ಕೋಡಿ ಮಹದೇಶ್ವರನ ಭೇಟಿಗೆ ಸ್ವತಃ ಬಂದ ನಾಗಪ್ಪ!
ಚಾಮರಾಜನಗರ, ನವೆಂಬರ್ 23 : ನಾಗರಹಾವನ್ನು ಪೂಜ್ಯಭಾವನೆಯಿಂದ ನಾವು ಕಾಣುತ್ತೇವೆ. ಹೀಗಿರುವಾಗ ಅದು ದೇವಸ್ಥಾನಕ್ಕೆ ಬಂದರಂತೂ ಭಕ್ತರ ಖುಷಿಗೆ ಪಾರವೇ ಇರುವುದಿಲ್ಲ. ಇಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದ ಸಮೀಪದ ಕೋಡಿ ಮಹದೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ದೇವಾಲಯದ ಮುಂಭಾಗ ಇರುವ ಬಸವನಮೂರ್ತಿ ಮೇಲೆ ಕಾಣಿಸಿಕೊಂಡ ನಾಗರ ಹಾವು ಕೆಲ ಕಾಲ ಅಲ್ಲಿಯೇ ಇದ್ದು ಭಕ್ತರಿಗೆ ಅಚ್ಚರಿ ಹುಟ್ಟಿಸಿತು. ಈ ದೃಶ್ಯಕಂಡ ಕೆಲವರು ಈಶ್ವರನ ಭೇಟಿಗೆ ಆತನ ಕೊರಳಲ್ಲಿರುವ ನಾಗಪ್ಪನೇ ಸ್ವತಃ ಬಂದನೆಂದು ಕೈಮುಗಿದು ಭಕ್ತಿಭಾವದಿಂದ ಪ್ರಾರ್ಥಿಸಿದರು. [ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!]
ಕೂತನೂರು ಗ್ರಾಮದ ಹೊರವಲಯದಲ್ಲಿರುವ ಕೋಡಿ ಮಹದೇಶ್ವರ ದೇವಸ್ಥಾನದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕಡೆಯ ಕಾರ್ತಿಕ ಸೋಮವಾರದಂದು ಜಾತ್ರೆ ನಡೆಸಲಾಗುತ್ತದೆ. ಮುಂದಿನ ಸೋಮವಾರ ಜಾತ್ರೆ ನಡೆಯಲಿದ್ದು ಇದಕ್ಕಾಗಿ ದೇವಾಲಯವನ್ನು ಶುಚಿಗೊಳಿಸುವ, ಬಣ್ಣ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. [ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?]
ದೇವಾಲಯದ ಕೆಲಸಕ್ಕೆಂದು ಕಾರ್ಮಿಕರ ಜೊತೆಗೆ ತೆರಳಿದ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ದೇವಾಲಯದ ಎದುರು ಇರುವ ಬಸವನ ಕಲ್ಲಿನ ಮೂರ್ತಿಯನ್ನು ಸುತ್ತಿಕೊಂಡು ಭಾರೀ ಗಾತ್ರದ ನಾಗರಹಾವೊಂದು ಮಲಗಿತ್ತು. ಅಷ್ಟೇ ಅಲ್ಲದೆ ಗರ್ಭಗುಡಿಯ ಒಳಗೆ ನುಗ್ಗಲು ಪ್ರಯತ್ನಿಸುತ್ತಿತ್ತು. ಇದನ್ನು ಕಂಡು ಭೀತಿಗೊಳಗಾದ ಕಾರ್ಮಿಕರು ಕೂಡಲೇ ಗರ್ಭಗುಡಿಯ ಬಾಗಿಲು ಮುಚ್ಚಿದರು.
ವಿಷಯ ತಿಳಿದ ಜನರು ತಂಡೋಪತಂಡವಾಗಿ ಆಗಮಿಸಿ ತಮ್ಮ ಮೊಬೈಲುಗಳಿಂದ ಫೋಟೋ ತೆಗೆಯತೊಡಗಿದರು. ಕೆಲ ಸಮಯ ಹೆಡೆಬಿಚ್ಚಿ ಸುತ್ತ ನೋಡುತ್ತಾ ಮತ್ತೆ ಅಲ್ಲೆ ಮಲಗುತ್ತಾ ಕಾಲ ಕಳೆದ ಹಾವನ್ನು ಜನ ಧೈರ್ಯ ಮಾಡಿ ಕೋಲಿನಿಂದ ಸರಿಸಿದರು. ಬಳಿಕ ಅದು ಬಸವನ ವಿಗ್ರಹ ಬಿಟ್ಟು ಪೊದೆಯತ್ತ ತೆರಳಿತು. ನೆಮ್ಮದಿಯುಸಿರು ಬಿಟ್ಟ ಜನರಲ್ಲಿ ಬರೀ ನಾಗರಹಾವಿನದ್ದೇ ಮಾತು. [ಕಡಿತಕ್ಕೊಳಗಾದ ಯುವಕ ಪಾರು, ಹಾವು ಸಾವು!]