ಸಿಕ್ಕಿಬಿದ್ದರು ಅನ್ನಭಾಗ್ಯಕ್ಕೆ ಕನ್ನ ಹಾಕಿದ ಖದೀಮರು !
ಚಾಮರಾಜನಗರ, ಸೆಪ್ಟೆಂಬರ್ 27: ಬಡವರಿಗೆ ನೀಡಲಾಗುತ್ತಿರುವ ಪಡಿತರ ಅಕ್ಕಿಗೆ ಕನ್ನ ಹಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಯಳಂದೂರು ಪೊಲೀಸರು ವಾಹನ ಸಹಿತ 2500ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನ ಮಾಡಲು ಶನಿ ದೇಗುಲಕ್ಕೆ ನುಗ್ಗಿದವನು ಬೆಚ್ಚಿಬಿದ್ದು ಹೊರಬಂದ!
ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಕಲೀಂ(30) ಹಾಗೂ ಅಬ್ದುಲ್(27) ಬಂಧಿತ ಆರೋಪಿಗಳು. ಇವರು ಸರ್ಕಾರ ಬಡವರಿಗೆ ನೀಡುವ ಅಕ್ಕಿಯನ್ನು ಪಡೆದು ಅದನ್ನು ಸಂಗ್ರಹಿಸಿ ಬೇರೆಡೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದರಲ್ಲದೆ, ಸುಮಾರು 2,500 ಕೆಜಿ ಅಕ್ಕಿಯನ್ನು ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರು.
ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸಿಪಿಐ ಎ.ಕೆ.ರಾಜೇಶ್, ಮುಖ್ಯಪೇದೆ ಆರ್.ಪರಶಿವಮುರ್ತಿ, ಪೇದೆಗಳಾದ ಬಿ.ಮಹೇಶ್, ರಾಘವೇಂದ್ರ, ಇಲಿಯಾಸ್ ಪಾಷಾ, ರಮೇಶ್ ಮತ್ತು ಆಹಾರ ನಿರೀಕ್ಷಕ ಎಸ್ ನಾಗರಾಜಯ್ಯ ಅವರು ದಾಳಿ ನಡೆಸಿದ್ದು ಪಿಕಪ್ ವಾಹನವನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಅಕ್ಕಿ ತುಂಬಿಸಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದದ್ದು ಕಂಡು ಬಂದಿತು.
ಮಾಲು ಸಮೇತ ವಾಹನವನ್ನು ವಶಕ್ಕೆ ಪಡೆದು ಆರೋಪಿಗಳಾದ ಕಲೀಂ ಮತ್ತು ಅಬ್ದುಲ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.