ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಕೊಲೆಗೈದ ಮಗ
ಚಾಮರಾಜನಗರ, ನವೆಂಬರ್.12: ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆಗೈದ ಘಟನೆ ಹನೂರು ತಾಲೂಕಿನ ಕಂಚಗಳ್ಳಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಂಚಗಳ್ಳಿ ಗ್ರಾಮದ ಮುಕುಂದ ಮತ್ತು ರಂಗ ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರು ಸೇರಿ ಅದೇ ಗ್ರಾಮದ ಬಸವರಾಜ್ ಎಂಬಾತನನ್ನು ಕೊಲೆಗೈದು ಬಳಿಕ ಕೈಕಾಲು ಕಟ್ಟಿ ಗುಂಡಾಲ್ ಜಲಾಶಯಕ್ಕೆ ಎಸೆದಿದ್ದರು. ಕೊಳೆತ ಶವ ಕಳೆದ ನಾಲ್ಕೈದು ದಿನಗಳ ಹಿಂದೆ ಜಲಾಶಯದಲ್ಲಿ ದೊರೆತಿತ್ತು.
ಶವದ ಮರಣೋತ್ತರ ಪರೀಕ್ಷೆ ನಡೆಸಿದ ಹನೂರು ಠಾಣೆ ಪೊಲೀಸರು ಶವವನ್ನು ವಾರಾಸುದಾರರಿಗೆ ನೀಡಿದ್ದರಲ್ಲದೆ, ಮೃತ ಬಸವರಾಜು ಅವರ ಪತ್ನಿ ಮಹದೇವಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಬ್ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ತನಿಖೆ ಆರಂಭಿಸಿದ್ದರು.

ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ಬಸವರಾಜ್ ಅದೇ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಆಕೆಯ ಪುತ್ರ ಮುಕುಂದನ ಮೇಲೆ ಸಂಶಯ ಬಂದಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಕೊಲೆ ಮಾಡಿದ್ದನ್ನು ಬಾಯಿಬಿಟ್ಟಿದ್ದಾನೆ.
ಬಸವರಾಜು ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿರುವ ವಿಚಾರ ತಿಳಿದ ಮುಕುಂದ ಕೊಲೆ ಮಾಡಲು ಗೆಳೆಯ ರಂಗನೊಂದಿಗೆ ಸೇರಿ ಸ್ಕೆಚ್ ಹಾಕಿದ್ದು, ಅದರಂತೆ ಬಸವರಾಜ್ನೊಂದಿಗೆ ಎಣ್ಣೆ ಪಾರ್ಟಿಯನ್ನಿಟ್ಟುಕೊಂಡು ಅಲ್ಲಿ ಬಸವರಾಜ್ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ.
ಆ ನಂತರ ತಮ್ಮ ಬೈಕ್ ನಲ್ಲಿ ಕರೆದೊಯ್ದು ಥಳಿಸಿ ಬಳಿಕ, ಪ್ರಜ್ಞೆ ತಪ್ಪಿದ ಆತನನ್ನು ಲುಂಗಿ, ಶರ್ಟ್ ನಿಂದ ಕೈ-ಕಾಲು ಕಟ್ಟಿ ಗುಂಡಾಲ್ ಜಲಾಶಯಕ್ಕೆ ಎಸೆದು ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಬ್ಬರನ್ನು ಹನೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications