ಬಂಡೀಪುರ ಅರಣ್ಯದಲ್ಲಿ ಎಲಿವೇಟೆಡ್ ರಸ್ತೆ ವಿರೋಧಿಸಿ ಪರಿಸರವಾದಿಗಳ ಹೋರಾಟ
ಬಂಡೀಪುರ, ಅಕ್ಟೋಬರ್ 27: ಬಂಡೀಪುರದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ವಿರೋಧಿ ಹೋರಾಟ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಬಂಡೀಪುರದಲ್ಲಿ ಮೇಲ್ಸೇತುವೆ ವಿರೋಧಿಸಿ ಸ್ಥಳೀಯರು ಹಾಗೂ ಪರಿಸರವಾದಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
ಬೆಳಗ್ಗೆ 11ರಿಂದ ಪ್ರತಿಭಟನೆ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೂ ನಡೆಯಲಿದೆ. ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ಮಾರ್ಗದ ಮದ್ದೂರು ಗೇಟ್ ಬಳಿ ನೂರಾರು ಮಂದಿ ನೆರೆದಿದ್ದು, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ನೈಟ್ ಟ್ರಾಫಿಕ್ ಬೇಡ ಎಂಬ ಸ್ಲೋಗನ್ ಅಡಿಯಲ್ಲಿ ಅಭಿಯಾನ ಆರಂಭವಾಗಿದೆ.
ಪರಿಸರವಾದಿಗಳ ಈ ಪ್ರತಿಭಟನೆಗೆ ರೈತ ಸಂಘ, ವಕೀಲರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮೈಸೂರು, ಕೊಡಗು, ಗುಂಡ್ಲುಪೇಟೆ, ಚಾಮರಾಜನಗರ ಜಿಲ್ಲೆಗಳ ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ರಸ್ತೆ ತಡೆ, ಘೋಷಣೆ ಸೇರಿದಂತೆ ಯಾವುದೇ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುವುದಿಲ್ಲ, ಕೇವಲ ರಸ್ತೆಯ ಅಕ್ಕಪಕ್ಕದಲ್ಲಿ ಪೋಸ್ಟರ್ ಮತ್ತು ಬ್ಯಾನರ್ ಹಿಡಿದು ಶಾಂತರೀತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಪರಿಸರವಾದಿಗಳು ತಿಳಿಸಿದ್ದಾರೆ.

ಬಂಡೀಪುರದಲ್ಲಿ ರಾತ್ರಿ ವೇಳೆ ತೊಂದರೆ, ಪರಿಸರ ವಾದಿಗಳ ಬೇಸರ
ಕರ್ನಾಟಕದ ಅರಣ್ಯ ಪ್ರದೇಶವಾದ ಬಂಡೀಪುರ ರಾಷ್ಟ್ರೀಯ ಉದ್ಯಾನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದು ಪರಿಸರ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಕಳೆದ 15 ವರ್ಷಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕರ್ನಾಟಕದಿಂದ ತಮಿಳುನಾಡು ಹಾಗೂ ಕೇರಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅನುಮತಿ ನೀಡಿರಲಿಲ್ಲ. ಈ ಪ್ರದೇಶದಲ್ಲಿ ಅವ್ಯಾಹತವಾಗಿರುವ ಕಾಡು ಪ್ರಾಣಿಗಳು, ಜಲಚರವನ್ನು ಸಂಪಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾತ್ರಿ ವೇಳೆ ಸಂಚಾರ ನಿಷೇಧಿಸಿ ಆದೇಶವನ್ನು ಹೊರಡಿಸಿತ್ತು.

ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ
ಬೆಂಗಳೂರಿನ ಗಗನಚುಂಬಿ ಕಟ್ಟಡಗಳ ಮಧ್ಯೆ ತಲೆ ಎತ್ತುತ್ತಿದ್ದ ಫ್ಲೈಓವರ್ಗಳು ಇನ್ನೂ ಕಾಡು ಪ್ರಾಣಿಗಳ ವಾಸಸ್ಥಾನವಾಗಿರುವ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲೂ ತಲೆ ಎತ್ತಲಿವೆ ಎಂಬ ಸಂಗತಿ ಪರಿಸರ ವಾದಿಗಳಲ್ಲಿ ಆತಂಕ ಮೂಡಿಸಿವೆ.
ಜುಲೈ 21ರಂದು ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಪತ್ರ ಒಂದನ್ನು ಬರೆದಿದ್ದು, ಕರ್ನಾಟಕ ಹಾಗೂ ಕೇರಳಾ ಮಧ್ಯೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗೆ ಸರಿಸುಮಾರು 35 ಕಿ.ಮೀ ಉದ್ದದ ಫ್ಲೈಓವರ್ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದೆ.

ಲಾಭಕ್ಕಾಗಿ ಪ್ರಾಣಿಗಳನ್ನು ಬಲಿಕೊಡುವುದು ಎಷ್ಟು ಸರಿ
ಜನರ ಲಾಭಕ್ಕಾಗಿ ಪ್ರಾಣಿಗಳನ್ನು ಬಲಿಕೊಡುವುದು ಎಷ್ಟು ಸರಿ, ರಾತ್ರಿ ವೇಳೆ ವಾಹನಗಳು ಚಲಿಸಿದರೆ ಪ್ರಾಣಿಗಳಿಗೆ ತೊಂದರೆ ಉಂಟಾಗುತ್ತದೆ ಆದರೆ ಕೇರಳ ಸರ್ಕಾರವು ರಾತ್ರಿ ವಾಹನ ಸಂಚಾರ ಬೇಕು ಎಂದು ಪಟ್ಟು ಹಿಡಿದಿದೆ. ಈಗಾಗಲೇ ಕಾಡಿನ ಮಧ್ಯ ರಸ್ತೆ ಹಾದುಹೋಗಿರುವುದರಿಂದ ಹಗಲಿನ ವೇಳೆಯಲ್ಲಿಯೂ ಅವುಗಳ ಮುಕ್ತ ಓಡಾಟಕ್ಕೆ ತೊಂದರೆಯುಂಟಾಗುತ್ತಿದೆ. ವಾಹನಗಳಿಗೆ ಸಿಲುಕಿ ಪ್ರಾಣಿಗಳು ಸಾಯುತ್ತಿರುವ ಘಟನೆಗಳು ಈಗಲೂ ವರದಿಯಾಗುತ್ತಿವೆ. ಹೀಗಿರುವಾಗ ರಾತ್ರಿ ಸಂಚಾರವನ್ನು ನಿಷೇಧಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ.

ರಾತ್ರಿ ವಾಹನ ಓಡಾಟ, ಅಕ್ರಮ ಚಟುವಟಿಕೆಗಳಿಗೆ ದಾರಿ
ಬಂಡೀಪುರಲ್ಲಿ ರಾತ್ರಿ ವಾಹನಗಳಿಗೆ ಅವಕಾಶ ನೀಡಿದರೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಜತೆಗೆ, ರಾತ್ರಿ ಮನುಷ್ಯರ ಮೇಲೆ ಪ್ರಾಣಿಗಳು ದಾಳಿ ಮಾಡುವ ಸಸಾಧ್ಯತೆ ಕೂಡ ಹೆಚ್ಚಿದೆ. ರಾತ್ರಿ ವಾಹನ ಪ್ರಯಾಣಕ್ಕೆ ಅವಕಾಶ ನೀಡಿದರೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತದೆ ಎನ್ನುವುದು ವನ್ಯಪ್ರಿಯರ ಕಳವಳ. ಮುಖ್ಯವಾಗಿ ಕೇರಳದ ಭಾಗದಿಂದ ಕಿಡಿಗೇಡಿಗಳು ಅರಣ್ಯದೊಳಗೆ ಪ್ರವೇಶಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಅವರ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಸುಲಭದ ಕೆಲಸವಲ್ಲ.












Click it and Unblock the Notifications