ಉಡುತೊರೆ ಜಲಾಶಯದಲ್ಲಿ ನೀರಿದ್ದರೂ ಅಪ್ರಯೋಜಕ!
ಚಾಮರಾಜನಗರ, ಮಾರ್ಚ್ 11 : ಹನೂರು ವ್ಯಾಪ್ತಿಯ ಅಜ್ಜೀಪುರ ಉಡುತೊರೆ ಜಲಾಶಯ ಭರ್ತಿಯಾಗಿದ್ದರೂ ನೀರು ಸಮರ್ಪಕ ಬಳಕೆಯಾಗದ ಕಾರಣ ರೈತರು ಕಂಗಾಲಾಗಿರುವುದು ಕಂಡು ಬಂದಿದೆ.
ಜಲಾಶಯದಲ್ಲಿ ನೀರು ಇರುವ ಕಾರಣ ಅದನ್ನು ಕಾಲುವೆಗಳ ಮೂಲಕ ರೈತರ ಜಮೀನಿಗೆ ಹರಿಸಿದ್ದೇ ಆದರೆ ಬೆಳೆ ಬೆಳೆಯಲು, ಜಾನುವಾರುಗಳಿಗೆ ಕುಡಿಯಲು ನೀರೊದಗುತ್ತದೆ. ಆದರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜಲಾಶಯದಲ್ಲಿ ನೀರಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ರೈತರ ಆರೋಪ.
ಚಾಮರಾಜನಗರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿರುವುದೇನು?
ಸ್ಥಳೀಯರ ಹೋರಾಟದ ಫಲವಾಗಿ ಉಡುತೊರೆ ಜಲಾಶಯವು 40 ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣಗೊಂಡಿದ್ದು, ಕಳೆದ ಎರಡು ವರ್ಷಗಳ ಹಿಂದೆ ಅದನ್ನು ಉದ್ಘಾಟಿಸಲಾಗಿತ್ತು. ಕಳೆದ ವರ್ಷ ಹಿಂಗಾರು ಮಳೆ ಈ ವ್ಯಾಪ್ತಿಯಲ್ಲಿ ಚೇತರಿಕೆ ಕಂಡಿತ್ತು. ಸುರಿದ ಭಾರೀ ಮಳೆಗೆ ಕೆರೆಕಟ್ಟೆಗಳು ತುಂಬಿದ್ದಲ್ಲದೆ, ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿದ್ದರಿಂದ ಭರ್ತಿಯಾಗಿತ್ತು.
ಈಗ ಜಲಾಶಯದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ಈ ನೀರನ್ನು ಬಳಕೆ ಮಾಡಬೇಕಾಗಿತ್ತಾದರೂ ಯಾರೂ ಇದರತ್ತ ಗಮನಹರಿಸುತ್ತಿಲ್ಲ. ಜಲಾಶಯದ ಕಾಲುವೆಗಳು ಸೇರಿದಂತೆ ಹಲವು ಕೆಲಸಗಳು ಮುಗಿದಿದೆ. ಆದರೆ ಸಮರ್ಪಕ ನಿರ್ವಹಣೆಯಿಲ್ಲದ ಕಾರಣದಿಂದಾಗಿ ಅದು ರೈತರನ್ನು ತಲುಪುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜಲಾಶಯದಿಂದ ನೀರು ಹರಿಸಲು ನೀರುಗಂಟಿಗಳ ಅಗತ್ಯವಿದೆ. ಆದರೆ ಇಲ್ಲಿ ಇನ್ನೂ ನೀರುಗಂಟಿಗಳ ನೇಮಕವಾಗಿಲ್ಲ. ಜಲಾಶಯದಿಂದ ಸುಖಾಸುಮ್ಮನೆ ನೀರು ಪೋಲಾಗುತ್ತಿದೆ. ಅದನ್ನು ತಡೆಯುವ ಪ್ರಯತ್ನವನ್ನು ಅಧಿಕಾರಿಗಳು ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದೀಗ ಜಲಾಶಯ ವ್ಯಾಪ್ತಿಗೆ ಒಳಪಡುವ ಎಲ್ಲ ಜಮೀನುಗಳ ಮಾಲೀಕರು ಮತ್ತು ನೀರು ಬಳಕೆದಾರರನ್ನು ಒಗ್ಗೂಡಿಸಿ ನೀರು ಬಳಕೆದಾರರ ಸಂಘವನ್ನು ಸ್ಥಾಪಿಸಿ ನೀರು ಪೂರೈಸುವಂತೆ ಒತ್ತಡ ಹೇರಲು ಇಲ್ಲಿನವರು ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸರ್ವೋದಯ ಯುವಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಪಿ.ಶಾಂತಮೂರ್ತಿ ಮತ್ತು ಕಾರ್ಯದರ್ಶಿ ಎಂ.ಟಿ.ಎಸ್.ಮಂಜುನಾಥ್ ಅವರುಗಳು, ಅಜ್ಜೀಪುರ ಉಡುತೊರೆ ಜಲಾಶಯ ವ್ಯಾಪ್ತಿಗೊಳಪಡುವ ಎಲ್ಲ ಜಮೀನು ಮಾಲೀಕರು ಮತ್ತು ನೀರು ಬಳಕೆದಾರರು ಕೈಜೋಡಿಸಬೇಕಾದ ಅಗತ್ಯವಿದ್ದು, ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ನದಿ ಮೂಲಗಳಿಂದ ಜಲಾಶಯಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆಗೆ ಒಗ್ಗೂಡಿ ಪ್ರಯತ್ನಿಸಿದರೆ, ನೂತನ ಹನೂರು ತಾಲೂಕು ವ್ಯಾಪ್ತಿ ಜಲಾಶಯ ಪ್ರದೇಶಗಳು ಹಸಿರು ಕ್ರಾಂತಿ ಸಾಧಿಸುವುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.
ಅಲ್ಲದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜಲಾಶಯದ ನೀರನ್ನು ಶೀಘ್ರ ಬಳಕೆಗೆ ವ್ಯವಸ್ಥೆ ಮಾಡಿಕೊಡಬೇಕು, ಇಲ್ಲದಿದ್ದರೆ ಎಲ್ಲರು ಒಗ್ಗೂಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಂಬಂಧಿಸಿದ ಜನಪ್ರತಿನಿಧಿಗಳು ಈ ಕುರಿತಂತೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.