ಚಾಮರಾಜನಗರ: ಐವರನ್ನು ಹತ್ಯೆಗೈದ ಹಂತಕನಿಗೆ ಗಲ್ಲು ಖಾಯಂ
ಚಾಮರಾಜನಗರ, ಅಕ್ಟೋಬರ್ 26 : ಐವರನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ಮುರುಗೇಶ್ ಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹಿನ್ನಲೆಯಲ್ಲಿ ಹಂತಕನಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ.
ಚಾಮರಾಜನಗರ: ಐವರನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ!
ಹಂತಕ ಮುರುಗೇಶ್ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದ ತೋಟದ ಮನೆಯಲ್ಲಿ 2015 ಮೇ 11ರ ನಡುರಾತ್ರಿ ಐವರನ್ನು ಅಮಾನುಷವಾಗಿ ಕೊಚ್ಚಿ ಕೊಂದು ಪರಾರಿಯಾಗಿದ್ದನು.
ಈ ಪ್ರಕರಣದ ತಮಿಖೆ ಆರಂಭಿಸಿದ್ದ ಪೊಲೀಸರು ಹರಳೆ ಗ್ರಾಮದ ತೋಟದ ಮನೆಯಲ್ಲಿ ನಡೆದ ಹತ್ಯಾಕಾಂಡದ ಪ್ರಮುಖ ಆರೋಪಿಯಾಗಿದ್ದ ಮುರುಗೇಶನ್ ನನ್ನು ಘಟನೆ ನಡೆದ 24 ಗಂಟೆಗಳಲ್ಲಿ ಬಂಧಿಸಿದ್ದರು.
ಎರಡು ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಚಾಮರಾಜನಗರ ಜಿಲ್ಲಾ ನ್ಯಾಯಾಯಲಯದ ನ್ಯಾಯಾಧೀಶರಾದ ಲಕ್ಷ್ಮಣ್ ಮಳವಳಿರವರು ಹತ್ಯಾಕಾಂಡದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದರು.
ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನೀಡಿದ ತೀರ್ಪಿನ ವಿರುದ್ಧ ಆರೋಪಿ ಮುರುಗೇಶನ್ ಮೇಲ್ಮನವಿಯನ್ನು ಹೈಕೋರ್ಟ್ ಗೆ ತಮಿಳುನಾಡಿನ ವಕೀಲರ ಮೂಲಕ ಸಲ್ಲಿಸಿದ್ದನು.
ಮುರುಗೇಶನ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜಿಲ್ಲಾ ನ್ಯಾಯಾಲಯ ನೀಡಿದ ಗಲ್ಲು ಶಿಕ್ಷೆ ತೀರ್ಪನ್ನು ಖಾಯಂಗೊಳಿಸಿ ಆದೇಶ ನೀಡಿದ್ದಲ್ಲದೆ, ಆರೋಪಿ ಮುರುಗೇಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.