ಗುಂಡ್ಲುಪೇಟೆ: ಹುಲಿ ದಾಳಿಗೆ ಕುರಿಗಾಹಿ ಬಲಿ
ಚಾಮರಾಜನಗರ, ಡಿಸೆಂಬರ್, 12: ಹುಲಿಯೊಂದು ದಾಳಿ ನಡೆಸಿ ಕುರಿಗಾಹಿಯನ್ನು ಅರ್ಧ ತಿಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಆಡಿನ ಕಣಿವೆ ಎಂಬಲ್ಲಿ ಮಂಗಳವಾರ (ಡಿಸೆಂಬರ್ 12) ನಡೆದಿದೆ.
ಆಡಿನಕಣಿವೆಯ ಬಸವ (54) ಮೃತ ವ್ಯಕ್ತಿ. ಈತ ಬುಡಕಟ್ಟು ಜನಾಂಗದವನಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ. ನಂತರ ಮನೆಗೆ ವಾಪಾಸ್ಸಾಗದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಹುಲಿ ದಾಳಿ ನಡೆಸಿ ಅರ್ಧ ತಿಂದಿರುವ ಶವ ಪತ್ತೆಯಾಗಿದೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಕುಟುಂಬಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಗ್ರಾ.ಪಂ. ಮಾಜಿ ಸದಸ್ಯನ ಮೆಲೆ ಹುಲಿ ದಾಳಿ
ಇತ್ತೀಚೆಗಷ್ಟೇ ಸರಗೂರು ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ನಿವಾಸಿಯೊಬ್ಬರನ್ನು ಹುಲಿಕೊಂದು ಹಾಕಿತ್ತು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(42) ಮೇಲೆ ಹುಲಿ ದಾಳಿಯಿಂದ ಮೃತಪಟ್ಟಿದ್ದರು.
ಬಾಲಾಜಿ ನಾಯ್ಕ ಜಮೀನಿನಲ್ಲಿ ದನ ಕಾಯುತ್ತಿದ್ದರು. ಈ ವೇಳೆ ಹುಲಿ ಏಕಾಏಕಿ ದಾಳಿ ಮಾಡಿದೆ. ಹುಲಿ ದಾಳಿಗೆ ರೈತ ಬಾಲಾಜಿ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ದೇಹವನ್ನು ಹುಲಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಈ ವೇಳೆ ದನಗಳು ಚದುರಿ ಓಡಿದ್ದು, ಹುಲಿ ದಾಳಿ ಮಾಡಿದ ದೃಶ್ಯವನ್ನು ಪಕ್ಕದ ಜಮೀನಿನಲ್ಲಿ ದನಕಾಯುವ ವ್ಯಕ್ತಿ ಕಂಡು ವಿಷಯವನ್ನು ಗ್ರಾಮಸ್ಥರಿಗೆ ಮುಟ್ಟಿಸಿದ್ದರು.
ನಂತರ ಗ್ರಾಮಸ್ಥರು ಬಂದು ನೋಡಿದಾಗ ಬಾಲಾಜಿ ನಾಯ್ಕ ಅವರ ಎಡ ಕಾಲು, ದೇಹದ ಕೆಲ ಭಾಗಗಳು, ತಲೆಯನ್ನು ಹುಲಿ ಕಿತ್ತು ತಿಂದಿದೆ ಎನ್ನಲಾಗಿತ್ತು. ಮೃತ ಬಾಲಾಜಿ ನಾಯ್ಕಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಮನೆಯ ಆಧಾರ ಸ್ತಂಭವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರೈತನ ಮೇಲೆ ಹುಲಿ ದಾಳಿ ನಡೆಸಿರುವ ಸ್ಥಳದಿಂದ ಮೊಳೆಯೂರು ವಲಯ ಅರಣ್ಯದ ಕಚೇರಿ ಸಮೀಪದಲ್ಲೇ ಇದ್ದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ವಿವಿಧ ಘೋಷಣೆ ಕೂಗಿದರು. ಇದಲ್ಲದೆ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಎಚ್ಚರಿಕೆ ನೀಡಿದ್ದರು.












Click it and Unblock the Notifications