ಕೋವಿಡ್ಗೆ ಪೋಷಕರು ಬಲಿ; ವರ್ಷಾ ಭೇಟಿಯಾದ ಸಚಿವೆ
ಚಾಮರಾಜನಗರ, ಜೂನ್ 20; ಕೋವಿಡ್ನಿಂದ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡ ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿಯ 5 ವರ್ಷದ ವರ್ಷಾ ಮತ್ತು ಆಕೆಯ ದತ್ತು ಪಡೆದ ಪಾಲಕರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ಮಾಡಿದರು.
ಸಚಿವರು ಶನಿವಾರ ವರ್ಷಾ ಭೇಟಿ ಮಾಡಿ ಸಾಂತ್ವನ ಹೇಳಿದರು. ವರ್ಷಾಳ ಪರಿಸ್ಥಿತಿ, ಆಕೆಯನ್ನು ದತ್ತು ಪಡೆದುಕೊಂಡ ಚಿಕ್ಕಮ್ಮ ರಶ್ಮಿ, ಚಿಕ್ಕಪ್ಪ ಮಹದೇವಸ್ವಾಮಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಕಂಡು ಸಚಿವೆ ಭಾವುಕರಾದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು ಬಾಲಕಿಯ ಪರಿಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸಿದರು. ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ವರ್ಷಾಗೆ ಕೊಡಿಸುವುದಾಗಿ ಸಚಿವರು ಮಹದೇವಸ್ವಾಮಿ ದಂಪತಿಗೆ ಭರವಸೆ ನೀಡಿದರು. ಎಲ್ಲ ಸೌಲಭ್ಯಗಳನ್ನು ನೀಡಲು ಕ್ರಮ ವಹಿಸುವುದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೂ ಸೂಚಿಸಿದರು.

ಸಚಿವರನ್ನು ಬಾಲಕಿ ವರ್ಷಾ ಗುಲಾಬಿ ಹೂ ನೀಡಿ ಸ್ವಾಗತಿಸಿದಳು. ವರ್ಷಾ ಜೊತೆ ಸ್ವಲ್ಪ ಹೊತ್ತು ಸಚಿವರು ಮಾತುಕತೆ ನಡೆಸಿದರು. "ಮುಂದೆ ಏನಾಗುತ್ತೀಯಾ?" ಎಂದು ಸಚಿವೆ ಕೇಳಿದಾಗ "ಡಿಸಿ ಆಗ್ಬೇಕು" ಎಂದು ವರ್ಷಾ ತಟ್ಟನೆ ಉತ್ತರಿಸಿದಳು. ಇದಕ್ಕೆ ಮನಸೋತ ಜೊಲ್ಲೆ ತಮ್ಮೊಂದಿಗೆ ಬರಲು ಹೇಳಿದಾಗ ಬಾಲಕಿ ನಿರಾಕರಿಸಿದಳು.
ಮಹದೇವಸ್ವಾಮಿ ಅವರದ್ದು ಬಡ ಕುಟುಂಬದವಾಗಿದ್ದು, ವೈಯಕ್ತಿಕವಾಗಿ ಸಹಾಯ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸಚಿವರ ಜೊತೆಯಲ್ಲಿದ್ದ ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್ ಅವರು ಸ್ಪಂದಿಸಿ ಮಗುವಿಗೆ 50 ಸಾವಿರ ನೀಡುವುದಾಗಿ ಭರವಸೆ ನೀಡಿದರು.
ಬಳಿಕ ಸಚಿವರು ಕೂಡ ನಮ್ಮ ಸಂಸ್ಥೆಯ ವತಿಯಿಂದಲೂ ಅಗತ್ಯ ಸಹಾಯ ಮಾಡಲಾಗುವುದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು ಇತರರು ಇದ್ದರು.
ಕಳೆದ ತಿಂಗಳು ಕೋವಿಡ್ ಪೀಡಿತರಾಗಿದ್ದ ವರ್ಷಾ ತಂದೆ ಗುರು ಪ್ರಸಾದ್ (35), ತಾಯಿ ರಶ್ಮಿ (27) ಇಬ್ಬರನ್ನೂ ಬಾಲಕಿ 4 ದಿನಗಳ ಅಂತರದಲ್ಲಿ ಕಳೆದುಕೊಂಡಿದ್ದಳು. ಬಳಿಕ ಬಾಲಕಿ ಚಿಕ್ಕಮ್ಮ ಆಕೆಯನ್ನು ದುತ್ತು ಪಡೆದಿದ್ದಾರೆ.












Click it and Unblock the Notifications