ಚಾಮರಾಜನಗರದ ಒಂಟಿಗುಡ್ಡದಲ್ಲಿ ಹುಲಿ- ಚಿರತೆಯ ಕಳೇಬರಗಳು ಪತ್ತೆ
ಚಾಮರಾಜನಗರ, ಮೇ 28: ಗುಂಡ್ಲುಪೇಟೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹುಲಿ ಉಪಟಳ ನೀಡುತ್ತಿದ್ದರೆ, ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಹಿಂಭಾಗದಲ್ಲಿ ಒಂಟಿಗುಡ್ಡದಲ್ಲಿ ಹುಲಿ ಮತ್ತು ಚಿರತೆಯ ಕಳೇಬರಗಳು ಪತ್ತೆಯಾಗಿವೆ. ಗುಂಡ್ಲುಪೇಟೆ ತಾಲೂಕಿನ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಹಿಂಭಾಗದ ಒಂಟಿಗುಡ್ಡದಲ್ಲಿ ಭಾರೀ ಗಾತ್ರದ ಆರು ವರ್ಷದ ಹೆಣ್ಣು ಹುಲಿ ಹಾಗೂ ಏಳು ವರ್ಷದ ಗಂಡು ಚಿರತೆಯ ಕಳೇಬರಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಕೆಲವು ಯುವಕರು ಕರುವಿನ ಮೇಲೆ ದಾಳಿ ನಡೆಸಿದ ಹುಲಿಯ ಹೆಜ್ಜೆಯ ಜಾಡು ಹಿಡಿದು ಹಿಂಬಾಲಿಸಿದಾಗ ಬೆಟ್ಟದ ಬಂಡೆಯ ಮೇಲೆ ಚಿರತೆಯ ಕಳೇಬರ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಸ್ವಲ್ಪ ಮುಂದೆ ತೆರಳಿದವರಿಗೆ ಪೊದೆಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಎಂ.ಎಸ್.ನಟರಾಜು, ಅರಣ್ಯ ಇಲಾಖೆಯ ಪಶುವೈದ್ಯ ನಾಗರಾಜು ಹಾಗೂ ಸಿಬ್ಬಂದಿ ಪರಿಶೀಲಿಸಿ, ಮರಣೋತ್ತರ ಪರೀಕ್ಷೆ ನಂತರ ಅಂತ್ಯಕ್ರಿಯೆ ನಡೆಸಿದ್ದಾರೆ. ಇವು ಕಾದಾಟದಲ್ಲಿ ಸಾವನ್ನಪ್ಪಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.

ತ್ರಿಯಂಭಕಪುರ-ಶಿಂಡನಪುರದಲ್ಲಿ ಹುಲಿಯ ಭಯ:
ತ್ರಿಯಂಭಕಪುರ-ಶಿಂಡನಪುರ ಸಮೀಪದ ಜಮೀನಿನಲ್ಲಿ ಮೇಯುತ್ತಿದ್ದ ಜಾನುವಾರು ಮೇಲೆ ಹಾಡಹಗಲೇ ಹುಲಿಯೊಂದು ದಾಳಿ ನಡೆಸಿ, ಕೊಂದು ಹಾಕಿದೆ. ಇದರಿಂದ ರೈತರು ಜಮೀನಿಗೆ ತೆರಳಲು ಭಯಪಡುತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ ಮಾದಪ್ಪ ಎಂಬುವರ ಜಮೀನಿನ ಬಳಿ ಮೇಯುತ್ತಿದ್ದ ಬಸಪ್ಪ ಎಂಬುವರಿಗೆ ಸೇರಿದ ಜಾನುವಾರಿನ ಮೇಲೆ ಹುಲಿ ದಾಳಿ ಮಾಡಿದೆ. ಈ ವೇಳೆ ಕರು ಕಿರುಚಿಕೊಂಡಿದೆ. ಕರುವಿನ ಅರಚಾಟದ ಶಬ್ದ ಕೇಳಿ, ಅಕ್ಕಪಕ್ಕದ ರೈತರು ಸ್ಥಳಕ್ಕೆ ಓಡಿ ಬಂದು, ಕಲ್ಲು ಎಸೆದಿದ್ದರಿಂದ ಹುಲಿಯು ಕರುವನ್ನು ಬಿಟ್ಟು ಓಡಿ ಹೋಗಿದೆ. ಬಳಿಕ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಯು ಕಚೇರಿಗೆ ಬಂದು ಲಿಖಿತ ಮನವಿ ಸಲ್ಲಿಸುವಂತೆ ಹೇಳಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ. ಹತ್ತಕ್ಕೂ ಹೆಚ್ಚಿನ ಕುಟುಂಬಗಳು ಜಮೀನುಗಳಲ್ಲಿ ನೆಲೆಸಿದ್ದು, ಹಾಲು ಹಾಕಲು, ಗೃಹಬಳಕೆಗೆ ಬೇಕಾದ ಸಾಮಾನು- ಸರಂಜಾಮು ಕೊಳ್ಳಲು ಗ್ರಾಮಗಳತ್ತ ಬರಬೇಕಾಗಿದೆ. ಅಲ್ಲದೆ ಮಕ್ಕಳು ಶಾಲೆಗಳಿಗೆ ಹೋಗಬೇಕಾಗಿರುವುದರಿಂದ ಗ್ರಾಮದ ಜನರು ಭೀತಿಗೊಳಗಾಗಿದ್ದಾರೆ.
ಹುಲಿ ದಾಳಿಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ಕತ್ತಲಾದ ನಂತರ ಮನೆಯಿಂದ ಹೊರಬರಲು ಭಯಪಡುವಂತಾಗಿದೆ.












Click it and Unblock the Notifications