ಹೊರಗಿನ ಅಭ್ಯರ್ಥಿ ಮೂದಲಿಕೆಗೆ ಸೋಮಣ್ಣ ಠಕ್ಕರ್ : ಚಾಮರಾಜನಗರ ಮತದಾರರ ಪಟ್ಟಿಗೆ ಸೇರ್ಪಡೆ
ಚಾಮರಾಜನಗರ, ಮೇ 08: ಸಚಿವ ವಿ.ಸೋಮಣ್ಣ ಕರ್ನಾಟಕ ವಿಧಾನಸಭಾ ಚುನಾವಣೆಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಚ್ಚರಿ ಅಭ್ಯರ್ಥಿಯಾಗಿದ್ದ, ಇದೀಗ ಜೊತೆಗೆ ಜಿಲ್ಲೆಯ ಮತದಾರರ ಪಟ್ಟಿಗೂ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿದ್ದ ವಿ.ಸೋಮಣ್ಣ ಚಾಮರಾಜನಗರ ಅಭ್ಯರ್ಥಿ ಆದ ಬಳಿಕ ಚಾಮರಾಜನಗರ ಮತದಾರರ ಪಟ್ಟಿಗೆ ತಮ್ಮ ಹೆಸರು ಹಾಗೂ ಪತ್ನಿ ಶೈಲಜಾ ಹೆಸರನ್ನು ಸೇರ್ಪಡೆ ಮಾಡಿದ್ದು, ಚುನಾವಣಾ ಆಯೋಗಕ್ಕೆ ಚಾಮರಾಜನಗರದ ಶಂಕನಪುರ ಬಡಾವಣೆಯ ಮನೆಯ ವಿಳಾಸ ನೀಡಿದ್ದಾರೆ.

ತಮ್ಮ ಪರವಾಗಿ ಮತ ಚಲಾಯಿಸಿಕೊಳ್ಳುವ ಜೊತೆಗೆ ಹೊರಗಿನ ಅಭ್ಯರ್ಥಿ ಎಂಬ ಎದುರಾಳಿಗಳ ಮೂದಲಿಕೆಗೆ ಸೋಮಣ್ಣ ಠಕ್ಕರ್ ಕೊಟ್ಟಿದ್ದು, ಮತದಾರರಿಗೆ ಚಾಮರಾಜನಗರದಲ್ಲೇ ಇರುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ.
ಚಾಮರಾಜನಗರ ಅಭ್ಯರ್ಥಿ ಆದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಲವಕಾಶ ಇದ್ದ ಹಿನ್ನೆಲೆಯಲ್ಲಿ ನಾನು ಹಾಗೂ ನನ್ನ ಶ್ರೀಮತಿ ಇಲ್ಲಿಗೆ ಮತದಾನವನ್ನು ವರ್ಗಾಯಿಸಿಕೊಂಡಿದ್ದೇನೆ, ನಾನಿದ್ದುದು ವಿಜಯನಗರ, ಕ್ಷೇತ್ರ ಗೋವಿಂದರಾಜನಗರ, ಬಿನ್ನಿಪೇಟೆ ಆಗಿತ್ತು. ನನ್ನ ಪರವಾಗಿ ನಾನು 3-4 ಬಾರಿಯಷ್ಟೇ ಮತ ಚಲಾಯಿಸಿಕೊಂಡಿರುವುದು. ಈ ಬಾರಿ ಚಾಮರಾಜನಗರದಲ್ಲಿ ಮತ ಚಲಾಯಿಸಿಸುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮಜಾರಾಮಯ್ಯ: ಸಂಸದ ಶ್ರೀನಿವಾಸ ಪ್ರಸಾದ್ ವಾಗ್ದಾಳಿ
ಚಾಮರಾಜನಗರ: ಸಿದ್ದರಾಮಯ್ಯಗೆ ಇನ್ನೂ ಅಧಿಕಾರ ಅಮಲು ಇಳಿದಿಲ್ಲ, ಅಧಿಕಾರ ಸಿಕ್ಕಿದರೇ ಮಜಾ ಮಾಡೋಣ ಎಂದುಕೊಂಡಿರುವ ಮಜಾರಾಮಯ್ಯ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದರು.

ಚಾಮರಾಜನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗ ಬರೀ ಮಜಾ ಮಾಡಿದರು. ಈಗ , ಮತ್ತೇ ನಾನು ಸಿಎಂ ಆಗುವೆ ಎನ್ನುತ್ತಿದ್ದಾರೆ. ಇವರು ಸಿಎಂ ಆಗಿ ಸೋಲಲಿಲ್ಲವೇ, ಇವರ ಆನೆ ಓಡಿಸುತ್ತಿದ್ದ ಎಚ್.ಸಿ.ಮಹಾದೇವಪ್ಪ ಸೋಲಲಿಲ್ಲವೇ ಎಂದು ಹರಿಹಾಯ್ದರು.
ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದು ನಾನು. ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿ ಸಿದ್ದರಾಮಯ್ಯ. ಪರಮೇಶ್ವರ್ ಸೋತಿದ್ದು- ಖರ್ಗೆ ದೆಹಲಿ ರಾಜಕಾರಣಕ್ಕೆ ಹೋಗಿದ್ದರಿಂದ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ಸಿಎಂ ಮಾಡಿದೆವು, ಆದರೆ, ನನ್ನನ್ನೇ ಸಂಪುಟದಿಂದ ತೆಗೆದು ಮನಸ್ಸಿಗೆ ದೊಡ್ಡ ಗಾಯ ಮಾಡಿದರು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಯಾವುದೇ ಹೋರಾಟ ಮಾಡದ ವ್ಯಕ್ತಿ, ಹೋರಾಟದ ಹಿನ್ನೆಲೆ ಇಲ್ಲದೇ ಅಧಿಕಾರ ಅನುಭವಿಸಿದವರು, 1980 ರಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ನಾನು ಗೆದ್ದಿದ್ದೇ ಸಿದ್ದರಾಮಯ್ಯ ಮೈಸೂರಲ್ಲಿ 8 ಸಾವಿರ ಮತ ಪಡೆದು ಸೋತಿದ್ದರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮಾತು ಮುಂದುವರಿಸಿದ ಅವರು, ಜೆಡಿಎಸ್ನವರು ಪಂಚರತ್ನ ಕಾರ್ಯಕ್ರಮ ಎನ್ನುತ್ತಿದ್ದಾರೆ. ಆದರೆ ಅದು ಪಂಚರತ್ನವಲ್ಲ ಅವರು ಕುಟುಂಬಸ್ಥರು ಇರುವ ಅಷ್ಟರತ್ನ ಕಾರ್ಯಕ್ರಮ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿ ನವರತ್ನ ಆಗಿದೆ. ಯಾವುದೇ ಚುನಾವಣೆ ಬಂದರೂ ಮನೆಯವರಿಗೇ ಎನ್ನುತ್ತಾರೆ. ಜೆಡಿಎಸ್ ಬಗ್ಗೆ ಮಾತನಾಡುವುದು ವ್ಯರ್ಥ ಎಂದು ಲೇವಡಿ ಮಾಡಿದರು.
ಬಸವರಾಜ ಬೊಮ್ಮಾಯಿ ಅತ್ಯದ್ಭುತವಾಗಿ ಸರ್ಕಾರ ಮಾಡಿದ್ದಾರೆ. ಸೋಮಣ್ಣ ಸೇರಿದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಈ ಬಾರಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications