2008 ರಲ್ಲಿ ಡಿಸ್ಕವರಿ ಇಂಡಿಯಾ, ಈಗ ಭಾರತ್ ಜೋಡೋ... ರಾಹುಲ್ ಗಾಂಧಿಯ 2 ಯಾತ್ರೆ ಗಡಿಜಿಲ್ಲೆಯಲ್ಲೇ ಆರಂಭ
ಚಾಮರಾಜನಗರ, ಸೆಪ್ಟೆಂಬರ್ 30: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ರಾಜಕೀಯ ಜೀವನದಲ್ಲಿ ನಡೆಸಿರುವ ಅಭಿಯಾನಗಳಿಗೂ ಗಡಿಜಿಲ್ಲೆ ಚಾಮರಾಜನಗರಕ್ಕೂ ವಿಶೇಷ ಬಾಂಧವ್ಯ ಇದ್ದು ಅವರ ಪ್ರಮುಖ ಎರಡೂ ಯಾತ್ರೆಗಳು ಚಾಮರಾಜನಗರ ಜಿಲ್ಲೆಯಿಂದಲೇ ಆರಂಭಗೊಂಡಿರುವು ತುಂಬಾ ವಿಶೇಷವಾಗಿದೆ.
2008 ರಲ್ಲಿ ಡಿಸ್ಕವರಿ ಇಂಡಿಯಾ ಎಂಬ ಯಾತ್ರೆ ರಾಜ್ಯದಲ್ಲಿ ಚಾಮರಾಜನಗರದ ಬಿಳಿಗಿರಿ ಬೆಟ್ಟದಿಂದ ಆರಂಭಗೊಂಡಿದ್ದರೆ, ಭಾರತ್ ಜೋಡೋ ಎಂಬ ಯಾತ್ರೆಯು ಶುಕ್ರವಾರದಿಂದ ಗುಂಡ್ಲುಪೇಟೆ ಪಟ್ಟಣದ ಮೂಲಕ ರಾಜ್ಯಕ್ಕೆ ಪ್ರಶೇಶಿಸುತ್ತಿದೆ. ರಾಹುಲ್ ಗಾಂಧಿಯ ಎರಡನೇ ಪ್ರಮುಖ ಯಾತ್ರೆ ರಾಜ್ಯದಲ್ಲಿ ಚಾಮರಾಜನಗರದಿಂದಲೇ ಆರಂಭಗೊಳ್ಳುತ್ತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ 2008ರ ಮಾರ್ಚ್ 25ರಿಂದ ಐದು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಿದ್ದರು. ಅವರ ಆಗಮನ ರಾಜ್ಯ ಕಾಂಗ್ರೆಸ್ನಲ್ಲಿ ಏನೋ ಒಂಥರಾ ಸಂಚಲನಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲೂ ಕೂಡ ವಿಧಾನಸಭಾ ಚುನಾವಣೆ ಹತ್ತಿರದಲ್ಲಿತ್ತು ಎನ್ನುವುದು ಮತ್ತೊಂದು ವಿಶೇಷ.
ಅಹಮದಾಬಾದ್ನಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪಿಎಂ ಮೋದಿ ಚಾಲನೆ
ಅಂದು ರಾಹುಲ್ ಗಾಂಧಿ ದೇಶದ ಯುವಕರ ಜೊತೆ ನೇರ ಸಂಪರ್ಕ ಸಾಧಿಸುವ, ಅವರ ಕಷ್ಟ ಸುಖ ಅರಿಯುವ, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ವೀಕ್ಷಣೆ ಮಾಡುವ ತಮ್ಮ "ಭಾರತ ಯಾತ್ರೆ" ಅಂಗವಾಗಿ ರಾಹುಲ್ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಈ ಯಾತ್ರೆಗೆ ಡಿಸ್ಕವರಿ ಆಫ್ ಇಂಡಿಯಾ ಎಂದು ನಾಮಕರಣ ಮಾಡಲಾಗಿತ್ತು. ಅವರು ರಾಜ್ಯದ ಬೀದರ್, ಕಲ್ಬುರ್ಗಿ, ರಾಯಚೂರು, ಬಾಗಲಕೋಟೆ, ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಅವರು ಪ್ರವಾಸ ಮಾಡಿದ್ದರು.
ಬಿಳಿಗಿರಿರಂಗಬೆಟ್ಟದಿಂದ ಆರಂಭವಾಗಿತ್ತು
ಡಿಸ್ಕವರ್ ಇಂಡಿಯಾ ಯಾತ್ರೆಯನ್ನು ಬಿಳಿಗಿರಿರಂಗಬೆಟ್ಟದ ಮುತ್ತು ಗದಗದ್ದೆ ಪೋಡಿನ ಜಡೇಗೌಡ ಅವರ ಮನೆಯಲ್ಲಿ ಗೆಣಸು, ರೊಟ್ಟಿ ತಿಂದು ಜೇನು ಸವಿಯುವ ಮೂಲಕ 2008ರ ಮಾರ್ಚ್ 25ರಂದು ಆರಂಭಿಸಿದ್ದರು. ವಿವೇಕಾನಂದ ಗಿರಿಜನ ಕೇಂದ್ರದಲ್ಲಿ ಆದಿವಾಸಿಗಳ ಜೊತೆಗೆ ಸಂವಾದ ನಡೆಸಿದ್ದರು. ನಂತರ ರೈತರು, ನಿರುದ್ಯೋಗಿ ಯುವಕರು, ಕಾರ್ಮಿಕರು ಹಾಗೂ ದಲಿತರನ್ನು ಭೇಟಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಆ ಸಂದರ್ಭದಲ್ಲಿ ಪ್ರಸ್ತಾಪವಾಗಿದ್ದ ಅರಣ್ಯ ಹಕ್ಕು ಕಾಯ್ದೆಯನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರ ಜಾರಿಗೆ ಬಂದ ನಂತರ ಆದಿವಾಸಿಗಳಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
2 ಚುನಾವಣೆ ಕ್ಲೀನ್ ಸ್ವೀಪ್ ಮಾಡಿದ್ದ ಕಾಂಗ್ರೆಸ್
ಜನತಾಪರಿವಾರದ ನೆಲೆಯಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ರಾಹುಲ್ ಡಿಸ್ಕವರಿ ಇಂಡಿಯಾದ ಪರಿಣಾಮ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವುದರ ಜೊತೆಗೆ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹಲವು ದಶಕಗಳ ಬಳಿಕ ಖಾತೆ ತೆರೆದಿತ್ತು.
ಗಡಿಯಲ್ಲಿ ಮತ್ತೆ ಪ್ರಾಬಲ್ಯ?
ಆದರೆ ಮೋದಿ ಅಲೆಯ ನಂತರ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗಿತ್ತು. ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಜೊತೆಗೆ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿತ್ತು. ಇದೀಗ ರಾಜ್ಯದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಲಿರುವ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ಎಷ್ಟರ ಮಟ್ಟಿಗೆ ಪಕ್ಷಕ್ಕೆ ಚೈತನ್ಯ ತುಂಬುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಸೋಲಿಗರ ಸಂವಾದ
ಭಾರತ್ ಜೋಡೋ ಯಾತ್ರೆ ಕೇರಳದ ರಾಜ್ಯ ಪ್ರವಾಸ ಮುಗಿಸಿ ತಮಿಳುನಾಡಿನ ಗಡಿಭಾಗ ಗುಡಲೂರಿಗೆ ಆಗಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ 8 ರಿಂದ 8.30ರ ಹೊತ್ತಿಗೆ ರಾಹುಲ್ ಗಾಂಧಿ ಗುಂಡ್ಲುಪೇಟೆಗೆ ಬಂದಿಳಿಯಲಿದ್ದು 9 ರ ಸುಮಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಬಳಿಕ 10-11 ರ ವೇಳೆಗೆ ಪಾದಯಾತ್ರೆ ಆರಂಭಗೊಳ್ಳಲಿದ್ದು ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿರುವ ಕೆಬ್ಬೆಕಟ್ಟೆ ಶನೀಶ್ವರ ದೇವಾಲಯ ಸಮೀಪ ಬಿಳಿಗಿರಿರಂಗನ ಬೆಟ್ಟ ಸೋಲಿಗರು ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಮ್ಲಜನಕ ದುರಂತದ ಸಂತ್ರಸ್ತರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.