ಕಾಂಗ್ರೆಸ್ ಶಾಸಕರನ್ನು ಹೊಗಳಿದ ಸೋಮಣ್ಣ; ವೇದಿಕೆಯಲ್ಲಿ ಇತರ ಬಿಜೆಪಿಗರಿಗೆ ಸುಸ್ತೋಸುಸ್ತು
ಚಾಮರಾಜನಗರ, ಜೂ. 10: ಚುನಾವಣೆ ಪ್ರಚಾರದಲ್ಲಿ ವಿಪಕ್ಷಗಳನ್ನು ತೆಗಳಿ ಸ್ವಪಕ್ಷದ ಅಭಿವೃದ್ಧಿ ವಿಚಾರವನ್ನು ಹಾಡಿಹೊಗಳುವುದು ಸಾಮಾನ್ಯ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಕಾಂಗ್ರೆಸ್ ಶಾಸಕರನ್ನು ಹಾಡಿ ಹೊಗಳಿದ ಘಟನೆ ಗುರುವಾರ ಹನೂರಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ದಕ್ಷಿಣ ಪದವೀಧರ ಚುನಾವಣಾ ಸಂಬಂಧ ಗುರುವಾರ ಹನೂರು ತಾಲೂಕಿನ ರಾಮಾಪುರದಲ್ಲಿ ಸಚಿವ ಸೋಮಣ್ಣ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಶಾಸಕ ನರೇಂದ್ರ ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ, ಯಾವುದೇ ಸಣ್ಣ ಅಪಚಾರವಾಗದಂತೆ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಅದೇ ರೀತಿ ಚಾಮರಾಜನಗರ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಕೂಡ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.
ವಿ.ಸೋಮಣ್ಣ ಅವರ ವ್ಯತಿರಿಕ್ತ ಹೇಳಿಕೆಗೆ ವೇದಿಕೆ ಮೇಲೆ ಕುಳಿತಿದ್ದ ಬಿಜೆಪಿ ಮುಖಂಡರು ಇರಿಸು ಮುರಿಸಾಗಿದ್ದಾರೆ. ಬಿಜೆಪಿ ಟಿಕೆಟ್ ಅನ್ನು ಪಡೆಯಲೇಬೇಕೆಂದು ಕಳೆದ 3-4 ವರ್ಷಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಾ, ಹಾಲಿ ಶಾಸಕ ಬದಲಾದರಷ್ಟೇ ಅಭಿವೃದ್ಧಿ ಎನ್ನುತ್ತಿರುವ ವೆಂಕಟೇಶ್, ದತ್ತೇಶ್ ಹಾಗೂ ಪ್ರೀತಂ ನಾಗಪ್ಪ ಅವರು ಸಚಿವರ ಮಾತು ಕೇಳಿ ಸುಸ್ತು ಹೊಡೆದಿದ್ದಾರೆ.

(ಒನ್ಇಂಡಿಯಾ ಸುದ್ದಿ)

ನನಗೂ ಆತನಿಗೂ ಹೋಲಿಕೆ ಸರಿಯಲ್ಲ: ವಿ. ಸೋಮಣ್ಣ
ನನಗೆ 71 ಅವನಿಗೆ 46 ನಾನು 7 ಬಾರಿ ಎಂಎಲ್ಎ ಆಗಿದ್ದೀನಿ, ಆತ ಇನ್ನೂ ಒಂದು ಸಾರಿನೂ ಎಂಎಲ್ಎ ಆಗಿಲ್ಲ ಆತನಿಗೂ ನನಗೂ ಯಾಕೆ ಹೋಲಿಸುತ್ತೀರಾ ಎಂದು ಸಚಿವ ವಿ.ಸೋಮಣ್ಣ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು. ಚಾಮರಾಜನಗರದಲ್ಲಿ, ನೀವು ಹಾಗೂ ವಿಜಯೇಂದ್ರ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರನಿಗೆ ಟಾಂಗ್ ಕೊಟ್ಟು ಮೊದಲು ಎಂಎಲ್ಎ ಆಗಲಿ, ಈ ಪಕ್ಷದಲ್ಲಿ ದೇಶಕ್ಕೆ ಕೊಡುಗೆ ಪುಣ್ಯಾತ್ಮರು ಬಹಳಷ್ಟು ಮಂದಿ ಇದ್ದಾರೆ, ಪಕ್ಷಕ್ಕೆ ದುಡಿದವರಿದ್ದಾರೆ ಅವರ ಮುಂದೆ ನಾವು ಗೌಣ ಹಾಗೂ ನಿಮಿತ್ತ ಮಾತ್ರ ಎಂದು ವಿಜಯೇಂದ್ರಗೆ ಟಾಂಗ್ ಕೊಟ್ಟರು.

ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ
ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿ, ಎಲ್ಲವನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ, ಮೊದಲು 2023 ಮೇ ಬರಲಿ ಅದಾದ ನಂತರ ವಿಜಯೇಂದ್ರಗೆ ಟಿಕೆಟ್ ಕೊಡಬೇಕು, ಬಳಿಕ ಅವರು ಗೆದ್ದು ಬರಬೇಕು ಎನ್ನುವ ಮೂಲಕ ವಿಜಯೇಂದ್ರಗೆ ಟಿಕೆಟ್ ಕೊಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ವಾಗ್ದಾಳಿ ಮತ್ತು ಟೀಕೆಗೆ ಪ್ರತಿಕ್ರಿಯಿಸಿ
ಆರ್ ಎಸ್ಎಸ್ ವಿರುದ್ಧದ ವಾಗ್ದಾಳಿ ಮತ್ತು ಟೀಕೆಗೆ ಪ್ರತಿಕ್ರಿಯಿಸಿ, ಆರ್ ಎಸ್ ಎಸ್ ಸಂಘಟನೆಯ ದೇಶದ ದೊಡ್ಡ ಸಂಸ್ಥೆ, ತ್ಯಾಗದ ಭಾವನೆ, ದೇಶದ ಅಭಿವೃದ್ಧಿ, ದೂರದೃಷ್ಟಿಯ ಚಿಂತನೆ ಕೊಡುತ್ತಿರುವ ಸಂಸ್ಥೆ, ಎಲ್ಲಾ ವರ್ಗಕ್ಕೂ ಮಾನ್ಯತೆ ಕೊಟ್ಟು ವಿಭಿನ್ನವಾಗಿ ದೇಶದ ಪ್ರಗತಿಗೆ ಕಾರಣವಾಗಿ ಬೆಳೆಯುವ ದೊಡ್ಡ ಪೌಂಢೇಷನ್ ಹಾಕಿರುವ ಸಂಸ್ಥೆ ಬಗ್ಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು, ಅನಾವಶ್ಯಕವಾಗಿ ಟೀಕಿಸುವವರು ಇದರ ಬಗ್ಗೆ ಸ್ವಲ್ಪ ಅರಿಯಬೇಕು ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.

ದಕ್ಷಿಣ ಪದವೀಧರರ ಬಿಜೆಪಿ ಬೆಂಬಲಿತ
ಇದೇ ವೇಳೆ, ದಕ್ಷಿಣ ಪದವೀಧರರ ಬಿಜೆಪಿ ಬೆಂಬಲಿತ ಮೈ.ವಿ.ರವಿಶಂಕರ್ ಈ ಬಾರಿ ಚಿಂತಕರ ಚಾವಡಿಗೆ ಸೇರಲಿದ್ದಾರೆ, ಬಿಜೆಪಿ ಪರವಾದ ಅಲೆಯಿದ್ದು ಹೊಸ ಮತದಾರರು ಮೋದಿ ಕಾರ್ಯವನ್ನು ಮೆಚ್ಚಿದ್ದಾರೆ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications