ಬಂಡೀಪುರದಲ್ಲಿ ಸುಸೂತ್ರ ಸಫಾರಿಗೆ ಹೀಗೊಂದು ಹೊಸ ಕ್ರಮ
ಚಾಮರಾಜನಗರ, ಫೆಬ್ರವರಿ 22: ಬಂಡೀಪುರದಲ್ಲಿ ಸಫಾರಿ ವೇಳೆ ಒಂದಲ್ಲ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಫಾರಿಯನ್ನು ಸುಸೂತ್ರವಾಗಿ ನಡೆಸಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಸಫಾರಿಗೆ ತೆರಳುವ ಪ್ರವಾಸಿಗರನ್ನು ಜತೆಜತೆಯಾಗಿ ವಾಹನಗಳು ಹೊತ್ತೊಯ್ಯುತ್ತವೆ. ಈ ವೇಳೆ ಪ್ರವಾಸಿಗರು ವನ್ಯ ಜೀವಿಗಳನ್ನು ನೋಡಿದಾಗ ಉತ್ಸಾಹದಿಂದ ಚೀರುವುದು, ಕೂಗಾಡುವುದು ಮಾಡುತ್ತಾರೆ. ಹೀಗೆ ಮಾಡಿದ ವೇಳೆ ಪ್ರಾಣಿಗಳು ಕೆರಳಿ ಸಫಾರಿ ವಾಹನದ ಮೇಲೆಯೇ ದಾಳಿ ನಡೆಸಲು ಮುಂದಾದ ಘಟನೆಗಳು ಈಗಾಗಲೇ ನಡೆದಿವೆ.
ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಕೆಲವೊಂದು ಮಾರ್ಪಾಡುಗಳನ್ನು ಸಫಾರಿಯಲ್ಲಿ ಮಾಡಲಾಗಿದೆ. ಇದೀಗ ಸಫಾರಿ ವಾಹನಗಳ ಒಂದು ವಾಹನಕ್ಕೂ ಮತ್ತೊಂದು ವಾಹನಕ್ಕೂ ಅಂತರ ಕಾಯ್ದು ಕೊಳ್ಳುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಚೀಫ್ ವೈಲ್ಡ್ ಲೈಫ್ ವಾರ್ಡನ್ ಅನುಪ್.ಕೆ.ನಾಯಕ್ ಎಲ್ಲಾ ಹುಲಿ ಸಂರಕ್ಷಿತ ಅರಣ್ಯಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಸುರಕ್ಷಿತ ಸಫಾರಿಗೆ ಕ್ರಮ ಕೈಗೊಂಡಿದ್ದಾರೆ.

ಸಫಾರಿಗೆ ತೆರಳುವ ವಾಹನಗಳು ವನ್ಯಪ್ರಾಣಿಗಳನ್ನು ನೋಡುವ ಉದ್ದೇಶದಿಂದ ನಾ ಮುಂದು ತಾ ಮುಂದು ಎಂದು ವಾಹನಗಳನ್ನು ಓಡಿಸುತ್ತಿರುತ್ತಾರೆ. ಇದರಿಂದ ಕೆಲವೊಮ್ಮೆ ಪ್ರಾಣಿಗಳು ಹೆದರಿ ಸಫಾರಿ ವಾಹನಗಳ ಮೇಲೆ ದಾಳಿ ಮಾಡುವ ಪರಿಸ್ಥಿತಿ ನಿರ್ಮಾಣವಾದ ನಿದರ್ಶನಗಳಿವೆ. ಇದೆಲ್ಲವನ್ನು ಗಮನಿಸಿದ ರಾಷ್ಟ್ರೀಯ ಹುಲಿ ಸಂರಕ್ಷಿತ ಅಧಿಕಾರಿಗಳು ನೂತನ ಕ್ರಮ ಜಾರಿ ಮಾಡಿದ್ದು, ಒಂದು ವಾಹನದಿಂದ ಮತ್ತೊಂದು ವಾಹನದ ನಡುವೆ 500 ಮೀಟರ್ ಅಂತರ ಕಾಯ್ದು ಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಸಫಾರಿಗೆ ತೆರಳುವಾಗ ಕೆಲವು ಚಾಲಕರು ಹುಲಿ ಕಾಣಿಸಿಕೊಂಡರೆ ಮತ್ತೊಂದು ವಾಹನ ಚಾಲಕರಿಗೆ ಫೋನ್ ಮಾಡಿ ಬರುವಂತೆ ತಿಳಿಸುತ್ತಾರೆ. ಇದರಿಂದ ವಾಹನಗಳ ಗುಂಪು ಹೆಚ್ಚಾಗಿ ವನ್ಯಜೀವಿಗಳಿಗೆ ಸಹಜವಾಗಿ ಕಿರಿಕಿರಿಯಾಗುತ್ತದೆ. ಇದರಿಂದ ಪ್ರಾಣಿಗಳು ಯಾವ ಸಮಯದಲ್ಲಿ ಯಾವ ರೀತಿಯ ಮಾನಸಿಕ ಸ್ಥಿತಿಯಲ್ಲಿರುತ್ತವೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ದಾಳಿಗೆ ಮುಂದಾಗುವ ಸಾಧ್ಯತೆಯಿರುತ್ತದೆ. ಮುಂದಿನ ದಿನಗಳಲ್ಲಿ ಈ ಕಾನೂನು ಜಾರಿಯಾಗಿ ಯಾವ ಮಟ್ಟಿಗೆ ಅದು ಅನುಷ್ಠಾನಗೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications