ಅಂಬೇಡ್ಕರ್ ಕಮಾನಿಗೆ ಅಪಮಾನ: ಐವರ ಬಂಧನ
ಚಾಮರಾಜನಗರ, ಫೆಬ್ರವರಿ 2: ಕೊಳ್ಳೇಗಾಲದ ಕಾವೇರಿ ರಸ್ತೆಯಲ್ಲಿರುವ ಭೀಮನಗರದ ಅಂಬೇಡ್ಕರ್ ಸ್ವಾಗತ ಕಮಾನಿಗೆ ಚಪ್ಪಲಿಹಾರ ಹಾಕಿ ಇಡೀ ತಾಲೂಕು ಸೇರಿದಂತೆ ತಾಲೂಕು ಹೊತ್ತಿ ಉರಿಯುವಂತೆ ಮಾಡಿ, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತಂದ ಐವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭೀಮನಗರದ ಕಲ್ಲುಬಾವಿ ನಿವಾಸಿ ಇದೀಗ ಆಶ್ರಯ ಬಡಾವಣೆಯ ಪೇಂಟಿಂಗ್ ಕೆಲಸ ಮಾಡುವ ಸ್ಟಾಲೀನ್(27), ಭೀಮನಗರ ಪನ್ನಾಬಿದಿಯ ಶರತ್ ಕುಮಾರ್ ಅಲಿಯಾಸ್ ಶರತ್(21), ಕಲ್ಲುಬಾವಿ ನಿವಾಸಿ ಆಟೋಚಾಲಕ ಶಿವಸ್ವಾಮಿ ಅಲಿಯಾಸ್ ಶಿವು(22), ಲಕ್ಕರಸನಪಾಳ್ಯದ ಬಸ್ತಿಪುರ ರಸ್ತೆ ನಿವಾಸಿ ಅನಿಲ್ಕುಮಾರ್ ಅಲಿಯಾಸ್ ಅನಿಲ್(21), ಕಲ್ಲುಬಾವಿ ನಿವಾಸಿ ಚಾಲಕ ನವೀನ ಅಲಿಯಾಸ್ ಪಿಂಕಾ(29) ಎಂಬುವರು ಬಂಧಿತರು.ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.[ಹಾಸನದಲ್ಲಿ 15 ಮಂದಿ ರೋಡ್ ರೋಮಿಯೋಗಳ ಬಂಧನ]
ಒಟ್ಟು ಆರು ಮಂದಿ ಸೇರಿ ಪಕ್ಕದ ಬೀದಿಯ ಜನಾಂಗದ ಮಧ್ಯೆ ಜಗಳ ತಂದೊಡ್ಡಿ ಗಲಭೆ ಎಬ್ಬಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತಂದು ಆ ಮೂಲಕ ತಮ್ಮ ಗುಂಪಿನ ಪ್ರಾಬಲ್ಯವನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಹೆಚ್ಚಿಸಿಕೊಳ್ಳುವ ಸಲುವಾಗಿ ಸ್ಕೆಚ್ ತಯಾರಿ ಮಾಡಿದ್ದರಲ್ಲದೆ, ಯಾರು ಇಲ್ಲದ ಸಮಯ ನೋಡಿ ಜನವರಿ 13ರಂದು ಸ್ವಾಗತ ಕಮಾನಿಗೆ ಚಪ್ಪಲಿ ಹಾರ ಸಿಕ್ಕಿಸಿ ತಮಗೇನು ತಿಳಿಯದಂತೆ ತೆಪ್ಪಗೆ ಇದ್ದರಲ್ಲದೆ, ಸುದ್ದಿ ಹರಡಿಸಿ ಗಲಭೆಗೂ ಕಾರಣರಾಗಿದ್ದರು.
ಪ್ರತಿಭಟನೆಗಳು ನಡೆದಾಗ ಅದರಲ್ಲಿ ತಾವು ಪಾಲ್ಗೊಂಡು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದರು. ಸುದ್ದಿ ಕಾಳ್ಗಿಚಿನಂತೆ ಹರಡಿದ್ದರಿಂದ ಕೊಳ್ಳೇಗಾಲ, ಹನೂರು ಸೇರಿದಂತೆ ಹಲವೆಡೆ ರಸ್ತೆ ತಡೆದು ಪ್ರತಿಭಟನೆಗಳು ನಡೆದಿದ್ದವು. ಘಟನೆಯ ಸೂಕ್ಷ್ಮತೆಯನ್ನು ಅರಿತು ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆ ಹರಿಹಾಯ್ದ ಕೆಲವು ಕಿಡಿಗೇಡಿಗಳು ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಇದರಿಂದ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪುಂಡರ ಮೇಲೆ ಪ್ರಕರಣ ದಾಖಲಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಬಂಧಿಸಲು ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು. ತನಿಖೆಯೂ ಆರಂಭಿಸಲಾಗಿತ್ತು. ಮೊಬೈಲ್ ನೆಟ್ವರ್ಕ್ ಆಧರಿಸಿ ಮಾಹಿತಿ ಕಲೆ ಹಾಕಿದ ತಂಡ ಸಣ್ಣಪುಟ್ಟ ಸುಳಿವು ಹಿಡಿದುಕೊಂಡು ತನಿಖೆ ನಡೆಸಿತ್ತು.
ತನಿಖಾತಂಡಕ್ಕೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಸಂಶಯದ ಮೇರೆಗೆ ಸ್ಟಾಲೀನ್ ಅನ್ನು ಫೆ.1ರಂದು ವಶಕ್ಕೆ ಪಡೆದು ಪೊಲೀಸ್ ಮಾದರಿಯಲ್ಲಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ.ಆತ ನೀಡಿದ ಮಾಹಿತಿ ಹಿನ್ನಲೆಯಲ್ಲಿ ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.