ಚಾಮರಾಜನಗರ: ಬಿರುಗಾಳಿ ಮಳೆಗೆ ನೆಲಕಚ್ಚಿದ 3,000ಕ್ಕೂ ಹೆಚ್ಚು ಬಾಳೆ ಗಿಡಗಳು, ಅನ್ನದಾತ ಕಣ್ಣೀರು
ಚಾಮರಾಜನಗರ, ಮೇ, 11: ಇಂದು (ಮೇ 11) ಮಧ್ಯಾಹ್ನ ಸುರಿದ ಬಿರುಗಾಳಿ ಮಳೆಗೆ 3,000ಕ್ಕೂ ಹೆಚ್ಚು ಬಾಳೆಗಿಡಗಳು ನೆಲಕಚ್ಚಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಇಂದು (ಮೇ 11) ಮಟ ಮಟ ಮಧ್ಯಾಹ್ನವೇ ಸುರಿದ ಬಿರುಗಾಳಿ ಮಳೆಗೆ ಮೂರು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕಚ್ಚಿದ ಘಟನೆ ಚಾಮರಾಜನಗರ ತಾಲೂಕಿನ ಉತ್ತುಹಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನು ಬಾಳೆ ಬೆಳೆ ನಾಶವಾದ ಹಿನ್ನೆಲೆ ರವಿ ಎಂಬುವರು ಕಣ್ಣೀರಿಟ್ಟಿದ್ದಾರೆ.

ರೈತ ರವಿ ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದರು. ಇದೀಗ ಬಿರುಗಾಳಿ ಮಳೆಗೆ ಬಾಳೆಗಿಡಗಳು ನೆಲಕಚ್ಚಿದ ಹಿನ್ನೆಲೆ 6 ತಿಂಗಳ ಶ್ರಮ ಅರ್ಧ ತಾಸಿನಲ್ಲಿ ನಾಶವಾದಂತಾಗಿದೆ. ಈ ಮೂಲಕ ರೈತ ರವಿ ಕಂಡ ಕನಸ್ಸು ಗಾಳಿ ಮಳೆಯಲ್ಲಿ ಕೊಚ್ಚಿ ಹೋದಂತಾಗಿದೆ.
ಇನ್ನು ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಬೇಕು. ಹಾಗೂ ಈ ನಷ್ಟಕ್ಕೆ ಸ್ಪಂದಿಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಇನ್ನು ಈ ಬಾಳೆ ನಾಶದ ದೃಶ್ಯ ಡ್ರೋನ್ನಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಮಧ್ಯಾಹ್ನವೇ ಮಳೆರಾಯನ ಆರ್ಭಟ: ಇಷ್ಟು ದಿನ ಬಿಸಿಲಿನ ಬೇಗೆಗೆ ಬಸವಳಿದಿದ್ದ ಜಿಲ್ಲೆಗಳಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಹಾಗಯೇ ಎರಡು ದಿನ ಸಾಧಾರಣ ಮಳೆಯಾಗಿ ಬಿಡುವು ನೀಡಿದ್ದು, ಇದೀಗ ವರುಣ ಇಂದು (ಮೇ 11) ಮಧ್ಯಾಹ್ನ ಭರ್ಜರಿಯಾಗಿ ಎಂಟ್ರಿ ಕೊಟ್ಟು ಜಿಲ್ಲೆಯ ಹಲವೆಡೆ ತಂಪೆರೆದಿದ್ದಾನೆ.
ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ತಾಲೂಕಿನಾದ್ಯಂತ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಸಿಡಿಲು ಆರ್ಭಟದೊಂದಿಗೆ ಅಬ್ಬರದ ಮಳೆಯಾಗಿದ್ದು, ಇದರಿಂದ ಬಿಸಿಲಿನಿಂದ ಬಸವಳಿದಿದ್ದ ಜನರ ಮುಖದಲ್ಲಿ ಸಂತಸ ಮೂಡಿದಂತಾಗಿದೆ.
ಚಾಮರಾಜನಗರ, ಚಾಮರಾಜನಗರ ತಾಲೂಕಿನ ಹರದನಹಳ್ಳಿ, ಬ್ಯಾಡಮೂಡ್ಲು, ಹೆಬ್ಬಸೂರು, ಚಂದಕವಾಡಿ, ಮರಿಯಾಲ, ಕೆಲ್ಲಂಬಳ್ಳಿ ಸುತ್ತಮುತ್ತಾ ಭರ್ಜರಿ ಮಳೆಯಾಗಿದೆ. ಮತ್ತೊಂದೆಡೆ ಬಿರುಗಾಳಿ ರಭಸಕ್ಕೆ ಚಾಮರಾಜನಗರದ ಚಾಮರಾಜೇಶ್ವರ ಉದ್ಯಾನವನದ ಭುವನೇಶ್ವರಿ ವಿಗ್ರಹದ ಬಳಿ ಬೃಹತ್ ಗಾತ್ರ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್ ಈ ವೇಳೆ ಉದ್ಯಾನವನದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಹೆಬ್ಬಸೂರು, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಹೆಕ್ಟೇರ್ಗಟ್ಟಲೆ ಬಾಳೆ ಫಸಲು ನೆಲಕಚ್ಚಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications