ಮೈಸೂರು ದಸರಾ; ಜಂಬೂ ಸವಾರಿಯಲ್ಲಿ ಚಾಮರಾಜನಗರದಿಂದ ಅಪ್ಪು ಸ್ತಬ್ಧಚಿತ್ರ
ಚಾಮರಾಜನಗರ, ಅಕ್ಟೋಬರ್, 05: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಗಡಿಜಿಲ್ಲೆ ಚಾಮರಾಜನಗರದಿಂದ ಅಪ್ಪು ಸ್ತಬ್ಧ ಚಿತ್ರವನ್ನು ರೂಪಿಸಲಾಗಿದೆ.
ಚೆಲುವ ಚಾಮರಾಜನಗರ ರಾಯಭಾರಿ ಹಾಗೂ ಚಾಮರಾಜನಗರದ ತವರಿನ ನಂಟು ಹೊಂದಿದ್ದ ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ಸ್ತಬ್ಧಚಿತ್ರದ ಮೂಲಕ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಅಪ್ಪು ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಂದಾಗಿದ್ದು, ಅಭಿಮಾನಿಗಳು ಅಪ್ಪು ತೇರು ಕಾಣಲು ಕಾತರರಾಗಿದ್ದಾರೆ. ಹನೂರಿನ ಕಲಾವಿದ ಮಹಾದೇವ್ ಎಂಬವರ ಜೊತೆ 15 ಜನರ ತಂಡ ಈ ಸ್ತಬ್ಧ ಚಿತ್ರ ತಯಾರಿಸಿದೆ. "ಪ್ರಕೃತಿ ಮಡಿಲಿನ ಹುಲಿ ಮತ್ತು ಆನೆ ಅರಣ್ಯ ಧಾಮ" ಎಂದು ಸ್ತಬ್ಧ ಚಿತ್ರಕ್ಕೆ ಹೆಸರಿಡಲಾಗಿದೆ. ಜಿಲ್ಲೆಯ ಪ್ರಕೃತಿ, ವನ್ಯಜೀವಿ ಸಂಪತ್ತು, ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಿದೆ.
ಗುಂಡ್ಲುಪೇಟೆಯಲ್ಲೊಂದು ಗೊಂಬೆ ಮನೆ; ವಿಶೇಷತೆ ಏನು? ಇಲ್ಲಿದೆ ಮಾಹಿತಿ
ಸ್ತಬ್ಧ ಚಿತ್ರ ವೀಕ್ಷಣೆಗೆ ನೆರೆಯಲಿರುವ ಜನಸಾಗರ
ಸ್ತಬ್ಧಚಿತ್ರದ ಮುಂಭಾಗ ದೊಡ್ಡ ಹುಲಿಯ ಮುಖ ಇದೆ. ಹಸಿರು ಆವರಿಸಿರುವ ಬೆಟ್ಟ, ಆನೆ ಸೇರಿದಂತೆ ಇತರ ಪ್ರಾಣಿಗಳ ಪ್ರತಿಕೃತಿಗಳು ಗಮನ ಸೆಳೆಯಲಿವೆ. ಮಧ್ಯದಲ್ಲಿ ಹುಲಿಯ ಮೇಲೆ ಕುಳಿತಿರುವ ಮಲೆ ಮಹದೇಶ್ವರ ಸ್ವಾಮಿಯ ಪ್ರತಿಕೃತಿ ಹಾಗೂ ಹಿಂಭಾಗದಲ್ಲಿ ಮಂದಸ್ಮಿತ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಪ್ರತಿಕೃತಿ ಅಳವಡಿಸಲಾಗಿದೆ.
ಇನ್ನು ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೆಲೆಸಿರುವ ಅಪ್ಪು ಸಿರಿಧಾನ್ಯದಲ್ಲಿ ಅರಳಿದ್ದರು. ಚಾಮರಾಜನಗರದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅಪ್ಪು ಜೊತೆ ಸಿರಿದಾನ್ಯಗಳಲ್ಲಿ ಅಪ್ಪು ಮೂಡಿಬಂದಿದ್ದು, ಎಲ್ಲರ ಗಮನ ಸೆಳೆದಿದ್ದರು. ಚಾಮರಾಜನಗರ ಜಿಲ್ಲಾ ದಸರಾದ ಪ್ರಯುಕ್ತ ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ನವರಾತ್ರಿ ಸಂಭ್ರಮಕ್ಕೆ ಪುನೀತ್ ರಾಜ್ಕುಮಾರ್ ಮತ್ತು ಮಹಾರಾಜ ಜಯಚಾಮರಾಜ ಒಡೆಯರ್ ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು.
ಫಲಪುಷ್ಪ ಪ್ರದರ್ಶನ, ನೆರೆದಿದ್ದ ಜನಸಾಗರ
13.5 ಲಕ್ಷ ರೂಪಾಯಿ ಅನುದಾನದಲ್ಲಿ 27ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ತಂಡೋಪತಂಡವಾಗಿ ಫಲಪುಷ್ಪ ಪ್ರದರ್ಶನವನ್ನು ನೋಡಲು ಆಗಮಿಸಿದ್ದರು. ಸೈಕಲ್, ಮ್ಯಾಂಗೋ ಸೇರಿದಂತೆ ವಿನೂತನವಾಗಿ ಮಾಡಿದ್ದ ಸೆಲ್ಫೀ ಪಾಯಿಂಟ್ಗಳಿಗೆ ಸರತಿ ಸಾಲಿನಲ್ಲಿ ನಿಂತಿದ್ದರು.
ಗಮನ ಸೆಳೆದ ಅಪ್ಪು, ಒಡೆಯರ್
ಸಿರಿಧಾನ್ಯದಲ್ಲಿ ನಟ ಡಾ.ಪುನೀತ್ ರಾಜ್ಕುಮಾರ್, ಜಯಚಾಮರಾಜ ಒಡೆಯರ್ ಅವರ ಆಕೃತಿಯನ್ನು ನಿರ್ಮಿಸಿದ್ದು, ಇದು ನೋಡುಗರನ್ನು ತನ್ನತ್ತ ಕೈಬಿಸಿ ಕರೆಯುವಂತಿತ್ತು. ಮತ್ತೊಂದೆಡೆ ಕಲ್ಲಂಗಡಿಗಳಲ್ಲಿ ಜನಪ್ರಿಯ ವ್ಯಕ್ತಿಗಳ ಚಿತ್ರಗಳು ಅರಳಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದವು. ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವಿಷ್ಣುವರ್ಧನ್, ಶಂಕರ್ ನಾಗ್ ಮತ್ತು ದರ್ಶನ್ ಚಿತ್ರಗಳು ಕಲ್ಲಂಗಡಿಯಲ್ಲಿ ಕಂಗೊಳಿಸಿದ್ದವು. ಇನ್ನು ಚಾಮರಾಜನಗರ ಜನರ ಆರಾಧ್ಯ ದೈವ, ಹಸಿರಿನ ಐಸಿರಿಯಲ್ಲಿ ನೆಲೆಸಿರುವ ಬಿಳಿಗಿರಿರಂಗನಾಥ ದೇವಾಲಯ ಹೂವುಗಳಲ್ಲಿ ಅರಳಿದ್ದು, ಭಕ್ತಿಭಾವ ಮೂಡಿಸುವಂತಿತ್ತು.
ದಸರಾ ವೈಭವವನ್ನು ಕಣ್ತುಂಬಿಕೊಂಡ ಜನರು
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಒಲವು ತೋರಲಾಗಿತ್ತು. ಪ್ರಗತಿಪರ ಕೃಷಿಕರು ಬೆಳೆದಿರುವ ವಿವಿಧ ಬೆಳೆಗಳ ಪ್ರದರ್ಶನ, ಮನೆಯ ಚಿಕ್ಕ ಖಾಲಿ ಜಾಗದಲ್ಲೂ ಗಾರ್ಡನ್ ಮಾಡುವ ಉಪಾಯಗಳು, ಟೆರೆಸ್ ಗಾರ್ಡನ್ ಉಪಯೋಗಗಳ ಬಗ್ಗೆ ಪ್ರತಿಕೃತಿ ಮೂಲಕ ತೋರಿಸಿ ಕೊಡಲಾಗಿತ್ತು. ಫಲಪುಷ್ಪ ಪ್ರದರ್ಶನದ ಸ್ಥಳದಲ್ಲಿ ತಿಂಡಿ ಪ್ರಿಯರಿಗೆ ಬಗೆ ಬಗೆಯ ಆಹಾರಗಳನ್ನು ತಯಾರಿಸಿದ್ದರು. ವಿವಿಧ ಜ್ಯೂಸ್ಗಳು, ಸಾವಯವ ತಿನಿಸುಗಳು, ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿರುವ ಆಹಾರ ಪದಾರ್ಥಗಳು ಬಾಯಲಿ ನೀರೂರಿವಂತಿದ್ದವು. ಒಟ್ಟಿನಲ್ಲಿ ಮೈಸೂರಿಗೆ ತೆರಳಿ ದಸರಾ ವೈಭವ ಕಾಣಲಾಗದವರು ಚಾಮರಾಜನಗರದಲ್ಲೇ ಮಿನಿ ದಸರಾ ವೈಭವವನ್ನು ಕಣ್ತುಂಬಿಕೊಂಡಿದ್ದರು. ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದ್ದವು.