ಮತಯಾಚನೆಗೆ ತೆರಳಿದ ಸಚಿವೆ ಮೋಹನಕುಮಾರಿ ವಿರುದ್ಧ ಮಹಿಳೆಯರು ಗರಂ
ಗುಂಡ್ಲುಪೇಟೆ, ಮೇ 5: ಮತಯಾಚನೆಗೆ ಬಂದಿದ್ದ ಸಚಿವೆ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಹುಂಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಹಿರೀಕಾಟಿಗೆ ಆಗಮಸಿದ ಸಚಿವೆ ವಾಹನದಲ್ಲಿ ನಿಂತು ಮತಯಾಚನೆಗೆ ಮುಂದಾದಾಗ ಕೆಳಗಿಳಿದು ತಮ್ಮ ಬೀದಿಯೊಳಗೆ ಬರುವಂತೆ ಮಹಿಳೆಯರು ಆಗ್ರಹಿಸಿದರು.
ಕಳೆದ 25 ವರ್ಷಗಳಿಂದ ಮತ ನೀಡುತ್ತಿದ್ದರೂ ತಮಗೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಚರಂಡಿಗಳ ನೀರು ಹರಿದು ಹೋಗಲು ಮಾರ್ಗ ನಿರ್ಮಿಸಿಲ್ಲ. ಎಲ್ಲ ನಿವಾಸಿಗಳೂ ಮನೆ ಬಳಕೆಯ ನೀರು ಇಂಗಿಸಲು ಇಂಗುಗುಂಡಿ ಮಾಡಿಕೊಂಡಿದ್ದು ಸೊಳ್ಳೆಗಳ ಕಾಟದಿಂದ ಬಳಲುವಂತಾಗಿದೆ.

ಸಮರ್ಪಕ ಕುಡಿಯುವ ನೀರು ದೊರಕದೆ ಎರಡು ಕಿ.ಮೀ ಕಾಲ್ನಡಿಗೆಯಲ್ಲಿ ಚಿಕ್ಕಹುಂಡಿಗೆ ತೆರಳಿ ತರಬೇಕಾಗಿದೆ. ಕಲ್ಲು ಲಾರಿಗಳ ಸಂಚಾರದಿಂದ ರಸ್ತೆಗಳು ಹಾಳಾಗಿದ್ದು, ದೂಳು ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆ. ಚುನಾವಣೆಯ ಸಂದರ್ಭ ಹೊರತುಪಡಿಸಿ ಇತರೆ ದಿನಗಳಲ್ಲಿ ಯಾರೂ ಕೂಡ ನಮ್ಮ ಕಷ್ಟ ಕೇಳುತ್ತಿಲ್ಲ. ಮತದಾನ ಬಹಿಷ್ಕಾರ ಹಾಕುವ ತೀರ್ಮಾನಕ್ಕೆ ಬಂದಿದ್ದರೂ ಯಾವ ಅಭ್ಯರ್ಥಿಯೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರು ಏರು ಧ್ವನಿಯಲ್ಲಿ ಮಾತಾಡುತ್ತಿದ್ದಂತೆಯೇ ವಾಹನದಿಂದ ಕೆಳಗಿಳಿದ ಸಚಿವೆ ಗೀತಾ ಮಹದೇವಪ್ರಸಾದ್, ನಾನು ಕೇವಲ ಹನ್ನೊಂದು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿದ್ದೇನೆ. ಕುಡಿಯುವ ನೀರಿನ ಸಮಸ್ಯೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಮತಯಾಚನೆಗೆ ಎಲ್ಲ ಗ್ರಾಮಗಳಿಗೂ ತೆರಳಬೇಕಾದ್ದರಿಂದ ಈಗ ನನಗೆ ಸಮಯಾವಕಾಶವಿಲ್ಲ. ಅಲ್ಲದೆ ಕಾಲುನೋವಿದೆ. ಚುನಾವಣೆ ಮುಗಿದ ನಂತರ ಬರುತ್ತೇನೆ ಎಂದರು.
ಇದರಿಂದ ಕೆರಳಿದ ನಿವಾಸಿಗಳು ಎಲ್ಲ್ಲ ಗ್ರಾಮಗಳಿಗೂ ಮತಕೇಳಲು ಹೋಗುವ ನೀವು ಬೀದಿಯೊಳಗೆ ಬರಲೇ ಬೇಕು. ನೀವು ಈಗಲೇ ಪರಿಶೀಲನೆ ನಡೆಸದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಬೆದರಿಕೆಯೊಡ್ಡಿದರು.
ಗ್ರಾಮಸ್ಥರ ಆಗ್ರಹ ಹೆಚ್ಚಾಗುತ್ತಿದ್ದಂತೆಯೇ ಗೀತಾ ಮಹದೇವಪ್ರಸಾದ್ ಅವರು ವಾಹನವೇರಿ ಮುಂದಿನ ಬೀದಿಗಳಿಗೆ ಮತಯಾಚನೆಗೆ ತೆರಳಿದರು. ಜನರ ನೋವಿಗೆ ಸ್ಪಂದಿಸುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಇದರಿಂದ ಗ್ರಾಮಸ್ಥರು ಸಚಿವೆಯ ಧೋರಣೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications