ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಮತ್ತೆ ಭುಗಿಲೆದ್ದ ವಿವಾದ
ಚಾಮರಾಜನಗರ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲವನ್ನು ತಮ್ಮ ಸುಪರ್ಧಿಗೆ ಪಡೆಯುವ ಸಲುವಾಗಿ ಪ್ರಸಾದಕ್ಕೆ ವಿಷ ಬೆರೆಸಿ ಹಲವು ಭಕ್ತರ ಸಾವಿಗೆ ಕಾರಣವಾದ ಆರೋಪದಡಿ ಮಹದೇಶ್ವರಬೆಟ್ಟದ ಸಾಲೂರು ಮಠದ ಕಿರಿಯ ಇಮ್ಮಡಿ ಮಹದೇವಸ್ವಾಮಿ ಜೈಲ್ ಸೇರಿದ ಬಳಿಕ ಸಾಲೂರು ಮಠ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.
ಇಷ್ಟಕ್ಕೂ ಮಹದೇಶ್ವರಬೆಟ್ಟದಲ್ಲಿರುವ ಸಾಲೂರು ಮಠಕ್ಕೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆಯಿದೆ. ಆದರೆ ಕಿರಿಯ ಇಮ್ಮಡಿ ಮಹದೇವಸ್ವಾಮಿ ಅವರು ವಿಷ ಪ್ರಾಸನದಲ್ಲಿ ಆರೋಪಿಯಾಗಿ ಜೈಲ್ ಸೇರಿದ ಬಳಿಕ ಒಳ್ಳೆಯ ವಿಚಾರಕ್ಕಿಂತ ವಿವಾದಾತ್ಮಕ ವಿಚಾರಕ್ಕೆ ಹೆಚ್ಚು ಪ್ರಚಾರ ಪಡೆಯುತ್ತಿದೆ. ಈ ಹಿಂದೆ ಜೈಲ್ನಲ್ಲಿದ್ದುಕೊಂಡೇ ಇಮ್ಮಡಿ ಮಹದೇವಸ್ವಾಮಿ ಆಸ್ತಿಯನ್ನು ತನ್ನ ಹೆಸರಿನಲ್ಲಿ ಮಾಡಿಸಿಕೊಂಡ ವಿಷಯ ಬಹಿರಂಗವಾಗಿ ಭಾರೀ ಚರ್ಚೆಗೆ ಕಾರಣವಾಗಿತ್ತಲ್ಲದೆ, ಈ ಸಂಬಂಧ ಈ ಪ್ರಕರಣದಲ್ಲಿ ಶಾಮೀಲಾದ ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.
ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿಗೆ ಮಠದಿಂದ ಕೊಕ್?
ಜತೆಗೆ ಆಗಸ್ಟ್.೨೮ರಂದು ಮಠದಲ್ಲಿ ಹಿರಿಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಸುಳವಾಡಿ ವಿಷ ಪ್ರಸಾದ ದುರಂತದ ಪ್ರಮುಖ ಆರೋಪಿಯಾಗಿರುವ ಇಮ್ಮಡಿ ಮಹಾದೇವಸ್ವಾಮಿ ಅವರನ್ನು ಮಠದ ಸ್ವಾಮೀಜಿ ಸ್ಥಾನದಿಂದ ಉಚ್ಛಾಟಿಸಲಾಗಿತ್ತು. ಜತೆಗೆ ಮಠದ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಕುರಿತು ಚರ್ಚಿಸಲಾಗಿತ್ತು.
ಆದರೆ ಇದೀಗ ಯಾರ ಗಮನಕ್ಕೂ ತಾರದೇ ಮಠದ ಹಿರಿಯ ಸ್ವಾಮೀಜಿ ಅವರು ತಮ್ಮ ಸಂಬಂಧಿಯನ್ನೇ ತನ್ನ ಉತ್ತರಾಧಿಕಾರಿ ಎಂದು ತೋರಿಸಿ, ಅವರ ಹೆಸರಿಗೆ ಮಠದ ಆಸ್ತಿಯನ್ನು ವಿಲ್ ಮಾಡಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಕೆಲವು ಮಠದ ಭಕ್ತರು ಹಿರಿಯ ಸ್ವಾಮೀಜಿ ವಿರುದ್ಧವೇ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.
ಇಮ್ಮಡಿ ಮಹದೇವಸ್ವಾಮಿಗೆ ಖಾತೆ ಮಾಡಿಕೊಟ್ಟವರ ಅಮಾನತು
ಸಾಲೂರು ಮಠದ ವಿದ್ಯಾಸಂಸ್ಥೆಯಲ್ಲೇ ವಿದ್ಯಾರ್ಥಿಯಾಗಿದ್ದ ನಾಗೇಂದ್ರ ಎಂಬುವವರ ಹೆಸರಿಗೆ ಮೈಸೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕಳೆದ ಜು.೨೬ರಂದು ಹಿರಿಯ ಗುರು ಸ್ವಾಮೀಜಿ ಅವರು ವಿಲ್ ಮಾಡಿದ್ದಾರೆ. ವಿಲ್ನಲ್ಲಿ ತನಗೆ ವಯಸ್ಸಾಗಿದ್ದು, ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ತನ್ನ ಉತ್ತರಾಧಿಕಾರಿಯಾಗಿ ನಾಗೇಂದ್ರ ಅವರಿಗೆ ಪಟ್ಟ ಕಟ್ಟಬೇಕಾಗಿದೆ. ಆದ್ದರಿಂದ ಈಗಲೇ ಅವರ ಹೆಸರಿಗೆ ಮಠದ ಆಸ್ತಿಗಳನ್ನು ವಿಲ್ ಮಾಡಲಾಗುತ್ತಿದ್ದು, ನನ್ನ ನಂತರದಲ್ಲಿ ಮಠದ ಸರ್ವ ಆಸ್ತಿಗೂ ಅವರೇ ಹಕ್ಕುದಾರರಾಗಲಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮಠದ ಧಾರ್ಮಿಕ ಅಧಿಕಾರ, ಚರ ಮತ್ತು ಸ್ಥಿರ ಆಸ್ತಿಗಳ ಅಧಿಕಾರ, ಮಲೆಮಹದೇಶ್ವರ ಶ್ರೀಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯತ್ವ ಎಲ್ಲವೂ ತನ್ನ ಉತ್ತರಾಧಿಕಾರಿ ನಾಗೇಂದ್ರ ಅವರಿಗೆ ಸೇರತಕ್ಕದ್ದು. ಒಂದು ವೇಳೆ ಉತ್ತರಾಧಿಕಾರಿಯನ್ನು ನೇಮಿಸುವ ಮುನ್ನವೇ ತಾವು ಶಿವೈಕ್ಯವಾದರೇ ಸುತ್ತೂರು ಶ್ರೀಯವರು ಮುಂದೆ ನಿಂತು ನಮ್ಮ ಉತ್ತರಾಧಿಕಾರಿಗೆ ಪಟ್ಟಾಧಿಕಾರವನ್ನು ವಹಿಸಿಕೊಡಬೇಕು ಎಂದು ವಿಲ್ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಮತ್ತೊಂದು ವಿಚಾರವನ್ನು ಸ್ಪಷ್ಟ ಪಡಿಸಲಾಗಿದೆ ಅದೇನೆಂದರೆ, ಮಠಕ್ಕೆ ಸೇರಿದ ಆಸ್ತಿಯನ್ನು ಪಟ್ಟಿ ಮಾಡಿ ತಾವು ಮೈಸೂರಿನಲ್ಲಿದ್ದುರಿಂದ ಮತ್ತು ಓಡಾಡಲು ತೊಂದರೆಯಾಗಿರುವ ಕಾರಣ ಮೈಸೂರಿನಲ್ಲಿ ವಿಲ್ ಮಾಡಿಸಿರುವುದಾಗಿ ಅವರು ದಾಖಲೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.
ಸುಳ್ವಾಡಿ ವಿಷಪ್ರಸಾದ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಆದರೆ ಉತ್ತರಾಧಿಕಾರಿ ಆಯ್ಕೆ ಸಮಿತಿಯನ್ನು ಸ್ವಾಮೀಜಿ ನೇತೃತ್ವದಲ್ಲೇ ರಚಿಸಲಾಗಿತ್ತು. ಆ ಸಮಿತಿಯಲ್ಲಿ ಹನೂರು ಕ್ಷೇತ್ರದ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಕೊಳ್ಳೇಗಾಲದ ವೀರಶೈವ ಮುಖಂಡ ತೋಟೇಶ್, ವಕೀಲ ಶಶಿಬಿಂಬ, ಪೊನ್ನಾಚಿ ಮಹಾದೇವಸ್ವಾಮಿ, ಸೇರಿದಂತೆ ಹಲವು ಮುಖಂಡರಿದ್ದು, ಯಾರು ಉತ್ತರಾಧಿಕಾರಿಯಾಗಬೇಕು ಎಂಬುದು ಅಂತಿಮವಾಗಿರಲಿಲ್ಲ ಹೀಗಾಗಿ ಸಮಿತಿ ಮಠದ ಉತ್ತರಾಧಿಕಾರಿಯನ್ನು ಅಂತಿಮಗೊಳಿಸುವ ಮೊದಲೇ ಹಿರಿಯ ಗುರು ಸ್ವಾಮೀಜಿ ಅವರು ತಾವೇ ನಿರ್ಧಾರ ಕೈಗೊಂಡು ನಾಗೇಂದ್ರ ಎಂಬುವವರನ್ನು ಉತ್ತರಾಧಿಕಾರಿ ಎಂದು ಬಿಂಬಿಸಿ, ಯಾರ ಗಮನಕ್ಕೂ ತರದೆ ಆಸ್ತಿ ವಿಲ್ ಮಾಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.