Good News: ಮಲೆ ಮಾದಪ್ಪನ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಶುಭ ಸುದ್ದಿ
ಚಾಮರಾಜನಗರ, ಅಕ್ಟೋಬರ್, 2: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಪರಿಸರ, ವನ್ಯಜೀವಿ ಸಂರಕ್ಷಣೆ ಇಲಾಖೆ ಶುಭಸುದ್ದಿಯೊಂದನ್ನು ನೀಡಿದೆ. ಹಾಗಾದರೆ ಆ ಶುಭಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ವನ್ಯ ಪ್ರಾಣಿಗಳ ವೀಕ್ಷಣೆಗಾಗಿ ಉಡುತೊರೆ ಹಳ್ಳ ಜಲಾಶಯ ಕಡೆಯಿಂದ ಅಕ್ಟೋಬರ್ 2ರಿಂದ ಸಫಾರಿ ನಡೆಸಲಾಗುತ್ತಿದೆ. ವನ್ಯಜೀವಿ ಪ್ರಿಯರು ಮತ್ತು ಭಕ್ತರು ಈ ಸಫಾರಿ ಅವಕಾಶ ಸದ್ಬಳಕೆ ಮಾಡಿಕೊಳ್ಳುವಂತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಡಾ.ಸಂತೋಷ್ ಕುಮಾರ್ ಮನವಿ ಮಾಡಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಿಜಿ ಪಾಳ್ಯ ಸಫಾರಿಯನ್ನು ಲೊಕ್ಕನಹಳ್ಳಿಯಲ್ಲಿ ಕಳೆದ ಡಿಸೆಂಬರ್ 2ರಂದು ಪ್ರಾರಂಭ ಮಾಡಲಾಗಿತ್ತು. ಸಫಾರಿ ಕೇಂದ್ರಕ್ಕೆ ಬರುವ ವನ್ಯಜೀವಿ ಪ್ರಿಯರನ್ನು 18 ಕಿಲೋ ಮೀಟರ್ನಷ್ಟು ಸಂಚರಿಸಿ ವಾಪಸ್ ಬರಲಾಗುತ್ತಿದೆ. ಸಫಾರಿ ಕೇಂದ್ರಕ್ಕೆ ಬಂದತಹ ಪ್ರವಾಸಿಗರಿಗೆ ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ತೋಳ, ನರಿ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಕಂಡುಬಂದಿವೆ. ಇದುವರೆಗೂ ಸುಮಾರು 3,000ಕ್ಕೂ ಹೆಚ್ಚು ಪ್ರವಾಸಿಗರು, 400ಕ್ಕೂ ಎಷ್ಟು ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಕೃತಿಯನ್ನು ಆನಂದಿಸಿ ಉತ್ತಮ ಸ್ಪಂದನೆ ನೀಡಿದ್ದಾರೆ.
ಈ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಪ್ರವಾಸಿಗರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಡುಕರೆ ಜಲಾಶಯದ ಅರಣ್ಯ ಪ್ರದೇಶದ ಕಡೆಯಿಂದ ಪಿಜಿ ಪಾಳ್ಯ ವನ್ಯಜೀವಿ ವಲಯ ಲೋಕನಹಳ್ಳಿಯವರೆಗೆ ಸಫಾರಿ ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರನ್ನು ಅನುಮತಿ ಕೋರಲಾಗಿತ್ತು. ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಫಾರಿಯು ಯಶಸ್ವಿಯಾಗಿರುವುದರಿಂದ ಉಡುತೊರೆ ಹಳ್ಳ ಜಲಾಶಯದ ಅರಣ್ಯ ಪ್ರದೇಶದ ಸಫಾರಿಗೆ ಅನುಮತಿಯನ್ನು ನೀಡಲಾಗಿದೆ.
ಅಕ್ಟೋಬರ್ 2ರಿಂದ ಅಂದರೆ, ಇಂದಿನಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾವೇರಿ ನೀರಾವರಿ ನಿಗಮ ನಿಯಮಿತ, ಕಬಿನಿ ವಿಭಾಗ ನಂ 4 ರವರ ಕಚೇರಿ ಮುಂಭಾಗ ಅಜ್ಜೀಪುರ ಗ್ರಾಮದಿಂದ ಪ್ರಾರಂಭ ಆಗಲಿದೆ. ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 3ರಿಂದ 6 ಗಂಟೆಯವರೆಗೆ ಸಫಾರಿ ಇರಲಿದೆ. ಸಫಾರಿ ಶುಲ್ಕ ವಯಸ್ಕರಿಗೆ 400 ರೂಪಾಯಿ, ಮಕ್ಕಳಿಗೆ 200 ರೂಪಾಯಿ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9481995505,9481995515,9481995536 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಬೆಳಗ್ಗೆಯಿಂದಲೇ ವಿಶೇಷ ಸೇವೆ ಉತ್ಸವಾದಿಗಳು ಜರುಗುತ್ತಿದ್ದು, ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷ ದಾಸೋಹ, ಅತಿಥಿ ಗಣ್ಯರಿಗೆ ನೇರದರ್ಶನ, ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕ್ಯೂ ಲೈನ್ ಮಾಡಲಾಗಿದೆ.
ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಬೆಂಗಳೂರು, ರಾಮನಗರ, ಕನಕಪುರ, ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಕೋಲಾರ, ಶಿವಮೊಗ್ಗ ತಮಿಳುನಾಡು ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಯಾವುದೇ ಅನಾನುಕೂಲ ಆಗದಂತೆ ಪ್ರಾಧಿಕಾರದ ವತಿಯಿಂದ ಈಗಾಗಲೇ ಸೂಕ್ತ ಕ್ರಮ ವಹಿಸಲಾಗಿದೆ.
ಶ್ರೀ ಕ್ಷೇತ್ರಕ್ಕೆ ಬಂದ ಲಕ್ಷಾಂತರ ಭಕ್ತಾದಿಗಳಿಗೆ, ಪೊಲೀಸ್ ಸಿಬ್ಬಂದಿಗಳು ಗೃಹರಕ್ಷಕ ದಳದವರು ಅಧಿಕಾರಿ ವರ್ಗದವರಿಗೆ ವಿಶೇಷ ದಾಸೋಹ ತೆರೆಯಲಾಗಿದೆ. ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ನೇರದರ್ಶನ ಅವಕಾಶ ಮಾಡಿಕೊಡುವಂತೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಆಲಂಬಾಡಿ ಬಸವ ದ್ವಾರದಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿಥಿ ಗಣ್ಯರು ಅಂಗವಿಕಲರಿಗೆ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಿ ದರ್ಶನ ಪಡೆಯುತ್ತಿದ್ದಾರೆ.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದಿರುವ ಭಕ್ತಾದಿಗಳು ಲಡ್ಡು ಪ್ರಸಾದಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಈಗಾಗಲೇ ಪ್ರಾಧಿಕಾರದ ವತಿಯಿಂದ 2,00,000 ಲಾಡು ತಯಾರಿಸಲಾಗಿದೆ. ಕಳೆದ ಮೂರು ದಿನಗಳಿಂದಲೂ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವುದರಿಂದ ಬೆಂಗಳೂರು, ಮೈಸೂರು, ಕೊಳ್ಳೇಗಾಲ, ಮಂಡ್ಯ, ನಂಜನಗೂಡು ಸೇರಿದಂತೆ ಇನ್ನಿತರ ಡಿಪೋಗಳಿಂದ 300ಕ್ಕೂ ಅಧಿಕ ಬಸ್ಗಳು ಕಾರ್ಯಾಚರಣೆ ನಡೆಸಲಾಗುತ್ತಿದೆ.












Click it and Unblock the Notifications