ನಿಂತ ಕಾರಿನ ಮೇಲೆ ಮಗುಚಿದ ಲಾರಿ: ವಿಜಯಪುರದ ಮೂವರ ಸಾವು
ಚಾಮರಾಜನಗರ, ಏಪ್ರಿಲ್ 14: ಜಿಲ್ಲಾ ಕೇಂದ್ರದ ಬಳಿ ಲಾರಿಯೊಂದು ಶನಿವಾರ ಎರಡು ಪುಟ್ಟ ಕಂದಮ್ಮಗಳ ಸಹಿತ ಮೂವರ ಬಲಿ ತೆಗೆದುಕೊಂಡಿದೆ.
ಸಮೀಪವಿರುವ ಸೋಮವಾರ ಪೇಟೆಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಈ ದುರ್ಘಟನೆ ಸಂಭವಿಸಿದೆ. ನಿಂತಿದ್ದ ಕಾರಿನ ಮೇಲೆ ಎದುರಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿದೆ. ಕಾರಿನ ಒಳಗಿದ್ದ ಇಬ್ಬರು ಮಕ್ಕಳು ಮತ್ತು ಚಾಲಕ ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಗಿ ತಾಲ್ಲೂಕಿನ ಕೊಳುರಗಿ ಗ್ರಾಮದ ಸಂಗಣ್ಣಗೌಡ ಅವರ ಮಕ್ಕಳಾದ ಸಂಕೇತ (4), ಲಕ್ಷ್ಮಿಕಾಂತ್ (7) ಮತ್ತು ಅದೇ ಗ್ರಾಮದವರಾದ ಕಾರಿನ ಚಾಲಕ ಸಿದ್ದರಾಮ ಮೇಡೆಗಾರ (26) ಮೃತ ದುರ್ದೈವಿಗಳು.
ಸಂಗಣ್ಣಗೌಡ, ಅವರ ಪತ್ನಿ ಲಕ್ಷ್ಮಿ, ಮಗಳು ಸೃಷ್ಟಿ ಹಾಗೂ ಗ್ರಾಮದ ಯುವತಿ ಪ್ರೀತಿ ಗಾಯಗೊಂಡಿದ್ದಾರೆ. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರವಾಸಕ್ಕೆ ತೆರಳಿದ್ದರು:
ಗ್ರಾಮದ ತಂಡವೊಂದು ದೀರ್ಘಕಾಲದ ಪ್ರವಾಸಕ್ಕೆಂದು ಹೊರಟಿತ್ತು. 18 ಜನರು ಈ ಬಳಗದಲ್ಲಿದ್ದರು. 1೦ ಮಂದಿ ಪೋಚರ್ ಕಾರ್ನಲ್ಲಿ ಮತ್ತು 8 ಮಂದಿ ಟಾಟಾ ಇಂಡಿಕಾ ಜಸ್ಟ್ ಕಾರಿನಲ್ಲಿದ್ದರು.
ಏಪ್ರಿಲ್ 8 ರಂದು ತಮಿಳುನಾಡು ಮತ್ತು ಆಂಧ್ರಪ್ರದೇಶದ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಏಪ್ರಿಲ್ 14ರಂದು ಕೇರಳದ ಕೊಚ್ಚಿಯಿಂದ ಚಾಮರಾಜನಗರ ಜಿಲ್ಲೆಯ ಮೂಲಕ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೊರಟಿದ್ದರು.

ಟಾಟಾ ಇಂಡಿಕಾ ಜಸ್ಟ್ ಕಾರ್ನಲ್ಲಿದ್ದ ಪ್ರಯಾಣಿಕರು ಸೋಮವಾರ ಪೇಟೆ ಸಮೀಪ ಕಾರು ನಿಲ್ಲಿಸಿ ಎಳನೀರು ಕುಡಿಯುತ್ತಿದ್ದರು. ಆಗ ಚಾಮರಾಜನಗರ ಕಡೆಯಿಂದ ಬಂದ ಮುಸುಕಿನ ಜೋಳ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆಯೇ ಬಿದ್ದಿದೆ.
ಇದರಿಂದ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಚಾಲಕ ಸ್ಥಳದಲ್ಲಿಯೇ ಬಲಿಯಾದರು. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಡಿವೈಎಸ್ಪಿ ಜಯಕುಮಾರ್ ಮತ್ತು ಇತರೆ ಪೊಲೀಸ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಸಂಬಂಧಿಕರಿಂದ ಮಾಹಿತಿ ಪಡೆದರು.












Click it and Unblock the Notifications