ರಾಜ್ಯದಲ್ಲಿ ನಿಗದಿಯಂತೆ ಎಸ್ಎಸ್ಎಲ್ಸಿ ಪರೀಕ್ಷೆ: ಶಿಕ್ಷಣ ಸಚಿವ
ಚಾಮರಾಜನಗರ, ಫೆಬ್ರವರಿ 06: ಕರ್ನಾಟಕ ರಾಜ್ಯದಲ್ಲಿ ನಿಗದಿಯಂತೆ ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಎಸ್ಎಸ್ಎಲ್ಸಿ ಹಾಗೂ ಏಪ್ರಿಲ್ 16ರಿಂದ ಮೇ 4ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ.
ನಗರದ ದೀನಬಂಧು ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಸಂಕೀರ್ಣವನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, "ಸರಿ ಸುಮಾರು ಶೇಕಡಾ 99ರಷ್ಟು ಶಾಲೆಗಳು ತೆರೆದಿದ್ದವು. ಮಕ್ಕಳ ಹಾಜರಾತಿಯೂ ಉತ್ತಮವಾಗಿದೆ. ಈ ಹಿನ್ನೆಲೆಯಿಂದಾಗಿ ನಿಗದಿಯಂತೆ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ನಡೆಯಲಿದೆ," ಎಂದು ತಿಳಿಸಿದರು.
"ಪರೀಕ್ಷೆಯ ದಿನವನ್ನು ಒಂದು ದಿನವೂ ಕೂಡಾ ಹೆಚ್ಚು ಕಡಿಮೆ ಮಾಡುವುದಿಲ್ಲ. ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಅನೇಕ ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಆದರೆ ದೇವದ ದಯೆಯಿಂದ ನಮ್ಮ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಶೇಕಡಾ 99ರಷ್ಟು ಶಾಲೆಗಳು ತೆರೆದಿದ್ದವು," ಎಂದು ವಿವರಿಸಿದ್ದಾರೆ.

ಕಳೆದ ತಿಂಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 28ರಂದು ಪರೀಕ್ಷೆಗಳು ಆರಂಭವಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾದರೆ ಪರೀಕ್ಷೆ ನಡೆಸುವ ಕುರಿತು ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ.
ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನು ಪರೀಕ್ಷೆ ಆರಂಭದಲ್ಲಿ ನೀಡಲಾಗುತ್ತದೆ. ಅಂಧ, ಕಿವುಡ ಮತ್ತು ಮೂಗ ಹಾಗೂ ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ, ಪರೀಕ್ಷೆ ಬರೆಯಲು ನಿಗದಿಪಡಿಸಿರುವ ಸಮಯದ ಜೊತೆಗೆ 1 ಗಂಟೆಯ ಸಮಯವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. (ಒನ್ಇಂಡಿಯಾ ಸುದ್ದಿ)











Click it and Unblock the Notifications