನಿನಗೆ ತೊಂದರೆಯಾಗುತ್ತದೆ ಎಂದು ಚಾಕು ತೋರಿಸಿ ಬೆದರಿಕೆ ಹಾಕಿ ಕಾಡಿನತ್ತ ತೆರಳಿದರು ಎಂದು ಕಾರ್ಮಿಕ ಮಹಿಳೆ ತಿಳಿಸಿದ್ದಾಳೆ.
ಮನೆ ಮಾಲೀಕ ಮರಳಿದ ಬಳಿಕ ಈ ವಿಚಾರವನ್ನು ಶಾಂತಿ ತಿಳಿಸಿದ್ದು, ಅವರು ಗ್ರಾಮಸ್ಥರಿಗೆ ಮಾಹಿತಿ ನೀಡುವ ಮೂಲಕ ಮಾದೇಶ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಶಾಂತಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ವಿಷಯ ಸಂಗ್ರಹಿಸಿದ್ದಾರೆ.
ಮುಸುಕುಧಾರಿಗಳು ನಕ್ಸಲ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ವ್ಯಾಪ್ತಿಯಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಸಂಶಯ ಹಿಂದಿನಿಂದಲೂ ಇದೆ. ಕೆಲವರ ಪೋಸ್ಟರ್ ಗಳನ್ನು ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಇದೀಗ ಮುಸುಕುಧಾರಿಗಳು ಬಂದಿದ್ದರು ಎಂಬ ವಿಚಾರ ಈ ವ್ಯಾಪ್ತಿಯ ಜನರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications