ಗುಂಡ್ಲುಪೇಟೆ: ಶ್ರೀಗಂಧ ಮಾರಿ ಶ್ರೀಮಂತನಾಗಲು ಯತ್ನಿಸಿದಾತ ಅಂದರ್
ಗುಂಡ್ಲುಪೇಟೆ, ಜುಲೈ 11 : ಶ್ರೀಗಂಧ ಮರವನ್ನು ಕಡಿದು ತುಂಡು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ದಾಳಿ ಮಾಡಿದ ಚಾಮರಾಜನಗರ ಜಿಲ್ಲಾ ಅರಣ್ಯ ಸಂಚಾರಿ ದಳ ಸಿಬ್ಬಂದಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಬನ್ನಿತಾಳಪುರ ಗ್ರಾಮದ ನಿವಾಸಿ ರಂಗಸ್ವಾಮಿ (34) ಬಂಧಿತ ಆರೋಪಿ. ಈತ ಇಂಗಲವಾಡಿ ಗ್ರಾಮದ ಕರಿಯಪ್ಪ ಎಂಬುವರ ಜಮೀನಿನಲ್ಲಿ ಶ್ರೀಗಂಧ ಮರವನ್ನು ಕಡಿದು ಸಾಗಿಸುತ್ತಿದ್ದಾಗ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಕರಿಯಪ್ಪ ಅವರ ಜಮೀನಿನಲ್ಲಿ ಗಂಧಮರ ಇರುವುದನ್ನು ಅರಿತಿದ್ದ ರಂಗಸ್ವಾಮಿ, ಅದನ್ನು ಕಡಿದು ಸಾಗಿಸಲು ಬಹಳ ದಿನಗಳಿಂದ ಹೊಂಚು ಹಾಕಿದ್ದು, ಸಮಯ ಸಾಧಿಸಿ ಮರವನ್ನು ಕಡಿದು ತುಂಡುಗಳನ್ನಾಗಿ ಮಾಡಿ ಅದನ್ನು ಸಾಗಿಸುವ ತಯಾರಿ ನಡೆಸಿದ್ದನು.
ಈ ಬಗ್ಗೆ ಖಚಿತ ಮಾಹಿತಿ ಅರಣ್ಯ ಸಂಚಾರಿ ದಳಕ್ಕೆ ದೊರೆತಿದ್ದರಿಂದ ತಕ್ಷಣ ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿ ರಂಗಸ್ವಾಮಿ ಸುಮಾರು 15 ಕೆಜಿ ಮಾಲು ಸಹಿತ ಸಿಕ್ಕಿ ಬಿದ್ದಿದ್ದಾನೆ.
ಕಾರ್ಯಾಚರಣೆಯಲ್ಲಿ ಆರ್ಎಫ್ಓಗಳಾದ ನವೀನಕುಮಾರ, ಮುಂಕುದ್ ಅರಣ್ಯ ಸಂಚಾರಿ ದಳದ ಮುಖ್ಯಪೇದೆ ರಾಜಶೇಖರ ಇನ್ನಿತರರು ಪಾಲ್ಗೊಂಡಿದ್ದರು.