ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರಿ ಶಾಲೆಯ ಮಾದರಿ ಪದ್ಧತಿ!
ಚಾಮರಾಜನಗರ, ಸೆಪ್ಟೆಂಬರ್ 06 : ಸರ್ಕಾರಿ ಶಾಲೆಗೆ ಬರುವ ಮಕ್ಕಳು ಹೆಚ್ಚಾಗಿ ಬಡವರೇ ಆಗಿರುತ್ತಾರೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳಿಗೆ ಬೇಕಾದ ಲೇಖನ ಸಾಮಗ್ರಿ ಒದಗಿಸಲು ಪರದಾಡುವಂತಹ ಪರಿಸ್ಥಿತಿಯಿದೆ. ಹೀಗಾಗಿ ಇಂತಹ ಮಕ್ಕಳಿಗೆ ಅನುಕೂಲ ಮಾಡಿಕೊಡಲೆಂದೇ ಶಾಲೆಯಲ್ಲಿ ಉಳಿತಾಯದ ವ್ಯವಸ್ಥೆ ಮಾಡುವ ನಗರದ ಭಗೀರಥ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ.
ಈ ಶಾಲೆಯಲ್ಲಿ ಪ್ರತಿ ಮಕ್ಕಳ ಹೆಸರಿನಲ್ಲಿ ಗೋಲಕವನ್ನು ಇಡಲಾಗಿದೆ. ಆ ಗೋಲಕಕ್ಕೆ ಮಕ್ಕಳು ಒಂದಷ್ಟು ಹಣವನ್ನು ಉಳಿಸಿ ಹಾಕುತ್ತಾರೆ. ಹೀಗೆ ಉಳಿಸಿದ ಹಣವನ್ನು ವರ್ಷಕ್ಕೊಮ್ಮೆ ತೆಗೆದು ಆ ಹಣದಿಂದ ಬಡ ಮಕ್ಕಳಿಗೆ ಓದಲು ಅವಕಾಶ ಮಾಡಿಕೊಡುತ್ತಾ ಬರಲಾಗುತ್ತಿದೆ.
ಇದರಿಂದ ಬಹಳಷ್ಟು ಬಡಮಕ್ಕಳು ತಮ್ಮ ಓದನ್ನು ಮುಂದುವರೆಸಲು ಸಾಧ್ಯವಾದಂತಾಗಿದೆ. ಇದೀಗ ಶಾಲೆಯ ಈ ಉಳಿತಾಯ ವ್ಯವಸ್ಥೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

ಈ ಶಾಲೆಯಲ್ಲಿ ಬಡಮಕ್ಕಳು ತಮ್ಮ ಪುಸ್ತಕ, ಲೇಖನ ಸಾಮಾಗ್ರಿ ಹೊಂದಿಸಲು ಪರದಾಡುತ್ತಿದ್ದರು. ಶಾಲೆ ಪ್ರಾರಂಭವಾಗಿ ಮೂರು ತಿಂಗಳಾದರೂ ಕೆಲವು ಮಕ್ಕಳು ಪುಸ್ತಕವಿಲ್ಲದೆ ಶಾಲೆಗೆ ಬರುತ್ತಿದ್ದರು. ಕೇಳಿದರೆ ಮನೆಯಲ್ಲಿ ಕೊಡಿಸೋಕೆ ಹಣವಿಲ್ಲ ಎನ್ನುತ್ತಿದ್ದರು.
ಇದನ್ನು ಮನಗಂಡ ಶಿಕ್ಷಕರು ಶಾಲೆಯಲ್ಲಿ ಹುಂಡಿಯನ್ನಿಡುವ ಮೂಲಕ ಮಕ್ಕಳ ಉಳಿತಾಯದ ಹಣವನ್ನು ಸಂಗ್ರಹಿಸಿ ಅದರಿಂದ ಬಡಮಕ್ಕಳಿಗೆ ಬೇಕಾದ ಅಗತ್ಯ ಲೇಖನ ಸಾಮಗ್ರಿ ಖರೀದಿಸಿ ನೀಡುವ ಪರಿಪಾಠ ರೂಢಿಸಿಕೊಂಡು ಬಂದಿದ್ದಾರೆ.

ಇದರಿಂದ ಓದುವುದಕ್ಕೆ ತೊಂದರೆಯಾಗುತ್ತದೆ ಎಂದು ಶಾಲೆ ಬಿಡುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿ, ಮಕ್ಕಳನ್ನು ಶಾಲೆಯತ್ತ ಸೆಳೆಯುವ ಕೆಲಸವಾಗುತ್ತಿದೆ. ಹಾಗೆ ನೋಡಿದರೆ ಈ ಶಾಲೆ ಇರುವ ಬಡಾವಣೆಯಲ್ಲಿ ಬಡಜನರೇ ಹೆಚ್ಚಾಗಿದ್ದು ಹೆಚ್ಚಿನ ಹಣ ವ್ಯಯ ಮಾಡಿ ಮಕ್ಕಳನ್ನು ಓದಿಸುವುದು ಸವಾಲು ಆಗಿದೆ.
ಹೀಗಾಗಿ ಶಾಲಾ ಆರಂಭದ ದಿನಗಳಲ್ಲಿ ಪೋಷಕರಿಗೆ ಖರ್ಚಿನ ಹೊರೆ ಬರುವುದರಿಂದ ಮಕ್ಕಳಿಗೆ ಪುಸ್ತಕ, ಬಟ್ಟೆ ಸೇರಿದಂತೆ ಅಗತ್ಯ ಖರ್ಚುಗಳನ್ನು ಮಾಡಲು ಪೋಷಕರು ಹೆಣಗಾಡಬೇಕಾಗುತ್ತದೆ. ಇದನ್ನು ಅರಿತ ಶಿಕ್ಷಕರು ಅನುಕೂಲವಿರುವ ಮಕ್ಕಳು ಮತ್ತು ಅವರ ಪೋಷಕರ ಮೂಲಕ ಒಂದಷ್ಟು ಉಳಿತಾಯ ಮಾಡಿ ಅದನ್ನು ಬಡ ಮಕ್ಕಳ ಓದಿಗೆ ವ್ಯಯಿಸುವ ತೀರ್ಮಾನಕ್ಕೆ ಬಂದರು. ಆಗ ಬಂದಿದ್ದೇ ಗೋಲಕದ ಉಳಿತಾಯ.
ಪ್ರತಿ ಮಕ್ಕಳ ಹೆಸರಿನಲ್ಲಿ ಗೋಲಕವನ್ನು ತಂದಿಟ್ಟ ಶಿಕ್ಷಕರು ಮಕ್ಕಳ ತಮ್ಮ ಉಳಿತಾಯದ ಹಣವನ್ನು ಅದರಲ್ಲಿ ಸಂಗ್ರಹಿಸುವಂತೆ ಮಾಡಿದರು. ಇದರಿಂದ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಉಳಿತಾಯದ ಅರಿವು ಮೂಡಿಸಲು ಸಾಧ್ಯವಾದಂತಾಗಿದೆ.
ಇದೀಗ ಶಾಲೆಯಲ್ಲಿ ಪ್ರತಿ ಮಕ್ಕಳ ಹೆಸರಿನಲ್ಲಿರುವ ಗೋಲಕದಲ್ಲಿ ಒಂದು ರೂಪಾಯಿಯಿಂದ 10 ರೂಪಾಯಿವರೆಗೂ ಹಣವನ್ನು ತಂದು ಶಾಲೆಯಲ್ಲಿಟ್ಟಿರುವ ಗೋಲಕದಲ್ಲಿ ಹಾಕುತ್ತಾರೆ. ಅದನ್ನು ವರ್ಷಕ್ಕೆ ಎರಡು ಬಾರಿ ಪೋಷಕರ ಸಮ್ಮುಖದಲ್ಲಿ ಒಡೆದು ಅದರಲ್ಲಿರುವ ಹಣವನ್ನು ಶಾಲಾ ಖರ್ಚಿಗೆ ವ್ಯಯ ಮಾಡುತ್ತಾ ಹೆಚ್ಚಾದುದರಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ.
ಸದ್ಯ ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯಿದ್ದು, 65ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಒಟ್ಟು ಮೂರು ಜನ ಶಿಕ್ಷಕರಿದ್ದು, ಮೂರು ಕೊಠಡಿಗಳಿವೆ. ಇಲ್ಲಿಯೇ ಎಲ್ಲವೂ ನಡೆಯುತ್ತಿದೆ. ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತಿದ್ದು ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿಸುವ ಕಾರ್ಯವೂ ಇಲ್ಲಿ ನಡೆಯುತ್ತಿದ್ದು, ಜನಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ.











Click it and Unblock the Notifications