ಶಿಥಿಲವಾಗಿರುವ ಯಳಂದೂರಿನ ಜಹಗೀರ್ ದಾರ್ ಬಂಗಲೆ
ಚಾಮರಾಜನಗರ, ಜನವರಿ 09: ಮೈಸೂರಿನ ದಿವಾನರಾಗಿದ್ದ ದಿವಾನ್ ಪೂರ್ಣಯ್ಯರವರ ಜ್ಞಾಪಕಾರ್ಥ ನಿರ್ಮಿಸಿರುವ ಶತಮಾನವನ್ನು ಕಂಡಿರುವ ಇತಿಹಾಸ ಪ್ರಸಿದ್ಧ ಜಹಗೀರ್ ದಾರ್ ಬಂಗಲೆಯನ್ನು ಸರ್ಕಾರ ವಸ್ತು ಸಂಗ್ರಹಾಲಯವನ್ನಾಗಿ ಮಾಡಿದ್ದರೂ ಇದೀಗ ಈ ಬಂಗಲೆ ಶಿಥಿಲಾವಸ್ಥೆಗೆ ತಲುಪಿರುವುದು ಕಂಡುಬಂದಿದ್ದು ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಹೃದಯಭಾಗದಲ್ಲಿರುವ ಜಹಗೀರ್ ದಾರ್ ಬಂಗಲೆಗೆ ಶತಮಾನಗಳ ಇತಿಹಾಸವಿದೆ. ಇದು ದಿವಾನ್ ಪೂರ್ಣಯ್ಯರವರ ಜ್ಞಾಪಕಾರ್ಥವಾಗಿ 1901 ರಲ್ಲಿ ಅಂದಿನ ಮೈಸೂರು ಅರಸರ ದಿವಾನರಾಗಿದ್ದ ಹಾಗೂ ಪೂರ್ಣಯ್ಯರವರ ವಂಶಸ್ಥರಾದ ಪಿ.ಎನ್.ಕೃಷ್ಣಮೂರ್ತಿಯವರು ದಿವಾನ್ ಪೂರ್ಣಯ್ಯ ಬಂಗಲೆಯನ್ನು ನಿರ್ಮಿಸಿದ್ದರು. ಈ ಬಂಗಲೆ ನೋಡಲು ಸುಂದರವಾಗಿದ್ದು, ಅವತ್ತಿನ ಕಾಲದ ಶೈಲಿಯನ್ನು ಹೊಂದಿದ್ದು ವಿಭಿನ್ನವಾಗಿ ಕಾಣುತ್ತಿದೆ.

ಐತಿಹಾಸಿಕ ಮತ್ತು ಪಾರಂಪರಿಕತೆಯನ್ನು ಹೊಂದಿರುವ ಕಟ್ಟಡವನ್ನು ತಾಲೂಕು ಸರ್ಕಾರಿ ಕಚೇರಿಯಾಗಿ, ಜೆಎಸ್ ಎಸ್ ಸಂಸ್ಥೆಯ ಶಾಲೆಯಾಗಿಯೂ ಬಳಕೆ ಮಾಡಿಕೊಳ್ಳಲಾಗಿತ್ತು. 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಆರ್.ಧ್ರುವನಾರಾಯಣ್ ರವರು ಪಟ್ಟಣದಲ್ಲಿರುವ ಐತಿಹಾಸಿಕ ಜಹಗೀರ್ ದಾರ್ ಬಂಗಲೆಯನ್ನು ನವೀಕರಿಸುವ ಮೂಲಕ ಸಂರಕ್ಷಿಸುವ ನಿಟ್ಟನಲ್ಲಿ ಮುಂದಾಗಿ ಪ್ರಾಚ್ಯವಸ್ಥು ಇಲಾಖೆಯ ಸಹಕಾರದೊಂದಿಗೆ ಬಂಗಲೆಯನ್ನು ನವೀಕರಿಸಿ ದಿವಾನ್ ಪೂರ್ಣಯ್ಯರವರ ಜೀವನ ಚರಿತ್ರೆ, ಆಳ್ವಿಕೆ, ಜಿಲ್ಲೆಯ ಐತಿಹಾಸಿಕ ದೇವಾಲಯಗಳ ಕುರಿತ ಮಾಹಿತಿಗಳು, ಪ್ರವಾಸಿ ಕೇಂದ್ರಗಳು, ಜಿಲ್ಲೆಯ ಪವಾಡ ಪುರುಷರ ಇತಿಹಾಸ ಕುರಿತ ಮಾಹಿತಿ ಒಂದೆಡೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಬಂಗಲೆಯನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲು 1.90 ಕೋಟಿ ರೂ.ಗಳ ಅನುದಾನದಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು. ಅದರಂತೆ 2009ರಲ್ಲಿ ಬಂಗಲೆಯನ್ನು ನವೀಕರಣಗೊಳಿಸಲು ಕಾಮಗಾರಿ ಪ್ರಾರಂಭಿಸಲಾಗಿತ್ತು. 4 ವರ್ಷಗಳ ಕಾಲ ನಡೆದ ಕಾಮಗಾರಿಯು 2014ರಲ್ಲಿ ಮುಕ್ತಾಯ ಕಂಡಿತಲ್ಲದೆ, ಬಂಗಲೆಯನ್ನು ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು.
ನವೀಕರಣ ಕಾಮಗಾರಿ ಮುಗಿದು ಮೂರು ವರ್ಷಗಳಷ್ಟೆ ಕಳೆದಿದೆ. ಅದಾಗಲೇ ಬಂಗಲೆಯ ಗೋಡೆಗಳು ಸೇರಿದಂತೆ ಛಾವಣಿಯಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡು ಸುಣ್ಣದ ಗಾರೆ ಕಿತ್ತು ನೆಲಕ್ಕುರುಳುತ್ತಿದೆ. ಇನ್ನೊಂದೆಡೆ ರಾತ್ರಿಯಾದರೆ ಕೆಲವರಿಗೆ ಅನೈತಿಕ ಚಟುವಟಿಕೆಗಳಿಗೆ ತಾಣವಾದರೆ, ಮತ್ತೆ ಕೆಲವರಿಗೆ ಮೂತ್ರಾಲಯವಾಗಿ ಮಾರ್ಪಟ್ಟಿದ್ದು, ಕುಡುಕರ ಅಡ್ಡೆಯಾಗಿಯೂ ಮಾರ್ಪಟ್ಟಿದೆ.
ಬಂಗಲೆ ಸುತ್ತ ಉದ್ಯಾನ ನಿರ್ಮಿಸುವ ಕನಸು ನನಸಾದಂತೆ ಕಾಣುತ್ತಿಲ್ಲ. ಇಲ್ಲಿ ನೆಡಲಾಗಿದ್ದ ಸಸಿಗಳನ್ನು ಕೆಲವರು ಕಿತ್ತುಹಾಕಲಾಗಿದೆ. ಇಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಸುತ್ತ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಮದ್ಯದ ಬಾಟಲಿಗಳು ಕಣ್ಣಿಗೆ ರಾಚುತ್ತಿವೆ. ಒಟ್ಟಾರೆ ಪಾರಂಪರಿಕ ಕಟ್ಟಡವೊಂದು ನಿರ್ಲಕ್ಷ್ಯಕ್ಕೊಳಗಾಗಿರುವುದು ವಿಷಾದದ ಸಂಗತಿಯಾಗಿದ್ದು, ಸಂಬಂಧಿಸಿದವರು ಇತ್ತ ಗಮನಹರಿಸಬೇಕಾಗಿದೆ.












Click it and Unblock the Notifications