ಬಂಡೀಪುರಕ್ಕೆ ಕೃಪೆ ತೋರಿದ ವರುಣ: ನಿಟ್ಟುಸಿರುಬಿಟ್ಟ ಜೀವಸಂಕುಲ
ಚಾಮರಾಜನಗರ, ಮಾರ್ಚ್ 05: ಕಳೆದ ಕೆಲವು ದಿನಗಳ ಹಿಂದೆ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರದ ಅರಣ್ಯದ ಸಾವಿರಾರು ಎಕರೆ ಅರಣ್ಯಪ್ರದೇಶ ಬೆಂದು ಹೋಗಿತ್ತು. ಆದರೆ ದೇವರ ದಯೆಯೋ ಎಂಬಂತೆ ಇಲ್ಲಿ ಮಳೆ ಸುರಿದಿದ್ದು, ಇದರಿಂದ ಗಿಡಮರ, ಪ್ರಾಣಿ, ಪಕ್ಷಿಗಳು ಸೇರಿದಂತೆ ಜೀವ ಸಂಕುಲ ನೆಮ್ಮದಿಯುಸಿರು ಬಿಡುವಂತಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಇಡೀ ಪ್ರದೇಶ ಧಗಧಗ ಉರಿದಿತ್ತಲ್ಲದೆ, ಇದರ ಶಾಖದಿಂದಾಗಿ ಸುತ್ತಮುತ್ತಲ ಪ್ರದೇಶ ಧಗೆಯಿಂದ ಕೂಡಿತ್ತು. ಮಳೆ ಬಾರದೆ ಹೋದರೆ ಅಳಿದುಳಿದ ಮರಗಿಡಗಳು ಸಾಯುವ ಸ್ಥಿತಿಗೆ ಬಂದು ತಲುಪಿತ್ತು.
ಹೀಗಾಗಿ ಬಂಡೀಪುರ ಅರಣ್ಯಕ್ಕೆ ಸೇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ದೇಗುಲಗಳಲ್ಲಿ ಅರ್ಚಕರು ಸೇರಿದಂತೆ ಜನ ಸಾಮಾನ್ಯರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾರಂಭಿಸಿದ್ದರು. ಬಹುಶಃ ಭಕ್ತರು ಸೇರಿದಂತೆ ಅಸಂಖ್ಯ ಜೀವ ಸಂಕುಲಗಳ ಮೊರೆ ದೇವರಿಗೆ ಕೇಳಿಸಿತ್ತೇನೋ ವರುಣ ಶಿವರಾತ್ರಿಯ ದಿನದಂದೇ ಕೃಪೆ ತೋರಿದ್ದು ಪರಿಣಾಮ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಮಳೆ ಸುರಿದಿದ್ದು, ಇಡೀ ಪ್ರದೇಶ ತಂಪಾಗಿದೆ.
ಭಾರೀ ಮಳೆ ಅಲ್ಲದಿದ್ದರೂ ಸಾಧಾರಣ ಮಳೆ ಸುರಿದಿದ್ದು ಸದ್ಯಕ್ಕೆ ಬಾಯಾರಿದವರಿಗೆ ನೀರು ನೀಡಿದಂತಾಗಿದೆ. ಸದ್ಯ ಮಳೆ ನೀರು ಹರಿದಿದ್ದು, ಭೂಮಿ ತೇವಗೊಂಡಿದೆ. ಇದೇ ರೀತಿ ಮತ್ತೊಂದು ಮಳೆ ಬಂದಿದ್ದೇ ಆದರೆ ಇಡೀ ಪ್ರದೇಶ ತಂಪಾಗಿ ಗಿಡಮರಗಳು ಚಿಗುರಲು ಸಹಕಾರಿಯಾಗಲಿದೆ.

ಸುಟ್ಟು ಭಸ್ಮವಾದ ಅರಣ್ಯ ಪ್ರದೇಶ
ಈ ಬಾರಿಯ ಅಗ್ನಿ ಅನಾಹುತಕ್ಕೆ ಸುಮಾರು ಇಪ್ಪತ್ತು ಸಾವಿರ ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು. ಅರಣ್ಯ ಇಲಾಖೆ ಬೆಂಕಿ ನಂದಿಸಲು ಸಾಧ್ಯವಾಗದೆ ಎರಡು ಹೆಲಿಕಾಪ್ಟರ್ ಗಳ ಮೂಲಕ ಬೆಂಕಿಯನ್ನು ನಂದಿಸಿತ್ತು.

ಮಳೆ ಸುರಿಯಲೇಬೇಕಾಗಿತ್ತು
ಈ ದುರ್ಘಟನೆ ನಡೆದ ಬಳಿಕ ಅರಣ್ಯ ಇಲಾಖೆ ಆರೋಪಿಗಳನ್ನು ಬಂಧಿಸಿತ್ತಾದರೂ ಬೆಂಕಿಯಲ್ಲಿ ಬೆಂದು ಹೋದ ಅರಣ್ಯ ಸ್ವಲ್ಪ ಮಟ್ಟಿಗಾದರೂ ತಹಬದಿಗೆ ಬರಬೇಕಾದರೆ ಮಳೆ ಸುರಿಯಲೇ ಬೇಕಾಗಿತ್ತು.

ಸಾಧಾರಣ ಮಳೆಯಾಗಿದೆ
ಬೇಸಿಗೆ ದಿನವಾಗಿದ್ದರಿಂದ ಸದ್ಯಕ್ಕೆ ಮಳೆ ಬಾರದೆ ಹೋದರೆ ಮುಂದೇನು ಎಂಬ ಭಯವೂ ಎಲ್ಲರನ್ನು ಕಾಡತೊಡಗಿತ್ತು. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಎಲ್ಲರೂ ದೇವರ ಮೊರೆ ಹೋಗಿದ್ದರು. ವರುಣ ದೇವನ ಕೃಪೆಯಿಂದ ಇದೀಗ ಸಾಧಾರಣ ಮಳೆಯಾಗಿದೆ.

ಮರಗಿಡಗಳು ಚೇತರಿಸಿಕೊಳ್ಳಲಿವೆ
ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮಳೆ ಸುರಿದಿದ್ದೇ ಆದರೆ ಸುಟ್ಟು ಹೋದ ಪ್ರದೇಶಗಳಲ್ಲಿ ಹುಲ್ಲು, ಕುರುಚಲು ಕಾಡು ಚಿಗುರಿ ಜಿಂಕೆ ಸೇರಿದಂತೆ ಇನ್ನಿತರೆ ಸಸ್ಯಹಾರಿ ಪ್ರಾಣಿಗಳಿಗೆ ಮೇವಾಗುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸತ್ತು ಹೋಗುವಂತಿದ್ದ ಮರಗಿಡಗಳು ಚೇತರಿಸಿಕೊಳ್ಳಲಿವೆ.












Click it and Unblock the Notifications