ಅರಣ್ಯದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಡಿಆರ್ ಎಫ್ಒಗಳ ವಿಶೇಷ ತಂಡ ರಚನೆ
ಚಾಮರಾಜನಗರ, ಅಕ್ಟೋಬರ್ 27: ಅರಣ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮತ್ತು ಕ್ಷಿಪ್ರ ಕಾರ್ಯಾಚರಣೆ ನಡೆಸಲು ಆರು ಉಪ ವಲಯ ಅರಣ್ಯ ಅಧಿಕಾರಿಗಳನ್ನೊಳಗೊಂಡ (ಡಿಆರ್ ಎಫ್ಒ) ತಂಡವನ್ನು ಅರಣ್ಯ ಇಲಾಖೆಯು ರಚಿಸಿದೆ.
ಮೊದಲ ಬಾರಿಗೆ ಚಾಮರಾಜನಗರದ ಪ್ರಾದೇಶಿಕ ವೃತ್ತದಲ್ಲಿ ಇಂತಹ ಒಂದು ತಂಡವನ್ನು ರಚಿಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಕ್ಷಿಪ್ರ ಕಾರ್ಯ ಪಡೆ ಮಾದರಿಯಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಮನೋಜ್ ಕುಮಾರ್ ಅವರು ತಿಳಿಸಿದರು. ಈಗಾಗಲೇ ಅರಣ್ಯ ಇಲಾಖೆಯು ಕೊಡಗಿನಲ್ಲಿ ಆನೆಗಳನ್ನು ಕಾಡಿಗೆ ಅಟ್ಟಲು, ಕಳ್ಳ ಬೇಟೆ ತಡೆಯಲು ಕ್ಷಿಪ್ರ ಕಾರ್ಯ ಪಡೆಯನ್ನು ರಚಿಸಿದ್ದು, ಅದೇ ಮಾದರಿಯಲ್ಲಿ ಇದು ಕಾರ್ಯ ನಿರ್ವಹಿಸಲಿದೆ.
ಸದ್ಯಕ್ಕೆ ಅದು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ (ಬಿಆರ್ ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿದ್ದು, 'ಆರು ಡಿಆರ್ ಎಫ್ಒಗಳನ್ನು ಸೇರಿಸಿ ಪ್ರತ್ಯೇಕ ತಂಡವೊಂದನ್ನು ಮಾಡಲಾಗಿದೆ. ಸದ್ಯಕ್ಕೆ ಈ ತಂಡ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡಲಿದ್ದು, ನಂತರ ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದವರೂ ಅರಣ್ಯ ಸಂರಕ್ಷಣೆ ಕಾರ್ಯಕ್ಕೆ ತಂಡ ಬಳಸಿಕೊಳ್ಳಬಹುದು' ಎಂದು ಮನೋಜ್ ಕುಮಾರ್ ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಮೀಸಲು ಪಡೆ ಇರುವಂತೆ, ಈ ತಂಡವೂ ಮೀಸಲು ಕಾರ್ಯಕ್ಕೆ ಸೀಮಿತ. ತುರ್ತು ಪರಿಸ್ಥಿತಿಯಲ್ಲಿ ಆಯಾ ಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಈ ತಂಡ ನೆರವಾಗಲಿದೆ.
'ತುರ್ತು ಸಂದರ್ಭದಲ್ಲಿ ಇಲಾಖೆಯು ಈ ತಂಡದ ನೆರವು ಪಡೆಯಬಹುದು. ಉದಾಹರಣೆಗೆ, ಕಾಳ್ಗಿಚ್ಚು ಉಂಟಾದ ಸಂದರ್ಭದಲ್ಲಿ ಅಥವಾ ಕಳ್ಳಬೇಟೆ ಪ್ರಕರಣಗಳಲ್ಲಿ ತನಿಖೆ ವೇಳೆ... ಹೀಗೆ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕೆಲಸಕ್ಕೆ ಈ ತಂಡ ನೆರವಾಗಲಿದೆ' ಎಂದು ಮನೋಜ್ ಕುಮಾರ್ ಅವರು ವಿವರಿಸಿದರು.
'ಸದ್ಯಕ್ಕೆ ತಂಡವನ್ನು ಮಾತ್ರ ರಚಿಸಲಾಗಿದೆ. ಇದಕ್ಕೆ ಪ್ರತ್ಯೇಕ ವಾಹನ ಹಾಗೂ ಉಪಕರಣಗಳ ಅಗತ್ಯವಿದೆ. ಅದನ್ನು ಶೀಘ್ರದಲ್ಲಿ ಕೊಡಿಸಲಾಗುವುದು. ಇಲಾಖೆಗೆ ಪತ್ರ ಬರೆದು, ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ' ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications