ನೋಟು ಬದಲಿಸಲು ಶೇ 30 ಕಮಿಷನ್: ಬ್ಯಾಂಕ್ ನೌಕರ ಅಮಾನತು
1000 ಮತ್ತು 500 ಮುಖ ಬೆಲೆಯ ಹಳೆಯ ನೋಟು ಬದಲಾವಣೆಗೆ ಗುರುವಾರ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಈತ ಚಿನ್ನದ ವ್ಯಾಪಾರಿಗೆ ಹಣ ಬದಲಾಯಿಸಿ ಕೊಟ್ಟಿದ್ದು, ಈ ಕೃತ್ಯ ಸಿಸಿ ಟಿವಿಯಲ್ಲಿ ಬಯಲಾಗಿದೆ.
ಚಾಮರಾಜನಗರ, ನವೆಂಬರ್ 25: ಚಿನ್ನದ ವ್ಯಾಪಾರಿ ಬಳಿಯಿದ್ದ ಕಪ್ಪು ಹಣವನ್ನು ಕಮಿಷನ್ ಆಸೆಯಿಂದ ಬದಲಿಸಲು ಹೋಗಿ ಬ್ಯಾಂಕ್ ಕ್ಯಾಷಿಯರ್ ಸಿಕ್ಕಿಬಿದ್ದ ಘಟನೆ ಕೊಳ್ಳೇಗಾಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ನಡೆದಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಲ್ಲಿ ಹೆಡ್ ಕ್ಯಾಷಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪರಶಿವಮೂರ್ತಿ ಕೃತ್ಯದಲ್ಲಿ ಪಾಲುದಾರನಾಗಿ ಅಮಾನತುಗೊಂಡ ವ್ಯಕ್ತಿ. 1000 ಮತ್ತು 500 ಮುಖ ಬೆಲೆಯ ಹಳೆಯ ನೋಟು ಬದಲಾವಣೆಗೆ ಗುರುವಾರ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಈತ ಚಿನ್ನದ ವ್ಯಾಪಾರಿಗೆ ಹಣ ಬದಲಾಯಿಸಿ ಕೊಟ್ಟಿದ್ದು, ಈ ಕೃತ್ಯ ಸಿಸಿ ಟಿವಿಯಲ್ಲಿ ಬಯಲಾಗಿದೆ.[ಡಿಸೆಂಬರ್ 15 ರವರೆಗೆ ನೋಟು ಚಲಾವಣೆಗೆ ಅವಕಾಶ]
ಹಳೆಯ ನೋಟುಗಳನ್ನು ಬದಲಾಯಿಸಲು ಗುರುವಾರ (ನ.24) ಅಂತಿಮ ದಿನವಾಗಿತ್ತು. ಈ ಬಗ್ಗೆ ಮೊದಲೇ ವ್ಯವಹಾರ ಕುದುರಿಸಿ, ಚಿನ್ನದ ವ್ಯಾಪಾರಿ ವೇಣುಗೋಪಾಲ್ ಅವರಿಂದ ಹಳೆಯ ನೋಟುಗಳನ್ನು ಪಡೆದು ಅದಕ್ಕೆ ಬದಲಾಗಿ ಹೊಸ ನೋಟುಗಳನ್ನು ಪಡೆದಿದ್ದಾನೆ. ಒಂದು ಕೋಟಿ ರುಪಾಯಿಗೆ 30 ಲಕ್ಷ ಕಮಿಷನ್ ಪಡೆದಿದ್ದಾನೆ ಎಂಬ ಸುದ್ದಿಯೂ ಇದೆ.[ಕಪ್ಪು ಹಣ ಬದಲಿಸುವ ದಂಧೆಯ ಕೈಗಳು, ಸರಕಾರ ಏನ್ ಮಾಡ್ಬೇಕು?]
ಈತ ಈ ಹಿಂದೆ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.