Hogenakkal Falls: ಹೊಗೆನಕಲ್ ಜಲಪಾತದ ಕಡೆ ಪ್ರವಾಸ ಬೆಳೆಸುವ ಮುನ್ನ ಈ ಸುದ್ದಿ ಗಮನಿಸಿ
ಚಾಮರಾಜನಗರ, ಜುಲೈ, 19: ಮಳೆರಾಯನ ಆರ್ಭಟ ಮುಂದುವರೆದ ಪರಿಣಾಮ ಭಾರತದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಾದ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಅಪಾಯ ಮಟ್ಟದಲ್ಲಿ ನೀರು ಭೋರ್ಗರೆಯುತ್ತಿದೆ.
ಕಬಿನಿ ಹೊರಹರಿವು ಮತ್ತು ಜೋರು ಮಳೆಯಿಂದ ಹೊಗೆನಕಲ್ನಲ್ಲಿ ಕಾವೇರಿ ರೌದ್ರ ನರ್ತನ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ವನ್ಯಜೀವಿಧಾಮವು ಜುಲೈ 20ರಿಂದ ಹೊಗೆನಕಲ್ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.

ಈಗಾಗಲೇ ಕಬಿನಿಯಿಂದ 70,000 ಕ್ಯೂಸೆಕ್ ಹೊರ ಹರಿವಿ ಇದ್ದು, ಹೊಗೆನಕಲ್ನಲ್ಲಿ ಕಾವೇರಿ ರಭಸದಿಂದ ಹರಿಯುತ್ತಿದೆ. ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ನೀರಿನ ಹರಿವು ಕಡಿಮೆಯಾಗುವವರೆಗೂ ಹೊಗೆನಕಲ್ಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ತಾತ್ಕಾಲಿಕ ನಿರ್ಬಂಧ ಇದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೊಗೆನಕಲ್ ಆರ್ಎಫ್ಒ ಸಂಪತ್ ಪಟೇಲ್ ತಿಳಿಸಿದ್ದಾರೆ.
ಕರ್ನಾಟಕ, ತಮಿಳುನಾಡು ಎರಡೂ ರಾಜ್ಯದ ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ಕೊಡುವ ಜನಪ್ರಿಯ ಜಲಪಾತ ಇದಾಗಿದ್ದು, ಕಳೆದ 4 ದಿನದಿಂದ ತಮಿಳುನಾಡು ಭಾಗದಲ್ಲಿ ಬೋಟಿಂಗ್, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಜುಲೈ 20ರಿಂದ ಕರ್ನಾಟಕದ ಭಾಗದಲ್ಲೂ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ.
ವೀಕೆಂಡ್ ಟ್ರಿಪ್ ಪ್ಲಾನ್ ಮಾಡಿಕೊಂಡವರು ಗಮನಿಸಲೇಬೇಕು: ಕರ್ನಾಟಕ-ಕೇರಳ ಗಡಿಯಲ್ಲಿ ರಸ್ತೆಗಳು ಜೋರು ಮಳೆಯಿಂದಾಗಿ ಜಲಾವೃತವಾಗಿದ್ದು, ಬತ್ತೇರಿ, ವೈನಾಡಿಗೆ ತೆರಳಲು ಹರಸಾಹಸ ಪಡಬೇಕಿದೆ.
ಬಂಡೀಪುರಕ್ಕೆ ಹೊಂದಿಕೊಂಡಿರುವ ಕೇರಳ ರಸ್ತೆಗಳು ಮಳೆಗೆ ಜಲಾವೃತವಾಗಿದ್ದು ಲಾರಿ, ಟ್ರಕ್ ಹೊರತುಪಡಿಸಿ ಬೇರೆ ವಾಹನಗಳು ಚಲಿಸಲು ಕಷ್ಟಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ದಿನದಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಕೇರಳದ ಮುತ್ತಂಗ, ಸುಲ್ತಾನ್ ಬತ್ತೇರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ವೀಕೆಂಡ್ಗೆ ಕೇರಳಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದವರಿಗೆ ಮಳೆರಾಯ ಶಾಕ್ ನೀಡಿದ್ದು, ಗುಂಡ್ಲುಪೇಟೆ ಕಡೆಯಿಂದ ಕೇರಳಕ್ಕೆ ಹೋಗುವವರು ಎರಡು ಬಾರಿ ಯೋಚನೆ ಮಾಡಬೇಕಿದೆ.
ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ನಿಂದ 5 ಕಿಲೋ ಮೀಟರ್ ದೂರದಲ್ಲಿರುವ ಮುತ್ತಂಗವಿದ್ದು, ಅಲ್ಲಿಂದ ತೆರಳಲು ತೀರಾ ಪ್ರಯಾಸ ಪಡಬೇಕಿದೆ. ಇನ್ನು ಈ ಕುರಿತು ಮೂಲೆಹೊಳೆ ಆರ್ಎಫ್ಒ ನರೇಶ್ ಪ್ರತಿಕ್ರಿಯಿಸಿ, ಕೇರಳ ಭಾಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ, ನಮ್ಮ ಭಾಗದಲ್ಲಿ ತೊಂದರೆ ಇಲ್ಲಾ, ಮಳೆ ಹೆಚ್ಚಾದರೇ ಪೊಲೀಸ್ ಇಲಾಖೆ ವಾಹನಗಳಿಗೆ ನಿರ್ಬಂಧ ಹೇರಲಿದೆ ಎಂದು ತಿಳಿಸಿದರು.












Click it and Unblock the Notifications