ಅರಣ್ಯದಲ್ಲಿ ಸೋಂಕು ಮುಕ್ತ ಪರಿಸರ ನಿರ್ಮಾಣವಾಗಲಿ
ಚಾಮರಾಜನಗರ, ಜೂನ್ 05; ಒಂದು ಉತ್ತಮ ಪರಿಸರ ನಿರ್ಮಾಣವಾಗ ಬೇಕಾದರೆ ಗಿಡಮರಗಳ ಜತೆಗೆ ಅರಣ್ಯ ಅದರೊಳಗೆ ವನ್ಯಪ್ರಾಣಿಗಳಿರಬೇಕು. ಅಷ್ಟೇ ಅಲ್ಲದೆ ಅವು ಆರೋಗ್ಯವಾಗಿರಬೇಕು. ಇದೆಲ್ಲವೂ ಸಾಧ್ಯವಾಗಬೇಕಾದರೆ ಒಂದಷ್ಟು ಕ್ರಮಗಳನ್ನು ಸಾರ್ವಜನಿಕರಾದ ನಾವು ಕೈಗೊಳ್ಳುವುದರೊಂದಿಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ಆಗಾಗ ಕಾಡಿನಿಂದ ನಾಡಿಗೆ ಬಂದು ನಾಯಿಗಳ ಮೇಲೆ ದಾಳಿ ಮಾಡಿ ತಿಂದು ಹಾಕುವ ಚಿರತೆಯಿಂದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ರೇಬಿಸ್ ಸೇರಿದಂತೆ ಇತರೆ ಸೋಂಕುಗಳು ಹರಡುವ ಸಾಧ್ಯತೆಯಿರುವುದರಿಂದ ಅರಣ್ಯ ಇಲಾಖೆ ಈ ಹಿಂದಿನಿಂದಲೂ ಬಂಡೀಪುರ ಅರಣ್ಯ ವ್ಯಾಪ್ತಿಯ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದುಗಳನ್ನು ಹಾಕುವ ಮೂಲಕ ಸೋಂಕು ವನ್ಯ ಪ್ರಾಣಿಗಳಿಗೆ ಹರಡದಂತೆ ಎಚ್ಚರಿಕೆ ವಹಿಸುತ್ತಾ ಬರುತ್ತಿರುವುದನ್ನು ಕಾಣಬಹುದಾಗಿದೆ.
ಚಾಮರಾಜನಗರ; ವರುಣನ ಕೃಪೆಗೆ ಹಸಿರಾದ ಬಂಡೀಪುರ!
ಸಾಮಾನ್ಯವಾಗಿ ಕಾಡಿನಿಂದ ನಾಡಿನತ್ತ ಬರುವ ಚಿರತೆ ಕೆಲಕಾಲ ಗ್ರಾಮಗಳ ಕುರುಚಲು ಕಾಡುಗಳಲ್ಲಿ ವಾಸ್ತವ್ಯ ಹೂಡಿ ನಾಯಿಗಳನ್ನು ಬೇಟೆಯಾಡಿ ತಿಂದು ಹಾಕುತ್ತವೆ. ಇಂತಹ ಚಿರತೆಯನ್ನು ಅರಣ್ಯ ಇಲಾಖೆ ಬೋನಿಟ್ಟು ಸೆರೆಹಿಡಿದು ಬಳಿಕ ಕಾಡಿಗೆ ಬಿಡುತ್ತದೆ. ಹೀಗೆ ಕಾಡಿಗೆ ಸೇರುವ ಚಿರತೆಗಳಿಗೆ ಒಂದು ವೇಳೆ ನಾಯಿಯ ಮೂಲಕ ಸೋಂಕು ತಗುಲಿದ್ದರೆ ಮುಂದೆ ಅದು ಬೇರೆ ಪ್ರಾಣಿಗಳನ್ನು ಬೇಟೆಯಾಡಿದಾಗ ಅಥವಾ ಕಚ್ಚಿದಾಗ ಸೋಂಕುಗಳು ಹರಡು ಸಾಧ್ಯತೆ ಹೆಚ್ಚಿರುತ್ತದೆ.
ಬಂಡೀಪುರ ಸಫಾರಿ, ಪ್ರವೇಶ ಶುಲ್ಕ ಏರಿಕೆ
ಬೀದಿನಾಯಿಗಳಿಂದ ಸೋಂಕು ಬರಬಹುದು
ಬೀದಿ ನಾಯಿಗಳು ರೇಬಿಸ್ ಸೇರಿದಂತೆ ಇತರೆ ಸೋಂಕುಗಳಿಂದ ಬಳಲುತ್ತಿರುತ್ತವೆ. ಅಂತಹ ನಾಯಿಗಳನ್ನು ಚಿರತೆ ಬೇಟೆಯಾಡುತ್ತದೆ ಏಕೆಂದರೆ ಚಿರತೆಗೆ ನಾಯಿ ಮಾಂಸ ಪ್ರಿಯವಾಗಿದ್ದು, ನಾಯಿಯನ್ನೇ ಟಾರ್ಗೆಟ್ ಮಾಡುವ ಅದು ಅರಣ್ಯದಂಚಿನಲ್ಲಿ ನಾಯಿಗಳನ್ನೇ ಬೇಟೆಯಾಡಿ ತಿಂದು ಹಾಕುವುದು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸೋಂಕಿಗೆ ಒಳಗಾದ ನಾಯಿಯನ್ನು ಚಿರತೆ ಅಥವಾ ಇನ್ನಿತರೆ ವನ್ಯಪ್ರಾಣಿಗಳು ತಿಂದು ಹಾಕಿದರೆ ಅದರಿಂದ ಸೋಂಕು ಹರಡಿದರೂ ಅಚ್ಚರಿ ಪಡಬೇಕಾಗಿಲ್ಲ.
122 ಗ್ರಾಮಗಳಿವೆ
ಕೊರೊನಾ ಸೋಂಕು ಕಾಣಿಸುವುದಕ್ಕೆ ಹಿಂದೆ ಬಂಡೀಪುರ ವ್ಯಾಪ್ತಿಯಲ್ಲಿರುವ ಕಾಡಂಚಿನ ಗ್ರಾಮಗಳ ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ಹಾಕುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಿತ್ತು, ಇದೇ ರೀತಿ ಇತರೆ ಅರಣ್ಯ ಪ್ರದೇಶಗಳಲ್ಲಿ ಬರುವ ಗ್ರಾಮೀಣ ಪ್ರದೇಶಗಳಲ್ಲಿರುವ ಬೀದಿ ನಾಯಿಗಳು ಸೇರಿದಂತೆ ಸಾಕು ನಾಯಿಗಳಿಗೆ ಚುಚ್ಚುಮದ್ದು ಹಾಕಿದರೆ ಅನುಕೂಲ ಎಂಬುವುದು ಪ್ರಾಣಿಪ್ರಿಯರ ಮನವಿಯಾಗಿದೆ. ಹಾಗೆ ನೋಡಿದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 2.80 ಲಕ್ಷ ಎಕರೆ ವಿಸ್ತೀರ್ಣ ಹೊಂದಿದ್ದು, 13 ವಲಯಗಳಾಗಿ ವಿಂಗಡಿಸಲಾಗಿದೆ. ಜತೆಗೆ ಚಾಮರಾಜನಗರ, ಮೈಸೂರು ಎರಡು ಜಿಲ್ಲೆಯ ವ್ಯಾಪಿಯನ್ನು ಹೊಂದಿದ್ದು, ಅರಣ್ಯಕ್ಕೆ ಹೊಂದಿಕೊಂಡಂತೆ ಸುಮಾರು 122 ಕಾಡಂಚಿನ ಗ್ರಾಮಗಳಿವೆ.
ಚಿರತೆ ಹುಲಿಗಳಿಗೂ ಸೋಂಕು ಹರಡುವ ಭಯ
ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಗ್ರಾಮಸ್ಥರಿಗೆ ಉಪಟಳ ನೀಡುವುದು, ಸಾಕುಪ್ರಾಣಿಗಳನ್ನು ತಿಂದು ಹಾಕುವುದು ನಡೆಯುತ್ತಲೇ ಇರುತ್ತದೆ. ಕಾಡಾನೆಗಳು, ಕಾಡುಹಂದಿಗಳು ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿದರೆ ಚಿರತೆ ಹುಲಿಗಳು ಜಾನುವಾರು, ನಾಯಿ, ಮೇಕೆ, ಕುರಿಗಳನ್ನು ತಿಂದು ಹಾಕುವುದರೊಂದಿಗೆ ಜನರಲ್ಲಿ ಭಯ ಹುಟ್ಟಿಸುತ್ತವೆ. ಕೆಲವೊಮ್ಮೆ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುವಾಗ ಆ ಪ್ರಾಣಿಗಳಲ್ಲಿರುವ ಸೋಂಕು ವನ್ಯಪ್ರಾಣಿಗಳಿಗೆ ತಗುಲಿದರೂ ಅಚ್ಚರಿಪಡಬೇಕಾಗಿಲ್ಲ.
ಇದೆಲ್ಲಕ್ಕಿಂತ ಹೆಚ್ಚಾಗಿ ವಿವಿಧ ಕಡೆಗಳಲ್ಲಿ ಸೆರೆ ಸಿಕ್ಕುವ ಚಿರತೆಗಳನ್ನು ಬಂಡೀಪುರದ ಮೂಲೆಹೊಳೆ ವ್ಯಾಪ್ತಿಯಲ್ಲೇ ಬಿಡುತ್ತಿರುವುದರಿಂದ ಚಿರತೆಗಳ ಸಂಖ್ಯೆ ಬಂಡೀಪುರ ಅರಣ್ಯದಲ್ಲಿ ಹೆಚ್ಚಾಗಿದೆ. ಜತೆಗೆ ಅರಣ್ಯದಿಂದ ಕಾಡಂಚಿನ ಗ್ರಾಮಗಳತ್ತ ಆಗಾಗ್ಗೆ ಬಂದು ನಾಯಿಗಳನ್ನು ಬೇಟೆಯಾಡುತ್ತಿರುತ್ತವೆ. ಅಷ್ಟೇ ಅಲ್ಲದೆ ಅರಣ್ಯದೊಳಕ್ಕೆ ನಾಯಿಗಳನ್ನು ಕೊಂದು ಹೊತ್ತೊಯ್ಯುತ್ತವೆ. ಈ ವೇಳೆ ನಾಯಿಗಳಿಗೆ ರೇಬಿಸ್ ಮತ್ತು ಕೆನೈನ್ ಡಿಸ್ಟಂಪರ್ ರೋಗವಿದ್ದರೆ ಅದು ನಾಯಿಗಳನ್ನು ತಿನ್ನುವ ಚಿರತೆ, ಹುಲಿಗೂ ಹರಡುವ ಸಾಧ್ಯತೆ ಇರುತ್ತದೆ.
ಕಾಡಂಚಿನ ನಾಯಿಗಳತ್ತ ಎಚ್ಚರಿಕೆ ಅಗತ್ಯ
ಕಾಡಂಚಿನಲ್ಲಿರುವ ಗ್ರಾಮಗಳಲ್ಲಿ ಸಾಕು ಪ್ರಾಣಿಗಳನ್ನು ಸಾಕುವವರು ಅದರಲ್ಲೂ ನಾಯಿಗಳನ್ನು ಸಾಕುವವರು ರೇಬಿಸ್ ಚುಚ್ಚು ಮದ್ದನ್ನು ಹಾಕಿಸಿದರೆ ಅದರಿಂದ ಅರಣ್ಯದಲ್ಲಿರುವ ವನ್ಯಪ್ರಾಣಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಬೀದಿ ನಾಯಿಗಳನ್ನು ಹುಡುಕಿ ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಗಮನಹರಿಸಿದರೆ ಕಾಡಿನಲ್ಲಿರುವ ವನ್ಯಪ್ರಾಣಿಗಳು ರೋಗ ಮುಕ್ತವಾಗಿ ಬದುಕಲು ಸಹಕಾರಿಯಾಗುತ್ತದೆ.