ಗುಂಡ್ಲುಪೇಟೆಯಲ್ಲಿ ದಲಿತರು ಬೌದ್ಧ ಧರ್ಮ ಸ್ವೀಕರಿಸಿದ್ದೇಕೆ?
ಚಾಮರಾಜನಗರ, ಜೂನ್ 19: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಜೂನ್ 3ರಂದು ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಹಲ್ಲೆಯಂಥ ಅಮಾನವೀಯ ಪ್ರಕರಣವನ್ನು ಖಂಡಿಸಿ ದಲಿತ ಸಂಘಟನೆಗಳ ಸದಸ್ಯರು, ಗುಂಡ್ಲುಪೇಟೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ ಸಾಮೂಹಿಕ ಬೌದ್ಧ ಧರ್ಮ ಸ್ವೀಕಾರ ಮಾಡಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹೊರವಲಯದಲ್ಲಿರುವ ನೇನೇಕಟ್ಟೆ ಗ್ರಾಮ ಪಂಚಾಯ್ತಿಗೆ ಒಳಪಡುವ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದಲ್ಲಿ ಯಾರೂ ಊಹಿಸಲಾರದಂತಹ ಅಮಾನವೀಯ ಘಟನೆ ನಡೆಯಿತು. ದಲಿತ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ದಲಿತ ಸಂಘಟನೆಗಳು, ಪ್ರಕರಣವನ್ನು ಖಂಡಿಸಿದ್ದಲ್ಲದೆ, ಮಂಗಳವಾರ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದಿಂದ ಗುಂಡ್ಲುಪೇಟೆಗೆ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಇರುವ ಬಯಲು ರಂಗಮಂದಿರದಲ್ಲಿ ಸಾಮೂಹಿಕವಾಗಿ ಬೌದ್ಧ ಧರ್ಮ ಸ್ವೀಕರಿಸಿದರು.
ಗುಂಡ್ಲುಪೇಟೆಯ ಬಯಲು ರಂಗ ಮಂದಿರದಲ್ಲಿ ನೂರಾರು ದಲಿತ ಮುಖಂಡರು ಹಿಂದೂ ಧರ್ಮವನ್ನು ತೊರೆದು, ಸಮಾನತೆ ಹಾಗೂ ಶಾಂತಿಯ ಸಂಕೇತವಾಗಿರುವ ಬೌದ್ಧ ಧರ್ಮಕ್ಕೆ ಸೇರ್ಪಡೆಗೊಳ್ಳುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲದಿರುವುದನ್ನು ಕಂಡು ಬೇಸತ್ತು ಅಂಬೇಡ್ಕರ್ ಅವರ ಹಾದಿಯಂತೆ ಸಾಮೂಹಿಕವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಈ ವೇಳೆ ದಲಿತ ಸಂಘಟನೆಗಳ ಮುಖಂಡರು, ಧರ್ಮ ಬಿಕ್ಕುಗಳು ಹಾಜರಿದ್ದು, ಈ ಮತಾಂತರ ಸಮಾರಂಭಕ್ಕೆ ಸಾಕ್ಷಿಭೂತರಾದರು.

ದಲಿತ ವಿದ್ಯಾವಂತ ಯುವಕನೊಬ್ಬನನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ್ದಲ್ಲದೆ ಆತನನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕೈಗಳಿಗೆ ಹಗ್ಗ ಕಟ್ಟಿ ಮೆರವಣಿಗೆ ಮಾಡಿರುವುದು ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ಘಟನೆಯಿಂದ ನೊಂದಿರುವ ಯುವಕನ ಕುಟುಂಬಕ್ಕೆ ಮಾನಸಿಕವಾಗಿ ಘಾಸಿಯಾಗಿದ್ದು, ಇದಕ್ಕೆ ಸರ್ಕಾರವು 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಜೊತೆಗೆ ಅವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಯಿತು.
ಜೂನ್ 3ರಂದು ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಕಾಣುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗಿರುವುದು ಹೊಸ ಬೆಳವಣಿಗೆಯಾಗಿದೆ.












Click it and Unblock the Notifications