ಗಂಡು ಸಂತಾನಕ್ಕಾಗಿ ರಥಕ್ಕೆ ಹಣ್ಣು ಎಸೆದ ನವದಂಪತಿ
ಚಾಮರಾಜನಗರ, ಜುಲೈ 19 : ಚಾಮರಾಜನಗರದಲ್ಲಿ ಆಷಾಢ ಮಾಸದ ಪ್ರಸಿದ್ಧ ಚಾಮರಾಜೇಶ್ವರ ರಥೋತ್ಸವ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಚಾಮರಾಜೇಶ್ವರನಿಗೆ ಜಯಘೋಷ ಕೂಗಿ ಹಣ್ಣು-ಜವನ ಎಸೆದು ಸಂತೃಪ್ತರಾದರು.
ಪ್ರತಿ ವರ್ಷದಂತೆ ಆಷಾಢ ಮಾಸದ ಪೌರ್ಣಮಿಯಂದು ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ನಡೆಯುತ್ತೆ. ಅದೇ ರೀತಿಯಾಗಿ ಈ ಬಾರಿಯೂ ಮಂಗಳವಾರ ಅದ್ಧೂರಿಯಾಗಿ ಬ್ರಹ್ಮ ರಥೋತ್ಸವ ಜರುಗಿತು.

ಬೆಳಗ್ಗೆ ಕನ್ಯಾ ಲಗ್ನದಲ್ಲಿ ಚಾಮರಾಜೇಶ್ವರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಹರ್ಷೋದ್ಘಾರದೊಂದಿಗೆ ನವ ದಂಪತಿಗಳು ಹಣ್ಣು ಜವನ ಹಿಡಿದು, ಭಗವಂತನನ್ನು ಭಕ್ತಿಯಿಂದ ಸ್ಮರಿಸುತ್ತಾ ರಥಕ್ಕೆ ಹಣ್ಣು ಎಸೆದು ಪುನೀತಭಾವ ತಾಳಿದರು.
Read also : ಆಷಾಢದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವದ ಬಗ್ಗೆ ತಿಳಿಯಿರಿ
ಜೇಷ್ಠ ಮಾಸದಲ್ಲಿ ವಿವಾಹವಾದ ನವ ದಂಪತಿಗಳು ಆಷಾಢ ಮಾಸದ ಈ ರಥೋತ್ಸವದಲ್ಲಿ ಹಣ್ಣು ಜವನ ಎಸೆದು ಪ್ರಾರ್ಥಿಸಿದರೆ ಗಂಡು ಸಂತಾನ ಲಭಿಸುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಈ ಹಿನ್ನಲೆಯನ್ನು ಅರಿತಿರುವ ನವ ದಂಪತಿಗಳು ಚಾಮರಾಜೇಶ್ವರ ರಥೋತ್ಸವದಲ್ಲಿ ಬಂದು ದೇವರನ್ನು ಪ್ರಾರ್ಥಿಸುವುದುಂಟು.
Read also : 'ಹಾಳಾಗಿ ಹೋಗ್ತೀಯಾ' ಸಿಎಂಗೆ ಕೊಳ್ಳೇಗಾಲದ ವ್ಯಕ್ತಿಯಿಂದ ಶಾಪ
ರಥೋತ್ಸವ ಸಂದರ್ಭ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು. ಅಲ್ಲದೆ ದೇವಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು. ಯಾವುದೇ ರೀತಿಯ ಅಹಿತರ ಘಟನೆ ನಡೆಯದೆ ಶಾಂತಿಯಿಂದ ರಥೋತ್ಸವ ಯಶಸ್ವಿಯಾಗಿ ಜರುಗಿತು.












Click it and Unblock the Notifications