ರಣಹದ್ದುಗಳಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮಹಿಳಾ ಎಸ್ಪಿ
ಚಾಮರಾಜನಗರ, ಸೆಪ್ಟೆಂಬರ್ 16: ವಿದ್ಯುತ್ ಸ್ಪರ್ಶದಿಂದ ನೆಲಕ್ಕುರುಳಿದ್ದ ಎರಡು ರಣ ಹದ್ದುಗಳಿಗೆ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರು ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರ ನಿವಾಸದ ಬಳಿ, ಮಂಗಳವಾರ ಸಂಜೆ ವಿದ್ಯುತ್ ತಂತಿಯ ಸ್ಪರ್ಶದಿಂದ ಎರಡು ರಣ ಹದ್ದುಗಳು ನೆಲಕ್ಕೆ ಬಿದ್ದು ನಿತ್ರಾಣಗೊಂಡಿದ್ದವು.
ತಮ್ಮ ನಿವಾಸದ ಪಕ್ಕದಲ್ಲೇ ರಣಹದ್ದುಗಳು ನಿತ್ರಾಣಗೊಂಡಿದ್ದನ್ನು ಕಂಡ ಎಸ್ಪಿ ದಿವ್ಯ ಸಾರಾ ಥಾಮಸ್ ಅವರು ತಕ್ಷಣ ತಮ್ಮ ವಾಹನದಲ್ಲಿದ್ದ ಗನ್ ಮ್ಯಾನ್ ಸಹಾಯದೊಂದಿಗೆ ರಣಹದ್ದುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಸಮೀಪದಲ್ಲೇ ಇದ್ದ ಶ್ವಾನ ವೈದ್ಯ ಡಾ.ಮನೋಹರ್ ಅವರ ಕ್ಲಿನಿಕ್ ನಲ್ಲಿ ರಣಹದ್ದುಗಳಿಗೆ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಬಳಿಕ ರಣಹದ್ದುಗಳು ಚೇತರಿಸಿಕೊಂಡಿವೆ. ರಣಹದ್ದುಗಳ ಜೀವ ಉಳಿಸಿ ಮಹಿಳಾ ಅಧಿಕಾರಿಣಿ ಮಾನವೀಯತೆ ಮೆರೆದಿದ್ದಾರೆ.
ರಣಹದ್ದುಗಳ ಚಿಕಿತ್ಸಾ ವೆಚ್ಚವನ್ನು ಸ್ವತಃ ಎಸ್ಪಿ ದಿವ್ಯ ಸಾರಾ ಥಾಮಸ್ ಅವರೇ ಭರಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಮಾನವೀಯ ಕಾರ್ಯಕ್ಕೆ ಡಾ.ಮನೋಹರ್ ಅವರು ಮೆಚ್ಚುಗೆ ಸೂಚಿಸಿದರು.
ಮಹಿಳಾ ಪೊಲೀಸ್ ಅಧಿಕಾರಿಣಿಯ ಮಾನವೀಯತೆಗೆ ಸ್ಥಳೀಯ ಜನರಿಂದಲೂ ಪ್ರಶಂಸೆ ವ್ಯಕ್ತವಾಗಿದ್ದು, ಸದ್ಯ ಎಸ್ಪಿ ನಿವಾಸದಲ್ಲೇ ಎರಡು ರಣಹದ್ದುಗಳು ಆಶ್ರಯ ಪಡೆದಿವೆ.












Click it and Unblock the Notifications