ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ: ಕೇರಳದ ಹುಡುಗರಿಗೆ ಗೂಸಾ
ಗುಂಡ್ಲುಪೇಟೆ, ಸೆಪ್ಟೆಂಬರ್ 12: ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲದೆ, ತಮ್ಮೊಂದಿಗೆ ಬರುವಂತೆ ಒತ್ತಾಯಿಸಿದ ಕೇರಳದ ಯುವಕರಿಬ್ಬರಿಗೆ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯುವಕರನ್ನು ಕೇರಳ ರಾಜ್ಯದ ಮೋಹನ್ ಮತ್ತು ದಾಸ್ ಎಂದು ಹೇಳಲಾಗಿದ್ದು, ಇವರಿಬ್ಬರು ನ್ಯಾನೋ ಕಾರಿನಲ್ಲಿ ಕೇರಳದಿಂದ ಗುಂಡ್ಲುಪೇಟೆಗೆ ಬಂದಿದ್ದರು.

ಸಂಜೆ ವೇಳೆಗೆ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟ ನಂತರ ಮನೆಗೆ ತೆರಳಲು ಬಸ್ಗಾಗಿ ಕಾಯುತ್ತಾ ನಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಈ ಯುವಕರಿಬ್ಬರು ಹುಡುಗಿಯರನ್ನು ಚುಡಾಯಿಸಿತೊಡಗಿದ್ದರು. ಅವರ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ತಮ್ಮ ಪಾಡಿಗೆ ಜಾಗ ಬಿಟ್ಟು ಹೋದರೂ ಅಲ್ಲಿಗೆ ತೆರಳಿ ತಮ್ಮ ಆಟಾಟೋಪ ಮುಂದುವರೆಸಿದ್ದರು.

ಇದನ್ನು ನೋಡಿದ ಸಾರ್ವಜನಿಕರು ಆ ಯುವಕರ ವರ್ತನೆಯಿಂದ ಆಕ್ರೋಶಿತರಾಗಿದ್ದರು. ಇದೇ ವೇಳೆಗೆ ಯುವಕರು ಯುವತಿಯರ ಬಳಿ ತಮ್ಮೊಂದಿಗೆ ಬರುವಂತೆ ಕರೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಕೋಪಗೊಂಡು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟರಲ್ಲೇ ಅಲ್ಲಿಗೆ ಧಾವಿಸಿದ ಸಾರ್ವಜನಿಕರು ಯುವಕರಿಗೆ ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ಕಾರು ಕೂಡ ಜಖಂಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications