ಚಾಮರಾಜನಗರ: ಮಾದಪ್ಪನ ಸನ್ನಿಧಿಯಲ್ಲಿ ಸರಳ ದಸರಾ ಆಚರಣೆಗೆ ಸಿದ್ಧತೆ
ಚಾಮರಾಜನಗರ, ಅಕ್ಟೋಬರ್ 12: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸರಳ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿವರ್ಷ ನವರಾತ್ರಿ ದಿನಗಳಲ್ಲಿ ಮಹದೇಶ್ವರನ ದೇಗುಲ ಜಗಮಗಿಸುತ್ತಿತ್ತು, ಆದರೆ ಈ ಬಾರಿ ಕೊರೊನಾ ಸಂಕಷ್ಟದ ಕಾರಣ ಸರ ದಸರಾ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೂ ದೇವಾಲಯಕ್ಕೆ ನಿನ್ನೆ ರಾತ್ರಿಯಿಂದಲೇ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ದಸರಾ ದಿನಗಳಂದು ಹಾಗೂ ಅಮಾವಾಸ್ಯೆ ದಿನದಂದು ನಡೆಯುವ ಎಣ್ಣೆ ಮಜ್ಜನಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ವಿಶೇಷ ದಿನಗಳನ್ನು ಹೊರತುಪಡಿಸಿ ಮಹದೇಶ್ವರನ ದರ್ಶನ ಪಡೆಯಲು ಬರುವ ಭಕ್ತರಿಗೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಪ್ರವೇಶಾವಕಾಶ ನೀಡಿದೆ.

ದಾಸೋಹ ಭವನ, ಲಾಡು ಪ್ರಸಾದ ಕೌಂಟರ್, ಮಾಹಿತಿ ಕೇಂದ್ರ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಸಾಮಾಜಿಕ ಅಂತರ ಕಾಪಾಡಲು ವಿಶೇಷ ಕ್ಯೂಲೈನ್ ಸಿದ್ಧಪಡಿಸಲಾಗಿದೆ.
ಈ ಬಾರಿ ಕೋವಿಡ್ ಸೋಂಕು ಹಿನ್ನೆಲೆ ಸಾರ್ವಜನಿಕರು ಹಾಗೂ ಭಕ್ತರ ಆರೋಗ್ಯದ ಹಿತ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳ ನಡುವೆ ದಸರಾ ಉತ್ಸವ ಆಚರಿಸಲಾಗುತ್ತಿದೆ. ದಸರಾ ಆಚರಣೆ ದಿನಗಳಂದು ಭಕ್ತರು ಗುಂಪಾಗಿ ಸೇರದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ.
ಅಂತರ ಗಂಗೆಯಲ್ಲಿ ಸ್ನಾನಕ್ಕೆ ಅವಕಾಶವಿರುವುದಿಲ್ಲ, ರಾತ್ರಿ ವಾಸ್ತವ್ಯಕ್ಕೆ ಅನುಮತಿಯೂ ಇಲ್ಲ. ಮಾದಪ್ಪನಿಗೆ ಹರಕೆ, ಮುಡಿ ಸೇವೆ ಕಡ್ಡಾಯ ನಿಷೇಧಿಸಲಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ.












Click it and Unblock the Notifications