ಈ ಬಾಲಕನ ಪೋಷಕರಿಗೆ ಯಾರಾದರೂ ವಿಷಯ ತಿಳಿಸಬಹುದಾ!
ಚಾಮರಾಜನಗರ, ನವೆಂಬರ್ 22: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಲಕನೊಬ್ಬ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಒಂಟಿಯಾಗಿ ನಿಂತಿರುವುದನ್ನು ಕಂಡ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಮಹಿಳೆ ಆತನನ್ನು ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣ ಬಸ್ ನಿಲ್ದಾಣದಲ್ಲಿ ಯೋಗೇಶ್ ಎಂಬ 8 ವರ್ಷದ ಬಾಲಕ ಅಳುತ್ತಾ ನಿಂತಿದ್ದ. ಆತನನ್ನು ಕಂಡ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಮಹಿಳೆಯೊಬ್ಬರು ರಕ್ಷಿಸಿ, ತಮ್ಮ ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡುತ್ತಿದ್ದಾರೆ.[ಬೆಂಗಳೂರಿನ ಶಾಲಾ ಬಾಲಕಿ ಪೂಜಿತಾ ನಿಗೂಢ ನಾಪತ್ತೆ]

ಬಾಲಕನು ತಾನು ಮಂಡ್ಯ ಜಿಲ್ಲೆಯ ಮಳವಳ್ಳಿಯವನು ಎಂದು ಹೇಳಿದ್ದು, ಆತನ ತಂದೆ ಚನ್ನಬಸಪ್ಪ ಎಂದು ತಿಳಿಸಿದ್ದಾನೆ ವಿನಾ ಬೇರೆ ಯಾವುದೇ ಮಾಹಿತಿ ಹೇಳುತ್ತಿಲ್ಲ. ಈ ಬಗ್ಗೆ ಹೊನ್ನೂರು ಗ್ರಾಮದ ಮಹದೇವಸ್ವಾಮಿ ಮಕ್ಕಳ ಸಹಾಯವಾಣಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ.[ಭಾವಿ ಪತ್ನಿ ನೋಡಲು ಹೊರಟ ಟೆಕ್ಕಿ ಆದಿತ್ಯ ನಾಪತ್ತೆ!]
ತಾನು ಮಹದೇಶ್ವರ ಬೆಟ್ಟಕ್ಕೆ ಚಿಕ್ಕಪ್ಪನ ಜೊತೆ ಬಂದಿದ್ದೆ, ತಪ್ಪಿಸಿಕೊಂಡಿದ್ದೇನೆ ಎಂದು ಹೇಳುತ್ತಿದ್ದಾನೆ. ಆದರೆ ನಿಖರವಾದ ಮಾಹಿತಿ ಸಿಗದೆ ಮಹದೇವಸ್ವಾಮಿ ಅವರ ಸಹೋದರಿ ಯೋಗೇಶ್ ನನ್ನು ಆರೈಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮುಗ್ಧ ಯೋಗೇಶ್ ನನ್ನು ರಕ್ಷಿಸಿದ ಮಹಿಳೆ ಮತ್ತು ಕುಟುಂಬದವರು, ಈತನ ಪೋಷಕರು ಬಂದು ಕರೆದುಕೊಂಡು ಹೋಗಲಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications