ಶಿವನಸಮುದ್ರ ದೇವಾಲಯದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಲ್ಲಿ ಪ್ರಸಾದ ವಿತರಣೆ
ಚಾಮರಾಜನಗರ, ಡಿಸೆಂಬರ್ ೧೯: ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಕಿಚ್ಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಮಿಶ್ರಿತ ಆಹಾರ ಸೇವಿಸಿ ಸಂಭವಿಸಿದ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಹಲವು ದೇವಾಲಯಗಳ ಆಡಳಿತ ಮಂಡಳಿ ನಿಗಾ ವಹಿಸಿರುವುದು ಕಂಡು ಬಂದಿದೆ.
ವೈಕುಂಠ ಏಕಾದಶಿ ಅಂಗವಾಗಿ ಹಲವು ದೇವಾಲಯಗಳಲ್ಲಿ ಪೂಜಾಕಾರ್ಯ ನಡೆದು ಪ್ರಸಾದ ವಿತರಣೆ ಮಾಡಲಾಗಿದೆಯಾದರೂ ಶಿವನಸಮುದ್ರದಲ್ಲಿರುವ ಮಧ್ಯರಂಗ ದೇವಾಲಯದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಲ್ಲಿ ಟಮೋಟೋ ಬಾತ್ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ರಾಜ್ಯ ಸರ್ಕಾರವು ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯದಲ್ಲಿ ಅನ್ನದಾಸೋಹ ಹಾಗೂ ಪ್ರಸಾದ ವಿತರಣೆ ಮಾಡುವ ಸಂದರ್ಭದಲ್ಲಿ ಸಿಸಿ ಕ್ಯಾಮರಾ ಮತ್ತು ಅಡುಗೆ ತಯಾರಿಸುವ ಕೊಠಡಿ ಹಾಗೂ ಅಡುಗೆ ಭಟ್ಟರ ಚಲನ ವಲನವನ್ನು ಚಿತ್ರೀಕರಣ ಮಾಡುವಂತೆ ಸೂಚಿಸಲಾಗಿತ್ತು ಅದರಂತೆ ಸರ್ಕಾರದ ಆದೇಶ ಬಂದ ೨೪ ಗಂಟೆಯೊಳಗೆ ಚಾಮರಾಜನಗರ ಜಿಲ್ಲೆಯ ಶಿವನಸಮುದ್ರದಲ್ಲಿರುವ ಮಧ್ಯರಂಗದಲ್ಲಿ ಅದನ್ನು ಜಾರಿಗೆ ತಂದಿದ್ದು ಶ್ಲಾಘನೀಯವಾಗಿದೆ.

ಮಧ್ಯರಂಗ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ರಂಗನಾಥ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಜತೆಗೆ ದೇವರ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹೀಗೆ ಬಂದ ಭಕ್ತರಿಗೆ ಮುಜರಾಯಿ ಇಲಾಖೆಯವರು ಟಮೋಟೋ ಬಾತ್ನ್ನು ಪ್ರಸಾದ ರೂಪದಲ್ಲಿ ವಿತರಣೆ ಮಾಡಿದ್ದು, ಆದರೆ ಪ್ರಸಾದ ವಿತರಣೆಗೂ ಮುನ್ನ ಪ್ರಸಾದ ತಯಾರಿಕೆ ಮತ್ತು ವಿತರಣೆಯ ವೀಡಿಯೋವನ್ನು ಮಾಡಿದ್ದು ಎಲ್ಲರ ಗಮನಸೆಳೆದಿದೆ.












Click it and Unblock the Notifications