Monsoon Rain: ಚಾಮರಾಜನಗರ ಜಿಲ್ಲೆಯ ಹಲವೆಡೆ ಭಾರೀ ಮಳೆ, ಅನ್ನದಾತನ ಮುಖದಲ್ಲಿ ಮಂದಹಾಸ
ಚಾಮರಾಜನಗರ, ಜೂನ್, 20: ಈಗಾಗಲೇ ಕರಾವಳಿ ಭಾಗದಲ್ಲಿ ಒಂದು ವಾರದಿಂದಲೂ ಮುಂಗಾರು ಚುಕುರುಕೊಂಡಿದೆ. ಹಾಗೆಯೆ ಇದೀಗ ಇನ್ನುಳಿದ ಜಿಲ್ಲೆಗಳಲ್ಲೂ ಕೂಡ ನಿಧಾನವಾಗಿ ಮುಂಗಾರು ಮಳೆ ಆರ್ಭಟವನ್ನು ಶುರು ಮಾಡಿದೆ. ಅದೇ ರೀತಿ ಮಂಗಳವಾರ (ಜೂನ್ 20) ಗಡಿ ಜಿಲ್ಲೆಯಾದ ಚಾಮರಾಜನಗರದ ಹಲವೆಡೆ ಭಾರೀ ಮಳೆಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಇಂದಿನಿಂದ ಮುಂಗಾರು ಚುರುಕುಗೊಂಡಿದ್ದು, ಕಾದ ಹಂಚಿನಂತಾಗಿದ್ದ ಭೂಮಿ ಇದೀಗ ಸದ್ಯ ತಂಪಾಗಿದೆ. ಕಳೆದ ಜೂನ್ 9ರಂದೇ ಚಾಮರಾಜನಗರ ಮೂಲಕ ರಾಜ್ಯ ಪ್ರವೇಶ ಮಾಡಿತ್ತು. ಆದರೆ ಮುಂಗಾರು ಬಿಪರ್ಜಾಯ್ ಚಂಡಮಾರುತದ ಪರಿಣಾಮ ಮುಂಗಾರು ಪ್ರವೇಶ ಮಾಡಿದ್ದರೂ ಚುರುಕುಗೊಂಡಿರಲಿಲ್ಲ.

ಆದರೆ ಇದೀಗ ಜಿಲ್ಲೆಯಲ್ಲು ಮುಂಗಾರು ಚುರುಕುಗೊಂಡಿದೆ. ಈಗಾಗಲೇ ಇಲ್ಲಿನ ಸಾಕಷ್ಟು ಬೆಳೆಗಳು ಒಣಗಿ ಹೋಗಿದ್ದು, ಬಹುಪಾಲು ಮಂದಿ ರೈತರಿಗೆ ಈ ಮಳೆ ಉಪಯೋಗ ಆಗಲ್ಲ ಎನ್ನಲಾಗುತ್ತಿದೆ. ಮತ್ತೊಂದೆಡೆ ಕೆಲವು ರೈತರು ಬೇಸಿಗೆ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಈ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆ
ಅಲ್ಲದೆ ಕಳೆದ ಎರಡು ವಾರಗಳಿಂದ ರಾಜ್ಯದ ಕರಾವಳಿ ಭಾಗದಲ್ಲಷ್ಟೇ ಮುಂಗಾರು ಮಳೆ ಆರ್ಭಟ ಹೆಚ್ಚಾಗಿತ್ತು. ಆದರೆ ಇದೀಗ ಹಲವು ಜಿಲ್ಲೆಗಳಲ್ಲಿ ಮುಂಗಾರು ಶುರುವಾಗಿದೆ. ಅದೇ ರೀತಿ ಮಂಗಳವಾರ (ಜೂನ್ 20) ಬೆಳಗ್ಗೆಯಿಂದಲೂ ಹಾಸನ ಮತ್ತು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಹಾಗಾದಾರೆ ಯಾವ ಭಾಗಗಳಲ್ಲಿ ಹೆಚ್ಚು ಮಳೆಯಾಗಿದೆ ಹಾಗೂ ಯಾವೆಲ್ಲ ಅನಾಹುತಗಳು ಸಂಭವಿಸಿವೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಚಿಕ್ಕಮಗಳೂರು ನಗರ, ಸಖರಾಯಪಟ್ಟಣ, ಉದ್ದೇಬೋರಹಳ್ಳಿಯಲ್ಲಿ ಕಳೆದೊಂದು ಗಂಟೆಯಿಂದಲೂ ಭಾರೀ ಮಳೆ ಸುರಿದಿದ್ದು, ಇಲ್ಲಿನ ರಸ್ತೆಗಳೆಲ್ಲ ಕೆರೆಯಂತಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರು ಮುಂದಕ್ಕೂ ಹೋಗದೆ, ಹಿಂದಕ್ಕೂ ಬಾರದೆ ನಡುರಸ್ತೆಯಲ್ಲೇ ಪರದಾಡಿದ ಘಟನೆಗಳು ನಡೆದಿವೆ. ಮತ್ತೊಂದೆಡೆ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಈ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಭಾರೀ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಹಾಗೆಯೇ ಹಾಸನ ಜಿಲ್ಲೆಯ ಹಲವೆಡೆ ಕಳೆದ 2 ಗಂಟೆಯಿಂದ ಭಾರೀ ಮಳೆಯಾಗಿದ್ದು, ಪರಿಣಾಮ ರಸ್ತೆಗಳೆಲ್ಲ ಕೆರೆಯಂತಾಗಿ ವಾಹನಗಳು ನೀರಲ್ಲಿ ಕೊಚ್ಚಿಕೊಂಡುಹೋದ ಘಟನೆಗಳು ನಡೆದಿವೆ. ಅಲ್ಲದೆ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕೂಡ ಪರದಾಡಿದ್ದಾರೆ. ಇನ್ನು ಕೆಲವು ಕಡೆ ಚರಂಡಿಗಳು ತುಂಬಿ ಹರಿಯುತ್ತಿದ್ದು, ಇದರಿಂದ ನಗರ ಪ್ರದೇಶದ ಸ್ಲಂಗಳಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಇಂದು ವರುಣನ ತಂಪೆರೆದಿದ್ದಾನೆ ಎನ್ನಲಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಈ ಬಾರಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ವಿಳಂಬವಾಗಿದ್ದು, ಇದರಿಂದ ಬೇಸಿಗೆಯಲ್ಲಿ ಬಿತ್ತನೆ ಮಾಡಿದ್ದ ಕೆಲವು ರೈತರು ಆತಂಕ್ಕೆ ಒಳಗಾಗಿದ್ದದು. ಮೊದಲು ಕೇರಳ ಪ್ರವೇಶಿಸಿ ನಂತರ ರಾಜ್ಯ ಕರಾವಳಿಯನ್ನು ವ್ಯಾಪಿಸಿದ ಮುಂಗಾರು ಈ ಪ್ರದೆಶಗಳಲ್ಲಿ ಜನ ಜೀವನವನ್ನೇ ತನ್ನ ಒಡಲೊಳಗೆ ಹಾಕಿಕೊಂಡಿಬಿಟ್ಟಿದೆ. ಇದೀಗ ಬಹುತೇಕ ಜಿಲ್ಲೆಗಳಿಗಳಿಗೂ ಸಹ ಇಂದಿನಿಂದ ಮುಂಗಾರು ಪ್ರವೇಶ ನೀಡಿದೆ. ಇದರಿಂದ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಮತ್ತೊಂದೆಡೆ ಒಂದೇ ದಿನದ ಅಬ್ಬರದ ಮಳೆಗೆ ಕೆಲವೆಡೆ ರಸ್ತೆಗಳು ಜಲಾವೃತವಾಗಿ ವಾಹನಗಳು ಮುಳುಗಿದ ಘಟನೆಗಳು ಸಹ ನಡೆದಿವೆ.












Click it and Unblock the Notifications