ಮತದಾರರ ಮಾಹಿತಿ ಕಳವು ಮಾಡಿರೋದು ಮೈತ್ರಿ ಸರ್ಕಾರ, ಆರೋಪ ನಮ್ಮ ಮೇಲೆ: ಸಚಿವ ಸೋಮಣ್ಣ
ಚಾಮರಾಜನಗರ, ನವೆಂಬರ್, 18: ಮತದಾರರ ಮಾಹಿತಿಗೆ ಕನ್ನ ಹಾಕಿರುವುದು ನಾವಲ್ಲ, ಮೈತ್ರಿ ಸರ್ಕಾರದ ತಪ್ಪನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಆರೋಪಕ್ಕೆ ಚಾಮರಾಜನಗರದಲ್ಲಿ ತಿರುಗೇಟು ನೀಡಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಆ ಸಂಸ್ಥೆಗೆ ಆದೇಶ ನೀಡಿದ್ದು ನಾವಲ್ಲ. ತಾವು ಮಾಡಿದ್ದ ತಪ್ಪನ್ನು ಕಾಂಗ್ರೆಸ್ ನಮ್ಮ ಮೇಲೆ ಹೊರಿಸುತ್ತಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದು, ಶೀಘ್ರವೇ ತಪ್ಪಿತಸ್ಥರು ಯಾರು ಎಂಬುದು ತಿಳಿಯಲಿದೆ. ಎಲ್ಲವನ್ನೂ ನಂಬಲು ಜನರು ದಡ್ಡರಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ತನಿಖೆಗೆ ಆಗ್ರಹಿಸಿದ್ದ ಸಿದ್ದರಾಮಯ್ಯ
ಖಾಸಗಿ ಸಂಸ್ಥೆಯಿಂದ ಮತದಾರರ ಮಾಹಿತಿ ಕಳ್ಳತನ ಆರೋಪ ವಿಚಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ್ದ ಅವರು, "ಬಿಬಿಎಂಪಿ ಹಾಗೂ ಚುನಾವಣಾ ಆಯೋಗ ಎಲ್ಲರೂ ಸೇರಿ ಮಾಡಿದ ಸಂಚು ಎಂದು ಆರೋಪ ಮಾಡಿದರು. ಮತದಾರರ ಜಾಗೃತಿ ಹಾಗೂ ಪರಿಷ್ಕರಣೆ ಹೆಸರಿನಲ್ಲಿ ಖಾಸಗಿ ಸಂಸ್ಥೆಯವರು ಅನುಮತಿ ಪಡೆದುಕೊಂಡಿದ್ದಾರೆ. ಖಾಸಗಿ ಕಂಪನಿಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಲಾಗಿದೆ. ಅವರು ಖಾಸಗಿ ವ್ಯಕ್ತಿಗಳನ್ನು ನಿಯೋಜನೆ ಮಾಡಿದ್ದಾರೆ," ಎಂದು ಕಿಡಿಕಾರಿದ್ದರು.

ಗುತ್ತಿಗೆದಾರರ ಮಟ್ಟದಲ್ಲಿ ಭ್ರಷ್ಟಾಚಾರ
ಈ ರೀತಿಯಲ್ಲಿ "ಖಾಸಗಿ ಸಂಸ್ಥೆಯ ಕೃಷ್ಣಪ್ಪ ರವಿಕುಮಾರ್ ನೇಮಕ ಮಾಡಿದ ಸಿಬ್ಬಂದಿಗೆ ಬಿಎಲ್ಓ ಕಾರ್ಡ್ ನೀಡುತ್ತಾರೆ. ಇದು ಶಿಕ್ಷಾರ್ಹ ಅಪರಾಧ ಆಗಿದೆ. ಇದರ ಹಿಂದಿರುವ ಉದ್ದೇಶ ವಂಚನೆ ಆಗಿರುತ್ತಾದೆ. ಇದರ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ. ಇದಕ್ಕೆ ಬೊಮ್ಮಾಯಿ ಅವರು ನೇರ ಹೊಣೆಗಾರರಾಗಿದ್ದಾರೆ. ಗುತ್ತಿಗೆದಾರರ ಮಟ್ಟದಲ್ಲಿ ಮಾತ್ರ ಭ್ರಷ್ಟಾಚಾರ ವ್ಯಾಪಕವಾಗಿ ಎಲ್ಲ ಕಡೆ ನಡೆಯುತ್ತಿದೆ ಎಂಬ ಆರೋಪ ಇತ್ತು. ಆದರೆ ಇದೀಗ ಕಳ್ಳ ಮಾರ್ಗದಲ್ಲಿ ಚುನಾವಣೆ ಗೆಲ್ಲುವ ಪ್ರಯತ್ನ ಇದಾಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಭ್ರಷ್ಟಾಚಾರ ಜಾಸ್ತಿ ಆಗಿದೆ.
ಆದ್ದರಿಂದ ಅವರು ಕೂಡಲೇ ರಾಜೀನಾಮೆ ಘೋಷಣೆ ಮಾಡಬೇಕು," ಎಂದು ಒತ್ತಾಯಿಸಿದ್ದರು.
ಮತದಾರರ ಮಾಹಿತಿ ಕಳ್ಳತನ
ನಂತರ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದ್ದು, ಬಿಜೆಪಿ ಸರ್ಕಾರ ಮತದಾರರ ಮಾಹಿತಿಯನ್ನು ಕಳ್ಳತನ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು. "ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮತದಾರರಿಗೆ ಸಂಬಂಧಿಸಿದ ದತ್ತಾಂಶಗಳನ್ನು ಕಳ್ಳತನ ಮಾಡಿದೆ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಇದಕ್ಕೆ ಹೊಣೆ ಆಗಿದೆ. ಖಾಸಗಿ ಸಂಸ್ಥೆಯೊಂದು ಮತದಾರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಬಿಬಿಎಂಪಿ ಅನುಮತಿ ಪಡೆದುಕೊಂಡು ಮತದಾರರ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹ ಮಾಡಿದೆ. ಡಿಎಪಿ ಹೊಂಬಾಳೆ ಪ್ರೈ ಲಿಮಿಟೆಡ್ ಕೂಡ ಇದರಲ್ಲಿ ಭಾಗಿ ಆಗಿದೆ ಎಂದು," ಆರೋಪ ಮಾಡಿದ್ದರು.

ರಣದೀಪ್ ಸುರ್ಜೇವಾಲ ಆರೋಪ ಏನು?
"ಚಿಲುಮೆ ಎಂಬ ಎನ್ಜಿಒ ಅನ್ನು ನೆಲಮಂಗಲ ಮೂಲದ ಕೃಷ್ಣಪ್ಪ ರವಿಕುಮಾರ್ ಸೇರಿದಂತೆ ಐವರು ನೋಂದಾಯಿಸಿದ್ದರು. ರವಿಕುಮಾರ್ ಮತ್ತು ಇತರ ಇಬ್ಬರು ಸೇರಿ ಡಿಸೆಂಬರ್ 2017ರಲ್ಲಿ ಡಿಎಪಿ ಹೊಂಬಾಳೆ ಎಂಬ ಖಾಸಗಿ ಕಂಪನಿಯನ್ನು ಸಹ ಪ್ರಾರಂಭಿಸಿದ್ದರು. ಈ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಿ ನೀಡುತ್ತದೆ. ಡಿಜಿಟಲ್ ಸಮೀಕ್ಷಾ ಎಂಬ ಮತದಾರರ ಸಮೀಕ್ಷೆ ಆ್ಯಪ್ ಅನ್ನು ನಿರ್ವಹಿಸುತ್ತಿದೆ. ಈ ಸಂಸ್ಥೆ ಮಲ್ಲೇಶ್ವರಂನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ," ಎಂದು ಆರೋಪಿಸಿದ್ದರು.












Click it and Unblock the Notifications