ನಾನು ಟಿಕೆಟ್ ಕೊಡದಿದ್ರೆ ಸುಧಾಕರ್ ಈಗ ಮಂತ್ರಿ ಆಗ್ತಿದ್ರಾ: ಸಿದ್ದರಾಮಯ್ಯ
ಚಾಮರಾಜನಗರ, ಜುಲೈ 8: ಮಾಜಿ ಸಿಎಂ ಆಗಿರುವ ಸಿದ್ದರಾಮಯ್ಯ ಪ್ರತಿ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ ಎಂಬ ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ "ನಾನು ಟಿಕೆಟ್ ಕೊಡದಿದ್ದರೇ ಸುಧಾಕರ್ ಈಗ ಮಂತ್ರಿ ಆಗುತ್ತಿದ್ರಾ" ಎಂದು ಪ್ರಶ್ನಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಬಸ್ತಿಪುರ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಕಾಂಗ್ರೆಸ್ನಿಂದ 2013 ರಲ್ಲಿ ನಾನು ಟಿಕೆಟ್ ಕೊಡದಿದ್ದರೇ ಸುಧಾಕರ್ ಎಂಎಲ್ಎ ಆಗ್ತಿದ್ರಾ, ಅದಾದ ಬಳಿಕ ಎಚ್.ಸಿ.ಮಹಾದೇವಪ್ಪರಿಂದ ಶಿಫಾರಸ್ಸು ಮಾಡಿಸಿ ಟಿಕೆಟ್ ಪಡೆಯದಿದ್ದರೆ ಈಗ ಆತ ಮಂತ್ರಿ ಆಗ್ತಿದ್ರಾ," ಎಂದು ಆರೋಗ್ಯ ಸಚಿವ ಸುಧಾಕರ್ ಟೀಕೆಗೆ ಖಾರವಾಗಿ ಉತ್ತರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, "ಈ ಸರಕಾರ ಬಂಡತನಕ್ಕೆ ಬಿದ್ದಿದೆ, ಮಕ್ಕಳಿಗೆ ಬಟ್ಟೆ, ಸೈಕಲ್ ಕೊಡೋದು ಶಾಲೆಗೆ ಬರಲಿ ಅಂತ. ಇಂದು ವಿದ್ಯಾರ್ಥಿಗಳು ಲಕ್ಷಗಳ ಸಂಖ್ಯೆಯಲ್ಲಿ ಡ್ರಾಪ್ ಔಟ್ ಆಗುತ್ತಿದ್ದಾರೆ. ಯಾಕೆ ಡ್ರಾಪ್ ಔಟ್ ಆಗ್ತೀದಾರೆ, ಬಟ್ಟೆ ತೆಗೆದುಕೊಳ್ಳಕಾಗಲ್ಲ, ಫೀಜ್ ಕಟ್ಟಾಕಾಗೊಲ್ಲ, ಶೂ-ಸಾಕ್ಸ್ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ, ಅದಕ್ಕೆ ಶಾಲೆ ಬಿಡ್ತಿದ್ದಾರೆ. ಈ ಮಂತ್ರಿಗಳಿಗೆ ಮಾನ-ಮರ್ಯಾದೆ ಇದೆಯಾ," ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಉತ್ಸವ ಅಂಥಾ ಎಲ್ಲೂ ಇಲ್ಲಾ, ಆ ಥರ ಉತ್ಸವ ನಡೆಯೋದು ಇಲ್ಲಾ, ಆಗಸ್ಟ್ 3 ರಂದು ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತಿದೆ ಎಂದು ಮಾಜಿ ಸಚಿವ, ಸಿದ್ದರಾಮಯ್ಯ ಆಪ್ತ ಎಚ್.ಸಿ.ಮಹಾದೇವಪ್ಪ ಸ್ಪಷ್ಟ ಪಡಿಸಿದ್ದಾರೆ.
ಸಿದ್ದರಾಮಯ್ಯ ಉತ್ಸವ ಎಂದರೆ ವ್ಯಕ್ತಿ ಪೂಜೆ ಮಾಡಿದಂತಾಗುತ್ತದೆ. ಆ ರೀತಿ ಉತ್ಸವಕ್ಕೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲಾ. ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಎಂದು ಅಭಿಮಾನಿಗಳು ಆಚರಿಸುತ್ತಿದ್ದು, ಅದರಲ್ಲಿ ಸಿದ್ದರಾಮಯ್ಯ ನಡೆದು ಬಂದ ದಾರಿ, ರಾಜಕೀಯ ನಿಲುವಿನ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮೋತ್ಸವ ಸಮಿತಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ಧೃವನಾರಾಯಣ್ ಹೆಸರು ಕೈಬಿಟ್ಟಿದ್ದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಧೃವನಾರಾಯಣ್ ರನ್ನು ಕೈಬಿಟ್ಟಿಲ್ಲ ಎನ್ಎಸ್ಯುವಿ ವಿಂಗ್ನ ಮುಖ್ಯಸ್ಥರಾಗಿದ್ದಾರೆ ಎಂದು ಮಹಾದೇವಪ್ಪ ಸ್ಪಷ್ಟನೆ ನೀಡಿದರು.
ಎರಡು ದಿನಗಳ ಹಿಂದೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸುಧಾಕರ್, "224 ಕ್ಷೇತ್ರದಲ್ಲೂ ಕರೆಯೋದು ಸರ್ವೇ ಸಾಮಾನ್ಯ. ಆದರೆ ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದವರು, ಅವರ ಜಿಲ್ಲೆಯ ಜನ ಕೈ ಬಿಟ್ಟರೂ, ಬೇರೆ ಜಿಲ್ಲೆಯವರು ಕೈ ಹಿಡಿದರು. ಈಗ ಬಾದಾಮಿ ಕ್ಷೇತ್ರವನ್ನು ಬಿಟ್ಟು ಹೋಗ್ತೀನಿ ಅಂದರೆ ಯುವ ಜನತೆಗೆ ಏನೂ ಸಂದೇಶ ಕೊಡ್ತಾರೆ, ದೊಡ್ಡ ನಾಯಕರು, ಅಪಾರ ರಾಜಕೀಯ ಅನುಭವವುಳ್ಳವರು. ಇಂತವರು ಚುನಾವಣೆಯಿಂದ ಚುನಾವಣೆಗೆ ಬೇರೆ ಕ್ಷೇತ್ರ ಹುಡುಕುವುದು ಸರಿಯಲ್ಲ," ಎಂದು ಅವರು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದರು.












Click it and Unblock the Notifications