ಹೋರಾಟದ ಎಚ್ಚರಿಕೆ: ಕೊನೆಗೂ ರೈತನಿಗೆ ಟ್ರ್ಯಾಕ್ಟರ್ ನೀಡಿದ ಶೋರೂಂ ಮಾಲೀಕ
ಚಾಮರಾಜನಗರ, ಮಾರ್ಚ್ 15: ಬ್ಯಾಂಕಿನಿಂದ ಟ್ರಾಕ್ಟರ್ ನೀಡಲು ಡಿಡಿ ಪಡೆದು ಹತ್ತು ವರ್ಷ ಕಳೆದರೂ ರೈತರೊಬ್ಬರಿಗೆ ಟ್ರಾಕ್ಟರ್ ನೀಡದೇ ಗಂಭೀರ ಲೋಪ ಎಸಗಿದ್ದ ಚಾಮರಾಜನಗರ ನಂದಿ ಟ್ರಾಕ್ಟರ್ ಶೋರೂಂ ಕೊನೆಗೂ ರೈತನಿಗೆ ಟ್ರಾಕ್ಟರ್ ನೀಡಿದೆ.
ವಂಚನೆ ಕುರಿತು ರೈತ ಸಂಘದ ಹೋರಾಟದ ಎಚ್ಚರಿಕೆ ಹಾಗೂ ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಪರಿಣಾಮ ಶೋರೂಂ ಮಾಲೀಕರು ರೈತನಿಗೆ ಟ್ರಾಕ್ಟರ್ ಹಾಗೂ ಕಲ್ಟಿವೇಟರ್ ನೀಡಿದ್ದಾರೆ.
ಅಲ್ಲದೇ ಮೃತ ರೈತ ಮಲ್ಲಪ್ಪ ಅವರಿಂದ ಈ ಹಿಂದೆ ಪಡೆದುಕೊಂಡಿದ್ದ 6.12 ಲಕ್ಷ ರೂಪಾಯಿಗಳ ಇತರ ಪರಿಕರಗಳಾದ ಟ್ರೈಲರ್, ರೊಟಾವೇಟರ್, ಡಿಸ್ಕ್ ಗಳನ್ನೂ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ಈಗ ಶೋರೂಂ ಬ್ಯಾಂಕಿನಲ್ಲಿ ರೈತರು ಬಾಕಿ ಉಳಿಸಿಕೊಂಡಿದ್ದ 1.60 ರೂ ಲಕ್ಷ ಕಟ್ಟಬೇಕಾದ ಬಾಬ್ತು ಮೃತ ರೈತ ಮಲ್ಲಪ್ಪ ಅವರ ಪುತ್ರ ಮಹೇಶ್ ಅವರ ಖಾತೆಗೆ 2 ಲಕ್ಷ ರೂ. ಜಮಾ ಮಾಡಿದ್ದಾರೆ. ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.
ಚಾಮರಾಜನಗರ ತಾಲೂಕಿನ ಯರಿಯೂರು ಗ್ರಾಮದ ಮಲ್ಲಪ್ಪ ಎಂಬುವರಿಗೆ ಟ್ರಾಕ್ಟರ್ ಖರೀದಿಸಲು ಪಟ್ಟಣದ ಅಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ 2010 ನವೆಂಬರ್ ನಲ್ಲಿ ಚಾಮರಾಜನಗರದ ನಂದಿ ಟ್ರಾಕ್ಟರ್ ಶೋರೂಂ ಹೆಸರಿಗೆ 6.12 ಲಕ್ಷ ರೂ. ಡಿಡಿಯನ್ನು ನೀಡಿದ್ದರೂ, ಶೋರೂಂನವರು ರೈತ ಮಲ್ಲಪ್ಪ ಅವರಿಗೆ ಟ್ರ್ಯಾಕ್ಟರ್ ನೀಡಿರಲಿಲ್ಲ.

ಇದಾದ ಸ್ವಲ್ಪ ದಿನಗಳಲ್ಲಿ ಮಲ್ಲಪ್ಪ ನಿಧನರಾದ ಕಾರಣ ಅವರ ಮನೆಯ ಸದಸ್ಯರು ಸಾಲದ ವಿಷಯ ಕೈಬಿಟ್ಟಿದ್ದರು. ಆದರೆ ಇತ್ತೀಚೆಗೆ ಬ್ಯಾಂಕಿನಿಂದ ಬಂದ ಒಟಿಎಸ್ ನೋಟಿಸ್ ನಿಂದ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.
ಮಲ್ಲಪ್ಪ ಅವರ ಮಗ ಮಹೇಶ್ ರೈತ ಸಂಘಟನೆಯ ಮುಖಂಡರ ಜತೆಗೂಡಿ ಮಾ.10ರಂದು ವಂಚನೆ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ನಂತರ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು ಶೋರೂಂ ಮಾಲೀಕರು ಟ್ರಾಕ್ಟರ್ ಇತರ ಉಪಕರಣಗಳನ್ನು ನೀಡಿ ರಾಜಿ ಮಾಡಿಕೊಂಡಿದ್ದಾರೆ.












Click it and Unblock the Notifications