ಚಾಮರಾಜನಗರ: ಹಸು ಕೊಂದು, ರೈತರ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆ
ಚಾಮರಾಜನಗರ, ಜುಲೈ 3: ಇಬ್ಬರು ರೈತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಲಕ್ಕಿಪುರ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಶಿವಪ್ಪ ಎಂಬುವವರ ಬಾಳೆ ತೋಟದಲ್ಲಿ ಅಡಗಿ ಕುಳಿತಿದ್ದ ಹುಲಿ ಸೆರೆಗೆ ಭಾನುವಾರ ಬೆಳಗ್ಗೆ ಮಳೆ ನಡುವೆಯೇ ಅಭಿಮನ್ಯು ಹಾಗೂ ಶ್ರೀಕಂಠ ಎಂಬ ಎರಡು ಆನೆಗಳ ಮೂಲಕ ಕೂಬಿಂಗ್ ಆರಂಭಿಸಿದ್ದರು.
ಹುಲಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕರೆ ಚುಚ್ಚು ಮದ್ದು ನೀಡುವ ಮೂಲಕ ಸೆರೆ ಹಿಡಿದಿದ್ದಾರೆ. ಮನುಷ್ಯರ ಮೇಲೆ ದಾಳಿ ಮಾಡಲು ಹುಲಿಗೆ ವಯಸ್ಸಾಗಿದೆಯೇ? ಇಲ್ಲವೇ ಗಾಯಗೊಂಡಿದೆಯೇ? ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಸದ್ಯ, ಹುಲಿಯನ್ನು ಮೈಸೂರಿಗೆ ರವಾನಿಸಲಾಗುತ್ತಿದೆ.

ರೈತರ ಮೇಲೆ ದಾಳಿ; ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಗವಿಯಪ್ಪ(45) ಹಾಗೂ ರಾಜಶೇಖರ್ ಎಂಬ ರೈತರ ಮೇಲೆ ಹುಲಿ ದಾಳಿ ನಡೆದಿದ್ದು, ಕಣ್ಣು, ಕಿವಿ ಹಾಗೂ ಬೆನ್ನಿನ ಭಾಗಕ್ಕೆ ತೀವ್ರತರವಾದ ಗಾಯಗಳಾಗಿವೆ. ಗವಿಯಪ್ಪ ಎಂದಿನಂತೆ ಜಮೀನಿಗೆ ತೆರಳಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ.
ಈ ವೇಳೆ ರೈತ ಕೂಗಿಕೊಂಡ ಹಿನ್ನಲೆ ಸುತ್ತಮುತ್ತಲ ಜಮೀನಿನ ರೈತರು ಚೀರಾಡಿಕೊಂಡು ಧಾವಿಸಿದಾಗ ಹುಲಿ ಓಡಿಹೋಗಿ ಪಕ್ಕದ ಜಮೀನಿನ ಪೊದೆಯಲ್ಲಿ ಅವಿತುಕೊಂಡಿತ್ತು. ಬಾಳೆ ತೋಟದಲ್ಲಿ ಅಡಗಿದ್ದ ಹುಲಿಯನ್ನು ನೋಡಲು ತೆರಳಿದ್ದ ರಾಜಶೇಖರ್ ಮೇಲೂ ವ್ಯಾಘ್ರ ಎಗರಿ ಬಿದ್ದಿದ್ದು ತೀವ್ರವಾಗಿ ಗಾಯಗೊಳಿಸಿದ್ದರು. ತೀವ್ರ ಗಾಯಗೊಂಡಿದ್ದ ಗವಿಯಪ್ಪರನ್ನು ಮೈಸೂರಿಗೆ, ರಾಜಶೇಖರ್ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿತ್ತು.

ಮೂರು ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ; ಹುಲಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಈ ನಡುವೆ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿತ್ತು. ದಸರಾ ಆನೆ ಅಭಿಮನ್ಯು ಹಾಗೂ ಶ್ರೀಕಂಠನನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಬಾಳೆ ತೋಟದಲ್ಲಿ ಅಡಗಿದ್ದ ಹುಲಿಗೆ ಮೂರು ಬಾರಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಗಾಯಗೊಂಡಿರುವ ಹುಲಿಯನ್ನು ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.












Click it and Unblock the Notifications