BY Vijayendra: ಚಾಮರಾಜನಗರದಲ್ಲಿ ಸೋಮಣ್ಣ, ವಿಜಯೇಂದ್ರ ಮತ ಬೇಟೆ: ಫಲಿಸುತ್ತಾ ಬಿಜೆಪಿ ತಂತ್ರ?
ಚಾಮರಾಜನಗರ, ಏಪ್ರಿಲ್ 21: ಬಿಜೆಪಿ ಹಿರಿಯ ನಾಯಕ, ಸಚಿವ ಸೋಮಣ್ಣ ಮುಂಜಾನೆಯಿಂದಲೇ ಚಾಮರಾಜನಗರದಲ್ಲಿ ಮಬೇಟೆ ನಡೆಸಿದರೆ, ಬಿಜೆಪಿ ಯುವ ನಾಯಕ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಬೆಳಗ್ಗೆಯಿಂದ ಸಂಜೆವರೆಗೆ ಹನೂರು ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಮಾರ್ನಿಂಗ್ ವಾಕಿಂಗ್ನಿಂದಲೇ ಸಚಿವ ಸೋಮಣ್ಣ ಶುಕ್ರವಾರ ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿದರು. ಚಾಮರಾಜನಗರದ ವಿವಿಧ ಬಡಾವಣೆಗಳು, ಟೀ ಅಂಗಡಿಗಳಿಗೂ ಭೇಟಿ ನೀಡಿದ ಸೋಮಣ್ಣ ತನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡರು, ಉಪ್ಪಾರ ಸೇರಿದಂತೆ ವಿವಿಧ ಸಮುದಾಯ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಪಕ್ಷ ಹಾಗೂತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಚಾಮರಾಜನಗರದಲ್ಲಷ್ಟೇ ಅಲ್ಲದೇ ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗಿಳಿದಿರುವ ಸಚಿವ ಸೋಮಣ್ಣ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. 2006ರಲ್ಲಿ ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಪೆಟ್ಟು ತಿಂದಿದ್ದೇನೆ, ಬರಿ ಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ನನ್ನ ಕಾರಿನ ಗ್ಲಾಸ್ ಒಡೆದಿದ್ದರು. ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮಾಜ ಎದುರು ಹಾಕಿಕೊಂಡು ಅವರುಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ, ಇದೆ ನನಗೂ ಅವರಿಗೂ ಇರುವ ವ್ಯತ್ಯಾಸ
ಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ ನಾನು ಮಂತ್ರಿನೂ ಅಲ್ಲ. ನಾನು ಅಭ್ಯರ್ಥಿ, ಅವರು ಅಭ್ಯರ್ಥಿ

ಅವನ್ಯಾರು, ಇವನ್ಯಾರು ಎನ್ನುವ ಡೈಲಾಗ್ ಕಡಿಮೆ ಮಾಡಿದರೆ ಒಳ್ಳೇದು ಎಂದು ತಿರುಗೇಟು ನೀಡಿದ್ದಾರೆ.
ಹನೂರು, ಕೊಳ್ಳೇಗಾಲದಲ್ಲಿ ವಿಜಯೇಂದ್ರ ಮಿಂಚಿನ ಸಂಚಾರ
ಹಳೇ ಮೈಸೂರು ಭಾಗದಲ್ಲಿ ಶುಕ್ರವಾರದಿಂದ ಪ್ರಚಾರಕ್ಕೆ ಧುಮುಕಿರುವ ಬಿಜೆಪಿ ಯುವ ನಾಯಕ ವಿಜಯೇಂದ್ರ ಹನೂರು, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಹಾಗೂ ಉಮ್ಮತ್ತೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.
ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಅವರನ್ನು ಮೂಲೆಗುಂಪೆ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸಿದ ಬಿ.ವೈ.ವಿಜಯೇಂದ್ರ , ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿಯಾಗಿದೆ. ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಅಂತ ಜನತೆಗೆ ಗೊತ್ತು, ಚುನಾವಣೆ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್ಗೆ ಬಂದಿದ್ದಾರೆ ಅಂತ ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಅಂತ ಬಿಂಬಿಸಲು ಹೊರಟಿದ್ದಾರೆ ಆದರೆ ಅದನ್ನು ಯಾರೂ ಒಪ್ಪಲ್ಲ ಎಂದರು.
81ನೇ ವರ್ಷದಲ್ಲೂ ಯಡಿಯೂರಪ್ಪ ಕೆಲಸ ಮಾಡ್ತಿದಾರೆ, ಅವರ ರಟ್ಟೆ ಇನ್ನೂ ಗಟ್ಟೆಯಿದೆ, ಬಿಜೆಪಿ ಅಧಿಕಾರಕ್ಕೆ ಬರುವ ತನಕ ಸುಮ್ಮನೆ ಕೂರುವ ವ್ಯಕ್ತಿ ಅಲ್ಲ ,ಯಡಿಯೂರಪ್ಪ ಒಂದು ಹೆಜ್ಜೆ ಮುಂದೆ ಇಟ್ಟರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದು ವಿರೋಧ ಪಕ್ಷದವರಿಗೆ ಗೊತ್ತಿದೆ. ಬಿಜೆಪಿಯ ಹಿರಿಯರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಒಂದು ಕಡೆ ಸೋಮಣ್ಣ ಮತ್ತೊಂದು ಕಡೆ ವಿಜಯೇಂದ್ರ ಅವರ ಪ್ರಚಾರದಿಂದ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದ್ದು ಚಾಮರಾಜನಗರದಲ್ಲಿ ಚುನಾವಣಾ ಕಾವು ಹೆಚ್ಚಿದೆ.












Click it and Unblock the Notifications