ಹುಲಿದಾಳಿ: ಪ್ರಾಣಾಪಾಯದಿಂದ ಪಾರಾಗಿ ಬಂದ ರೈತ
ಚಾಮರಾಜನಗರ, ಜುಲೈ 24: ಹುಲಿ ದಾಳಿಗೆ ಸಿಲುಕಿ ರೈತನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಕಾಂಡಂಚಿನ ಗ್ರಾಮ ಅರೇಪಾಳ್ಯದ ಬಳಿ ಜುಲೈ 23 ರಂದು ಜರುಗಿದೆ.
ಅರೇಪಾಳ್ಯದ ನಿವಾಸಿ, ರೈತ ರೇವಣ್ಣೇಗೌಡ(55) ಎಂಬಾತನೇ ಹುಲಿ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಸಾವಿನ ದವಡೆಯಿಂದ ಪಾರಾಗಿ ಬಂದ ಬಂದವನು.
ಭೀಮನ ಅಮಾವಾಸ್ಯೆ ಹಿನ್ನಲೆ ಅರೇಪಾಳ್ಯದ ಗ್ರಾಮದ ಸಮೀಪವಿರುವ ಮಹದೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿ ಗ್ರಾಮಕ್ಕೆ ವಾಪಸ್ಸು ಹಿಂತಿರುಗುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ನಿರ್ಮಿಸಿರುವ ನೀರಿನ ತೊಟ್ಟಿಯ ಬಳಿ ನೀರಿಗಾಗಿ ತೆರಳಿದ ರೇವಣ್ಣೇಗೌಡನ ಮೇಲೆ, ಕಾಡಿನಿಂದ ಆಹಾರ ಅರಸುತ್ತ್ತಾ ಬಂದಿದ್ದ ಹುಲಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ಕೊಡಗಿನ ಪುಂಡಾನೆಯನ್ನು ಬಂಡೀಪುರ ಸೇರಿಸಿದ ಅರಣ್ಯ ಇಲಾಖೆ
ಹುಲಿ ದಾಳಿಗೆ ಸಿಲುಕಿದ ರೇವಣ್ಣೇಗೌಡ ಕಿರುಚಾಡಿದ್ದು, ದೇವಾಲಯಕ್ಕೆ ತೆರಳುತ್ತಿದ್ದ ಜನರು ಶಬ್ದ ಕೇಳಿ ಅತ್ತ ಓಡಿ ಬಂದು ಕಲ್ಲು ಹೊಡೆದು ಹುಲಿಯನ್ನು ಓಡಿಸಿ ರೇವಣ್ಣೇಗೌಡನನ್ನು ಪ್ರಾಣಾಪಾಯದಿಂದ ಪಾರು ಮಾಡಿ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಹುಲಿ ದಾಳಿಯಿಂದಾಗಿ ರೇವಣ್ಣೇಗೌಡನಿಗೆ ಮುಖ, ತಲೆ ಹಾಗೂ ಕಾಲು, ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೋಲಾರ್ ಬೇಲಿಗೆ ಆಗ್ರಹ: ಕಾಡು ಪ್ರಾಣಿಗಳು ನಾಡಿಗೆ ಬರಲು ಈ ಹಿಂದೆ ಕಾಂಡಂಚಿನಲ್ಲಿ ಆಳವಡಿಸಿದ್ದ ಸೋಲಾರ್ ಕೆಟ್ಟು ನಿಂತಿರುವುದೇ ಕಾರಣವಾಗಿದ್ದು, ಕೂಡಲೇ ಸೋಲಾರ್ ಬೇಲಿಯನ್ನು ದುರಸ್ತಿ ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಭಯ ಆರಂಭವಾಗಿದ್ದು, ಹುಲಿ ದಾಳಿಯ ಎರಡನೇ ಪ್ರಕರಣ ಇದಾಗಿದೆ. ಗಾಯಗೊಂಡ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಜೊತೆಗೆ ಕಾಂಡಂಚಿನಲ್ಲಿ ಸೋಲಾರ್ ಸರಿಪಡಿಸಬೇಕು ಎಂದು ಅರೇಪಾಳ್ಯದ ಗ್ರಾ.ಪಂ ಸದಸ್ಯ ಸಿದ್ದೇಗೌಡ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.