ಪ್ರಧಾನಿ ಮೋದಿಗೂ ಕಾಡಿತೇ ಅಧಿಕಾರ ಕಳೆದುಕೊಳ್ಳುವ ಭೀತಿ?
Recommended Video

ಚಾಮರಾಜನಗರ, ಮೇ 1: ರಾಜ್ಯ ವಿಧಾನಸಬೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಕಾರ್ಯವನ್ನು ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರದಿಂದ ಆರಂಭಿಸುತ್ತಿದ್ದಾರೆ. ಆದರೆ, ಜಿಲ್ಲಾ ಕೇಂದ್ರದಲ್ಲಿ ಸಮಾವೇಶ ನಡೆಸುವ ಬದಲು ಅಲ್ಲಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ಸಂತೇಮರಹಳ್ಳಿ ಹೋಬಳಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಇದು ಪ್ರಧಾನಿ ನರೇಂದ್ರ ಮೋದಿ ಅವರೂ ಅಧಿಕಾರ ಭೀತಿಯ ಮೌಢ್ಯಕ್ಕೆ ಒಳಗಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ, ಸಚಿವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ರಾಜಕೀಯ ವಲಯದಲ್ಲಿದೆ. ಕಾಕತಾಳೀಯವಾಗಿ ಕೆಲವು ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡಿದ ಬಳಿಕ ಅಧಿಕಾರ ಕಳೆದುಕೊಂಡಿದ್ದರೂ, ಅದಕ್ಕೆ ರಾಜಕೀಯ ಕಾರಣಗಳಿದ್ದವು.
ಈ ನಂಬಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಾಗಿಸಿದ್ದರು. ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಎಂಟಕ್ಕೂ ಹೆಚ್ಚು ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಪ್ರತಿ ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದಾಗಲೂ 'ನಾನು ಅಧಿಕಾರಿ ಕಳೆದುಕೊಳ್ಳುತ್ತಿಲ್ಲ. ಬದಲಾಗಿ ಇಲ್ಲಿಗೆ ಬಂದಿದ್ದರಿಂದ ಕುರ್ಚಿ ಗಟ್ಟಿಯಾಗಿದೆ' ಎಂದು ಹೇಳಿಕೆ ನೀಡುತ್ತಿದ್ದರು. ಸುದೀರ್ಘ ಕಾಲದ ಬಳಿಕ ಐದು ವರ್ಷದ ಪೂರ್ಣಾವಧಿ ಪೂರೈಸಿದ ಸರ್ಕಾರ ಎಂಬ ಹೆಗ್ಗಳಿಕೆಗೂ ಸಿದ್ದರಾಮಯ್ಯ ಸರ್ಕಾರ ಪಾತ್ರವಾಗಿದೆ.

ಆದರೆ, ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಚಾಮರಾಜನಗರ ಜಿಲ್ಲಾ ಕೇಂದ್ರದ ಬದಲು ಸಂತೇಮರಹಳ್ಳಿಯಲ್ಲಿ ಆಯೋಜಿಸಿರುವುದು, ಮೋದಿ ಅವರೂ ಈ ನಂಬಿಕೆಗೆ ಒಳಗಾಗಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ.
ಮೌಢ್ಯವಲ್ಲ ಎಂದ ಪ್ರತಾಪ್ ಸಿಂಹ
ಜಿಲ್ಲಾ ಕೇಂದ್ರದ ಬದಲು ಸಂತೇಮರಹಳ್ಳಿಯಲ್ಲಿ ಸಮಾವೇಶ ನಡೆಸುತ್ತಿರುವುದಕ್ಕೆ ಮೌಢ್ಯ ಕಾರಣವಲ್ಲ, ಭೌಗೋಳಿಕ ಅನುಕೂಲತೆಯ ಹಿನ್ನೆಲೆಯಲ್ಲಿ ಇಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಬಿಜೆಪಿ ಮೌಢ್ಯವಿರೋಧಿ. ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭೀತಿಯಿಂದ ಬೇರೆಡೆ ಸಮಾವೇಶ ಮಾಡುತ್ತಿಲ್ಲ. ಮೈಸೂರು ಮತ್ತು ಬಂಡ್ಯ ಭಾಗದಿಂದಲೂ ಸಮಾವೇಶಕ್ಕೆ ಕಾರ್ಯಕರ್ತರು ಬರುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗುವ ಸಲುವಾಗಿ ಸಂತೇಮರಹಳ್ಳಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.












Click it and Unblock the Notifications